
‘ನಾಡಿ ಮಿಡಿತ: ಸಂಪುಟ 9’ ಸಮಗ್ರ ಕಾದಂಬರಿಗಳ ಸಂಪುಟ. ಇಲ್ಲಿ ನಾ.ಡಿಸೋಜ ಅವರ ಜೀವಕಳೆ, ಮಹಾಸತಿ, ಗಾಂಧಿ ಬಂದರು, ದುರ್ಗವೆಂಬ ವ್ಯೂಹ ಎಂಬ ನಾಲ್ಕು ಕಾದಂಬರಿಗಳು ಸಂಕಲನಗೊಂಡಿವೆ. ನಾಡು ಮೆಚ್ಚಿದ ಪ್ರಖ್ಯಾತ ಸಾಹಿತಿ, ವೈಚಾರಿಕ ಪ್ರಜ್ಞೆಯ ಚಿಂತಕ. ಸರ್ವಧರ್ಮ ಸಮಭಾವದ ಪ್ರತಿಪಾದಕರು. ವಿಶ್ವ ಮಾನವತ್ವ ಮೇಳೈಸಿಕೊಂಡ ದಾರ್ಶನಿಕ. ತನ್ನ ಧರ್ಮದ ದರ್ಶನವನ್ನು ತಿಳಿದಿರುವಷ್ಟೇ ಇತರೇ ಧರ್ಮ ದರ್ಶನಗಳನ್ನೂ ಅಲಿತ ಅರಿವಿನ ಹರಿವಾಣ. ಎಡ ಪಂಥ, ಬಲ ಪಂಥಗಳೆನ್ನದೆ ಎಲ್ಲದರೊಳಗಿನ ಒಳಿತನ್ನು ತನ್ನೊಳಗಿರಿಸಿಕೊಂಡ ಒಳಿತಿನ ಹೂರಣ, ಕಳೆದು ಹೋದ ಒಂದು ಕಾಲಮಾನದ ಸಾಕ್ಷಿ ಪ್ರಜ್ಞೆಯಾಗಿ ಹತ್ತು ಹಲವು ವಿಷಯಗಳಿಗೆ ಕನ್ನಡಿಯಾದ ಬಹುಮುಖಿ.
ಪರಿಸರ ಪ್ರಜ್ಞೆಯ ಬೆಳಕು ಚೆಲ್ಲುವ ಸಾಮಾಜಿಕ ಕಳಕಳಿಯ ಸಮಾಜಮುಖಿ, ಅಪ್ರತಿಮ ಕನ್ನಡ ಪ್ರಜ್ಞೆಯ 'ಸಾಗರದ'ದ ಸರ್ವಮುಖಿ, ಪರಿಸರ ಸಂರಕ್ಷಿಸುವ ಪರಿಸರ ಹೋರಾಟಗಾರ, ಕಥೆಕಾರ, ಕಾದಂಬರಿಕಾರ, ಮಕ್ಕಳ ಸಾಹಿತಿ, ಕನ್ನಡಕ್ಕಾಗಿ ಕೈಯೆತ್ತುವ, ಕೊರಳೆತ್ತುವ ಕನ್ನಡ ಚಳವಳಿಗಾರ. 'ಮುಳುಗಡೆ' ಸಂತ್ರಸ್ತರ ಪರ ಲೇಖನಿ ಹಿಡಿದು ಆಳುವ ಸರಕಾರಕ್ಕೆ ಅರಿವಿನ ಹಣತೆ ಹಚ್ಚಿದ ಜನಪರ ಹೋರಾಟಗಾರ. ಇದೆಲ್ಲದರ ಒಟ್ಟು ಮೊತ್ತವೇ ನಾ. ಡಿಸೋಜ, ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಕನ್ನಡ ಕಾದಂಬರಿ ಲೋಕಕ್ಕೆ ಇವರ ಕೊಡುಗೆ ಅಪಾರವಾಗಿದೆ. ಇದುವರೆಗೂ ನಲವತೈದಕ್ಕೂ ಹೆಚ್ಚಿನ ಕಾದಂಬರಿಗಳನ್ನು ಬರೆದಿದ್ದಾರೆ. ಈ ಎಲ್ಲಾ ಕಾದಂಬರಿಗಳನ್ನು ಒಟ್ಟಿಗೆ ಸಂಪುಟ ರೂಪದಲ್ಲಿ ಓದುಗರಿಗೆ ಒದಗಿಸುವ ಕಾರ್ಯವನ್ನು ಈ ಮೂಲಕ ಮಾಡಲಾಗಿದೆ.
©2025 Book Brahma Private Limited.