
`ನಾನು ಮೆಚ್ಚಿದ ಕಥೆ ಸಂಪುಟ-03' ರಾಜ್ಯದ ವಿವಿಧೆಡೆಯ ಲೇಖಕರ ಕಥೆಗಳ ಸಂಗ್ರಹ ಕೃತಿ. ಲೇಖಕರಾದ ಎಸ್. ರಘುನಾಥ ಹಾಗೂ ಆರ್. ವಿಜಯರಾಘವನ್ ಸಂಪಾದಿಸಿದ್ದಾರೆ. ಒಟ್ಟು 41 ಲೇಖಕರ ಕಥೆಗಳಿವೆ. ಕನ್ನಡ ಆಧುನಿಕ ಹಾಗೂ ಆಧುನಿಕ ಪೂರ್ವ ಕಥಾ ಪರಂಪರೆ ಹಾಗೂ ಕಥನ ಸಂಸ್ಕಾರಗಳನ್ನು ಕಥೆಗಾರರು ಮೈಗೂಡಿಸಿಕೊಂಡಿದ್ದಾರೆ. ಬಹಳಷ್ಟು ಕಥೆಗಳಲ್ಲಿಸಾಮಾಜಿಕ ಹಾಗೂ ವೈಚಾರಿಕ ಸಂಘರ್ಷ ಕಾಣಬಹುದು. ಕಥೆಗಳು ಯಾವ ವಾದ, ಚಳವಳಿಯ ಮಾರ್ಗದ್ದೇ ಆಗಿರಲಿ; ಅವು ಸಮಾನತೆಯ ಜೀವಪರ ನೆಲೆಯಲ್ಲಿ ಪರಸ್ಪರ ಬೆಂಬಲಿತವಾಗಿ ನಿಲ್ಲುತ್ತವೆ ಎಂಬುದಕ್ಕೆ ಇಲ್ಲಿಯ ಕಥೆಗಳು ಋಜುವಾತುಪಡಿಸುತ್ತವೆ. ಉತ್ತರ ಕರ್ನಾಟಕದಲ್ಲಿ ಕಥಾಸಾಹಿತ್ಯ ಸೃಷ್ಟಿ ದಕ್ಷಿಣಕ್ಕಿಂತ ಹುಲುಸಾಗಿದೆ. ಜಾಗತೀಕರಣ ವಿವೇಚನೆ ದಕ್ಷಿಣದಲ್ಲಿ ಜಾಸ್ತಿ. ಕರಾವಳಿ ಭಾಗದಲ್ಲಿನ ಕಥೆಗಳು ಬದುಕನ್ನು ಕುರಿತು, ಪಲ್ಲಟಗಳನ್ನು ಕುರಿತು ಚಿಂತಿಸಿವೆ’ ಎಂದು ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ಕಥೆಗಾರರಾದ ಮಾಲತಿ ಪಟ್ಟಣಶೆಟ್ಟಿ, ಮಾವಿನಕೆರೆ ರಂಗನಾಥ, ಮಹಾಂತಸ್ವಾಮಿ ನವಲಕಲ್, ನಾ. ಮೊಗಸಾಲೆ, ಚ.ಹ.ರಘುನಾಥ, ಜಿ.ಎನ್. ರಂಗನಾಥರಾವ್ ಸೇರಿದಂತೆ ಖ್ಯಾತ ಕಥೆಗಾರರ ಕಥೆಗಳನ್ನು ಸಂಕಲಿಸಲಾಗಿದೆ.
©2025 Book Brahma Private Limited.