
ಲೇಖಕಿ ಟಿ. ಎಸ್. ಶ್ರವಣಕುಮಾರಿ ಅವರ ’ ಸಂಜೆಯ ಮಳೆ’ ಕೃತಿಯು ಲಲಿತ ಪ್ರಬಂಧವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಲೇಖಕಿ ಜಯಶ್ರೀ ಕಾಸರವಳ್ಳಿ, ‘ಬಾಲ್ಯದ ನೆನಪುಗಳೇ ‘ಸಂಜೆಯ ಮಳೆ’ಯ ಜೀವಾಳವಾಗಿದೆ. ಅಜ್ಜಿ-ತಾತಂದಿರ ಅಕ್ಕರೆ, ಆಗಿನ ದಸರಾ, ದೀಪಾವಳಿ, ಸಂಕ್ರಾಂತಿ, ಶಿವರಾತ್ರಿಗಳ ಆಚರಣೆಗಳು, ಬಾಲ್ಯದ ಆಟ-ಆಲೋಚನೆಗಳು ಓದುಗರನ್ನು ಹಳೆಯ ದಿನಗಳಿಗೇ ಒಯ್ದುಬಿಡುತ್ತವೆ. ರಿಸೆಪ್ಷನ್ ಎಂಬ ಪ್ರಹಸನ, ಸೂತಕ ಪುರಾಣ, ಚೋರ ಪುರಾಣ ಈ ಬರಹಗಳು ಸಾಧಾರಣವೆನ್ನಿಸಬಹುದಾದರೂ ‘ಹೂವಿನ ಭಾಷೆ’, ‘ಬೀದಿಯ ಪ್ರಪಂಚ’, ‘ಎಲೆಗಳ ಬಲೆಯಲ್ಲಿ’ ಈ ಲೇಖಕಿಯ ಓದಿನ ವಿಸ್ತಾರ, ಜೀವನಾನುಭವ ಹಾಗೂ ಚಿಂತನೆಯ ಪ್ರೌಢಿಮೆಯನ್ನು ತೋರಿಸುವಂತಿದೆ. ‘ಸಲಾಮನ ಗಾಡಿಯೂ.. ಸಂಕ್ರಾಂತಿ ಹಬ್ಬವೂ’ ಎಳ್ಳಿನ ಹಬ್ಬದ ನೆನಪುಗಳ ಸುರುಳಿ ಬಿಚ್ಚಿರುವ ಪ್ರಬಂಧವಾಗಿದೆ. ಇಲ್ಲಿಯ ‘ಸಲಾಮನ ಗಾಡಿ’ ಅಂದಿನ ದಿನಗಳಲ್ಲಿದ್ದ ಭಾವೈಕ್ಯದ ದ್ಯೋತಕವಾಗಿ ಉಳಿಯುತ್ತದೆ. ತಮ್ಮ ನಿತ್ಯದ ಅನುಭವಗಳನ್ನು ವಿಸ್ತೃತ, ಲಾಲಿತ್ಯಮಯ ನಿರೂಪಣೆಯಿಂದ ಕತೆಯಾಗಿಸುವ, ಪರಿ ಇಲ್ಲಿ ಭಿನ್ನವಾಗಿ ಮೂಡಿಬಂದಿದೆ.
©2025 Book Brahma Private Limited.