
‘ಸಾಹಿತ್ಯ ಸಾನ್ನಿಹಿತ್ಯ’ ಕೃತಿಯು ಎಸ್.ಆರ್. ರಾಮಸ್ವಾಮಿ ಅವರ ಪ್ರಬಂಧಸಂಕಲನವಾಗಿದೆ. ಈ ಕೃತಿಯಲ್ಲಿನ ವಿಚಾರಗಳು ಹೀಗಿವೆ; ನಮ್ಮ ನಾಡಿನ ದೌರ್ಭಾಗ್ಯದಿಂದ ಇವತ್ತಿಗೂ ಈ ಮೂಲಪ್ರಶ್ನೆಯ ಬಗೆಗೆ ನಮ್ಮ ಸ್ವತಂತ್ರ ಪ್ರತಿಭೆಯಿಂದ ವಿಚಾರಮಂಥನ ನಡೆಯುತ್ತಲೇ ಇಲ್ಲ. ಇಂಗ್ಲೆಂಡ್ ಅಮೆರಿಕಾಗಳಂತೆಯೋ ಇಲ್ಲವೇ ರಷ್ಯ ಚೀಣಾಗಳಂತೆಯೋ ನಮ್ಮ ಜೀವನವನ್ನು ಎರಕ ಹೊಯ್ಯುವ ಆತುರ ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತಿದೆ. ನಮ್ಮ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಪರದೇಶ, ಪರಸಂಸ್ಕೃತಿಗಳ ಅಗ್ಗದ ನಕಲಾಗಿ ಮಾಡುವ ಪ್ರಯತ್ನವೇ ನಡೆದಿದೆ. ನಮ್ಮ ರಾಷ್ಟ್ರೀಯ ಪ್ರತಿಭೆ, ಪರಂಪರೆ, ತತ್ತ್ವಜ್ಞಾನ, ಜೀವನಾದರ್ಶ ಇವೆಲ್ಲಕ್ಕೂ ಇಂದು ಗ್ರಹಣ ಹಿಡಿದಂತಾಗಿದೆ. ಹೀಗಾಗಿ ಇಂದು ಕೋಟಿ ಕೋಟಿ ಭಾರತೀಯರ ಹೃದಯಕ್ಕೆ ನಮ್ಮ ಸ್ವತಂತ್ರ ರಾಷ್ಟ್ರಜೀವನದ ಅಮೃತಸ್ಪರ್ಶ ಅನುಭವಕ್ಕೆ ಬರುತ್ತಿಲ್ಲ. ನಮ್ಮ ಜನಸಾಮಾನ್ಯರ ಅಂತಃಕರಣವನ್ನು ತಟ್ಟಿ ಎಬ್ಬಿಸುವ ರಾಷ್ಟ್ರೀಯ ಆದರ್ಶಗಳಿಲ್ಲದೆಹೋದಲ್ಲಿ ರಾಷ್ಟ್ರದ ಪುನರುತ್ಥಾನಕ್ಕಾಗಿ ಅವರಲ್ಲಿ ಸ್ವಯಂಪ್ರೇರಣೆ, ಕಾರ್ಯೋತ್ಸಾಹ, ತ್ಯಾಗ, ಪೌರುಷಗಳು ಬೆಳೆದು ನಿಲ್ಲುವುದಾದರೂ ಹೇಗೆ? ಆದ್ದರಿಂದಲೇ ಇಂದು ರಾಷ್ಟ್ರದ ಆಗುಹೋಗುಗಳ ಬಗೆಗೆ ಸರ್ವತ್ರ ಉದಾಸೀನತೆ, ಕ್ರಿಯಾಶೂನ್ಯತೆ, ವಿಫಲತೆಗಳೇ ತಾಂಡವವಾಡುತ್ತಿವೆ. ಎಂದಮೇಲೆ ಜನರೆದೆಗೆ ಸ್ಫೂರ್ತಿ, ಉತ್ಸಾಹಗಳನ್ನೆರೆಯಬಲ್ಲ ಭಾರತೀಯತೆಯ ಆದರ್ಶವನ್ನು ಎತ್ತಿಹಿಡಿಯುವುದು ಇಂದು ತೀರ ಅನಿವಾರ್ಯ ಹಾಗೂ ತುರ್ತು ಕರ್ತವ್ಯವಾಗಿದೆ. ಭಾರತವು 'ತನ್ನತನ'ದಿಂದ ಎದ್ದುನಿಂತಾಗಲೇ ಅದು ಜಗತ್ತಿನಲ್ಲಿ ತಲೆಯೆತ್ತಿ ಬಾಳುವಂತಾದೀತು ಎಂಬುದು ಸ್ಪಷ್ಟವಿದೆ.
©2025 Book Brahma Private Limited.