
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ.ಗೋಕಾಕ್ ಅವರ ಜೀವನ ಮತ್ತು ಸಾಹಿತ್ಯ ಕುರಿತು ಒಂದು ಹೊಸ ನೋಟವನ್ನು ನೀಡುವ ಕೃತಿ-ನಾನೂ ಕನಸಿಗ. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಂಪಾದಕರು. ಕಲೋಪಾಸಕ ಮತ್ತು ಇತರ ಕವಿತೆಗಳು ಸಂಕಲನಕ್ಕೆ ದ.ರಾ.ಬೇಂದ್ರೆ ಅವರು ಬರೆದ ಮುನ್ನುಡಿಯಲ್ಲಿ ‘ಗೋಕಾಕರ ನೀಳ್ಗವಿತೆಗಳನ್ನು ಒಂದು ಕನಸಿನ ಮಾಯೆ ಆವರಿಸಿಕೊಂಡಿದೆ. ಬ್ಲೇಕ್, ಕೊಲರಿಜ್ ಮೊದಲು ಮಾಡಿಕೊಂಡು ಏಟ್ಸ್ ಮೊದಲಾದ ಕವಿಗಳವರೆಗೂ ಅನೇಕರು ತಮ್ಮ ಸಾಹಿತ್ಯರಂಗವನ್ನು ತಮ್ಮ ಸ್ವಪ್ನಗಳಿಗೆ ಒಡ್ಡಿದ್ದಾರೆ. ಆದ್ದರಿಂದ, ಆಂಗ್ಲ ವಾಙ್ಮಯವು ಹೊಸ ಹಾದಿಯನ್ನು ಕಂಡಿದೆ. ಕಾವ್ಯಸೃಷ್ಟಿಯೇ ಒಂದು ಬಗೆಯ ಶಾಬ್ಧಿಕ ಸ್ವಪ್ನ ಸೃಷ್ಟಿಯಿದ್ದಂತೆ. ಇವೆರಡರಲ್ಲೂ ವಾಚ್ಯಕ್ಕಿಂತ ಧ್ವನಿಗೇ ಪ್ರಾಧಾನ್ಯತೆ ಹೆಚ್ಚು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಮಹತ್ವದ ಅಭಿಪ್ರಾಯಗಳ ವಿವಿಧ ಲೇಖಕರ ಬರಹಗಳನ್ನು ಇಲ್ಲಿ ಸಂಗ್ರಹಿಸಿ, ಸಂಪಾದಿಸಿದ್ದು ಮತ್ತು, ಈ ಬರಹಗಳ ಬೆಳಕಿನಲ್ಲಿ ಗೋಕಾಕರ ಬದುಕು ಹಾಗೂ ಸಾಹಿತ್ಯದ ಮೇಲೆ ಹೊಸ ನೋಟಗಳ, ಹರವುಗಳ ವಿಸ್ತರಣೆಯೂ ಸಾಧ್ಯವಾಗುತ್ತದೆ ಎಂಬುದು ಈ ಕೃತಿಯ ವೈಶಿಷ್ಟ್ಯ.
©2025 Book Brahma Private Limited.