ಲೇಖಕ ಆರ್.ಕೆ. ಕುಲಕರ್ಣಿ ಅವರ ಅನುವಾದಿತ ಕೃತಿ ʻದರ್ಶನ ದೀಪಿಕೆʼ. ಏ.ಈ. ಅಥವಾ ಜಾರ್ಜ್ ವಿಲಿಯಂ ರಸೆಲ್ ಅವರು ಮೂಲ ಕೃತಿಯ ಲೇಖಕ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ರಾಗಂ (ರಾಜಶೇಖರ ಮಠಪತಿ) ಅವರು, “ಭೌತ ಜಗತ್ತಿನ ಆಚೆಯೂ ಒಂದು ಬದುಕಿದೆ, ಬೆಳಕಿದೆ ಎಂಬುದನ್ನು ವಿವರಿಸಲು ಯತ್ನಿಸಿದ ಅನೇಕ ಪಾಶ್ಚಾತ್ಯ ಮಹನೀಯರಲ್ಲಿ ಒಬ್ಬ ಏ.ಈ. ಇವನ ಬರಹದ ಗತಿ ಮತ್ತು ಮಿತಿಗಳೆರಡೂ ಈತನ ಸಮಕಾಲೀನ ಸಾಹಿತ್ಯಕ ಮಾನದಂಡಗಳ ವ್ಯಾಪ್ತಿಗೆ ಒಳಪಡಲಿಲ್ಲ. ಈ ಕಾರಣ ಈತ ಭಿನ್ನವಾದ, ಅನ್ಯನಾದ. ಇಡೀ ಯುರೋಪಿಯನ್ ಸಾಹಿತ್ಯ, ಲೌಕಿಕ ಸಂವೇದನೆಗಳ ಸಂಭ್ರಮದಲ್ಲಿದ್ದಾಗ ಏ.ಈ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದು ಆತ್ಮಶೋಧದ, ದರ್ಶನದ ದಾರಿಯಲ್ಲಿ. ಆದರೆ, ಈ ದಾರಿ ಲೋಕಸಹಜವಾಗಿರಲಿಲ್ಲ, ಅಲ್ಲಿಯ ಲೇಖಕರ ಹಸಿವಾಗಿರಲಿಲ್ಲ. ಆದರೆ ಶೋಧಕ್ಕೆ ಸೀಮೆಗಳಿಲ್ಲ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಏ.ಈ.ಯನ್ನು ದಕ್ಕಿಸಿಕೊಂಡವರು ಪೂರ್ವ ಜಗತ್ತಿನ ಜಿಜ್ಞಾಸುಗಳು, ಅವರಲ್ಲಿ ಪ್ರಮುಖರು ಧಾರವಾಡ ಮತ್ತು ಹಲಸಂಗಿ ಗೆಳೆಯರ ಬಳಗದ ಬರಹಗಾರರು. ಪಶ್ಚಿಮದ ಏ.ಈ. ಪೌರ್ವಾತ್ಯ ನಾಡಿನ ಆತ್ಯಶೋಧಕರ ಪಾಲಿಗೆ ಕರುಣಾಳು ಬೆಳಕಾಗಿ ದಕ್ಕಿದ ಪರಿಯನ್ನು ವಿವರಿಸುವುದೇ ಡಾ. ಆರ್. ಕೆ. ಕುಲಕರ್ಣಿಯವರ ಪ್ರಸ್ತುತ ಕೃತಿ 'ದರ್ಶನ ದೀಪಿಕೆ'ಯ ಉದ್ದೇಶ. ಈ ಅರ್ಥದಲ್ಲಿ ಇದು 'ಸಮುದ್ರದ ನೀರು, ಬೆಟ್ಟದ ನೆಲ್ಲಿಕಾಯಿ'ಗಳ ಮಧ್ಯದ ಸಾಮರಸ್ಯಕ್ಕೊಂದು ಸಾಕ್ಷಿ” ಎಂದು ಹೇಳಿದ್ದಾರೆ.
©2023 Book Brahma Private Limited.