ಶಾಂತವೇರಿ-ಗೋಪಾಲಗೌಡ

Author : ನಟರಾಜ ಹುಳಿಯಾರ್

Pages 146

₹ 180.00




Year of Publication: 2018
Published by: ನ್ಯಾಷನಲ್ ಬುಕ್ ಟ್ರಸ್ಟ್
Address: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ಹೊಸ ದೆಹಲಿ

Synopsys

ನಾಡಿನ ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡರ ಜೀವನ ಚರಿತ್ರೆಯನ್ನು ಸಾಹಿತಿ, ಲೇಖಕ, ವಿಮರ್ಶಕರಾದ ನಟರಾಜ್ ಹುಳಿಯಾರ್‍ ಅವರು ಈ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಶಾಂತವೇರಿ ಗೋಪಾಲಗೌಡರ ಸಾಹಿತ್ಯ ಪ್ರಜ್ಞೆ, ಹೋರಾಟ ಬದುಕು, ರಾಜಕೀಯ ನಿಲುವು, ಮೇರು ವ್ಯಕ್ತಿತ್ವ, ಸಮಾಜವಾದಿ ಹೋರಾಟದ ಬದುಕು ಚಿತ್ರಣ, ಇವುಗಳ ಬಗ್ಗೆ ಸ್ಥೂಲವಾಗಿ ಪರಿಚಯಿಸಿಕೊಡುವ ಕೃತಿ ಇದಾಗಿದೆ.

ಗೋಪಾಲಗೌಡರು ಕರ್ನಾಟಕದ ಜನತೆಯೊಂದಿಗೆ ಮಾಡಿದ ಕ್ಷೇತ್ರಕಾರ್ಯ, ಸಾಧನೆ, ಸರ್ವತೋಮುಖ ಕಾರ್ಯ ಬೆಳವಣಿಗೆಗಳ  ಒಳನೋಟದ ಬಗ್ಗೆ ಓದುಗರಿಗೆ ವಿವರಿಸುವ ಅಪರೂಪದ ಕೃತಿ ಎನ್ನಬಹುದು.

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Reviews

ಗೋಪಾಲಗೌಡರನ್ನು ಕುರಿತ 'ಹೊಸ' ಪುಸ್ತಕ

ಕರ್ನಾಟಕದ ಮೇರು ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಕುರಿತು ಈವರೆಗೆ ಹತ್ತಾರು ಕೃತಿಗಳು ಪ್ರಕಟವಾಗಿವೆ. ಅಲ್ಲದೆ ನೂರಾರು ಲೇಖನಗಳಲ್ಲಿ, ಕನ್ನಡದ ಹತ್ತಾರು ಸಾಹಿತ್ಯ ಕೃತಿಗಳಲ್ಲಿ, ಕವನಗಳಲ್ಲಿ, ಅವರನ್ನು ಹತ್ತಿರದಿಂದ ಬಲ್ಲವರ, ಅವರು ಓಡಾಡಿದ ನೆಲದಲ್ಲಿ ಜೀವಿಸಿದವರ ಮನಸಿನಲ್ಲಿ ಮೂಡಿದ ಈ ನಾಯಕನ ವಿಶೇಷ ಚಿತ್ರಣಗಳು ದೊರಕುತ್ತವೆ.

ನಟರಾಜ್ ಹುಳಿಯಾರ್ ಅವರ ಈ ಕೃತಿ ಈ ಎಲ್ಲದರ ಸಾರವನ್ನು ಹೀರಿಕೊಂಡಂತೆ ಬರೆಯಲ್ಪಟ್ಟಿದೆ.

ನ್ಯಾಷನಲ್ ಬುಕ್ ಟ್ರಸ್ಟ್‌ನ ರಾಷ್ಟ್ರೀಯ ಜೀವನ ಚರಿತ್ರೆ ಮಾಲೆಯಲ್ಲಿ ಪ್ರಕಟವಾಗಿರುವ ಈ ಕೃತಿ ಕೇವಲ ೪೯ ವರ್ಷಗಳಷ್ಟೇ ಬದುಕಿ, ಮೂರು ಬಾರಿ ಶಾಸಕರಾಗಿ ಸಮಾಜವಾದಿ ಚಳವಳಿಯನ್ನು ರಾಜ್ಯದಲ್ಲಿ ಕಟ್ಟಿ ಕರ್ನಾಟಕದ ಆದರ್ಶ ರಾಜಕಾರಣದ ಪ್ರಖರ ಮಾದರಿಯಾಗಿ ಇವತ್ತಿಗೂ ಉಳಿದಿರುವ ಈ ಧೀಮಂತ ರಾಜಕಾರಣಿಯ ಬದುಕನ್ನು ಸಾರವತ್ತಾಗಿ ಪ್ರಸ್ತುತಪಡಿಸುತ್ತದೆ. ನಟರಾಜ್ ಹುಳಿಯಾರ್ ಅವರಿಗೆ ಈ ಕೃತಿ ರೂಪಿಸುವಲ್ಲಿ ಹೆಚ್ಚು ನೆರವಾಗಿರುವುದು ಕೋಣಂದೂರು ವೆಂಕಪಗೌಡರು ಸಂಪಾದಿಸಿರುವ 'ಜೀವಂತ ಜ್ವಾಲೆ' ಕೃತಿ. ಜತೆಗೆ ಕಾಳೇಗೌಡ ನಾಗವಾರ ಅವರು ಸಂಪಾದಿಸಿದ ಶಾಂತವೇರಿ ಗೋಪಾಲಗೌಡರ ನೆನಪಿನ ಸಂಪುಟ', ಡಾ. ವಿಷ್ಣುಮೂರ್ತಿ ಅವರು ಸಂಪಾದಿಸಿರುವ 'ಗೋಪಾಲಗೌಡರ ಡೈರಿ ಮತ್ತು ಪತ್ರಗಳು' ಕೃತಿಗಳ ನೆರವನ್ನೂ ಅವರು ಪಡೆದಿದ್ದಾರೆ.

ಅಲ್ಲದೆ ಪಿ. ಲಂಕೇಶ್, ಕಡಿದಾಳು ಶಾಮಣ್ಣ, ಕೋಣಂದೂರು ಲಿಂಗಪ್ಪ, ಪೂರ್ಣಚಂದ್ರ ರ ತೇಜಸ್ವಿ ಅವರು ವಿವಿಧ ಸಂದರ್ಭದಲ್ಲಿ ಮಾಡಿದ ಉಲ್ಲೇಖಗಳೂ ಇಲ್ಲಿ ಬಳಕೆಯಾಗಿ ನ ಪುಸ್ತಕದ ಮೌಲಿಕತೆಯನ್ನು ಹೆಚ್ಚಿಸಿವೆ. ಗೋಪಾಲಗೌಡರ ಬಾಲ್ಯ, ಕಾಗೋಡು ಸತ್ಯಾಗ್ರಹ, ಈ ಲೋಹಿಯಾ ಒಡನಾಟ , ಶಾಸಕರಾಗಿ ತೋರಿದ ಬದ್ಧತೆ-ಸಾತ್ವಿಕ ಸಿಟ್ಟು, ಮದುವೆ ಸಂಸಾರದ ವಿವರಗಳ ಜತೆಗೆ ಅವರ ಕೊನೆಯ ಕಷ್ಟದ ದಿನಗಳ ಮಾಹಿತಿ ವಿವರವಾಗಿ ಇಲ್ಲಿ ಮೂಡಿಬಂದಿದೆ. ಅಲ್ಲದೆ ಗೋಪಾಲಗೌಡರು ಕಾಲವಾದ ನಂತರ ಅವರನ್ನು ನಂಬಿದವರ, ಅನುಸರಿಸಿದವರ ಮನದಲ್ಲಿ ಉಳಿದ ರೀತಿಯನ್ನೂ ಈ ಕೃತಿ ಚಿತ್ರಿಸುತ್ತದೆ.

ಈ ಕೃತಿಯ ವಿಶೇಷವೆಂದರೆ ಲೇಖಕರು ಈ ಕೃತಿ ರಚನೆಗಾಗಿ ಕೈಗೊಂಡ ಕ್ಷೇತ್ರಕಾರ್ಯ ನೀಡುವ ಮಾಹಿತಿ ಮತ್ತು ಗೋಪಾಲಗೌಡರ ವ್ಯಕ್ತಿತ್ವ ಮತ್ತು ರಾಜಕಾರಣದ ಬಗೆಗಿನ ಒಳನೋಟಗಳು. ಗೋಪಾಲಗೌಡರ ಬದುಕಿನಿಂದ ಸೂರ್ತವಾದ ಯು.ಆರ್. ಅನಂತಮೂರ್ತಿ ಅವರ 'ಅವಸ್ಥೆ' ಕಾದಂಬರಿಯನ್ನು ಆಧರಿಸಿ ಬಂದ ಸಿನಿಮಾ ಕುರಿತ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ನ್ಯಾಯವಾದಿ ರವಿವರ್ಮಕುಮಾರ್‌ರನ್ನು 'ಗೋಪಾಲಗೌಡರೆಂದರೆ ವಿಧಾನಸೌಧದ ಎದುರಿನ ವೃತ್ತದ ಹೆಸರಿನವರೇ?' ಎಂದು ಕೇಳಿದ ಪ್ರಸಂಗ ಸ್ವಾರಸ್ಯಕರವಾಗಿ ಇಲ್ಲಿ ನಿರೂಪಿತವಾಗಿದೆ. ಗೋಪಾಲಗೌಡರ 'ನೈತಿಕ ಸಿಟ್ಟು ಮತ್ತು ಚಿಕಿತ್ಸಕ ವ್ಯಂಗ್ಯ ಅಧ್ಯಾಯದಲ್ಲಿ ಹುಳಿಯಾರ್ ಅವರು ಈ ಸಂಬಂಧವಾಗಿ ರಾಮಮನೋಹರ ಲೋಹಿಯಾ ಅವರ ಬಳಿ ಇದ್ದ ಕೆಲ ಟಿಪ್ಪಣಿಗಳನ್ನು ಈ ಕೃತಿಯಲ್ಲಿ ನಮೂದಿಸುತ್ತಾರೆ. ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣವನ್ನು ಹರಿದು, ಕಾಲಿನಿಂದ ತುಳಿದು ಹಾಕಿದ ಐತಿಹಾಸಿಕ ಘಟನೆಯ ಬಗ್ಗೆ ಗೋಪಾಲಗೌಡರು ಈ ಟಿಪಣಿಯ ಪ್ರಕಾರ “ನನ್ನ ಸಿಟ್ಟು ತಾಮಸವಾಗಿರಲಿಲ್ಲ. ಸಾತ್ವಿಕವೇ ಆಗಿತ್ತು. ಪ್ರತಿಭಟನೆ ಯಾವ ರೀತಿ ಇರಬೇಕೆಂಬುದನ್ನು ವಿವೇಚಿಸುವ ಮೊದಲೇ ನನ್ನ ಕೈಕಾಲುಗಳು ಪ್ರತಿಭಟನೆ ತೋರಿಸಿದ್ದವು' ಎಂದಿದ್ದಾರೆ. ಈ ದೃಷ್ಟಿಯಿಂದ ಈ ಟಿಪ್ಪಣಿ ಮಹತ್ವದ್ದೇ ಸರಿ.

ಗೋಪಾಲಕೃಷ್ಣ ಅಡಿಗರ 'ಶಾಂತವೇರಿಯ ಅಶಾಂತ ಸಂತ' ಸೇರಿದಂತೆ ಸಮಕಾಲೀನರ ಕಾವ್ಯದಲ್ಲಿ ಗೋಪಾಲಗೌಡರು ಕಂಡ ಬಗೆಯನ್ನೂ ಸಹ ಹುಳಿಯಾರ್ ವಿಶೇಷವಾಗಿ ಕಟ್ಟಿಕೊಟ್ಟಿದ್ದಾರೆ. ಶಾಸಕನಾಗುವುದು ಎಂದರೆ 'ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ' ಎಂದು ನಂಬಿದ್ದ ಶಾಂತವೇರಿ ಗೋಪಾಲಗೌಡರ ಕುರಿತ ನಟರಾಜ್ ಹುಳಿಯಾರ್ ಅವರ ಈ ಕೃತಿ ಈ ನಾಯಕನ ಬಗ್ಗೆ ಇದುವರೆಗೆ ಬಂದಿರುವ ಇತರೆಲ್ಲ ಕೃತಿಗಳಗಿಂತ ಹೆಚ್ಚು ತೀವ್ರವಾದ ಬೆಳಕನ್ನು ಚೆಲ್ಲಿ ಗಮನ ಸೆಳೆಯುತ್ತದೆ. ಆದರೆ ಮಸ್ತಕಕ್ಕೆ ಇಟ್ಟಿರುವ ಬೆಲೆ ಮಾತ್ರ ಜಾಸ್ತಿ ಎನಿಸದಿರದು.

-ಹೊನ್ನಾಳಿ ಚಂದ್ರಶೇಖರ್‍

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಮಾರ್ಚ್ 2019)

 

ಗೋಪಾಲಗೌಡರ ವ್ಯಕ್ತಿತ್ವದ ಸಮಗ್ರ ದರ್ಶನ

ಶಾಂತವೇರಿ ಗೋಪಾಲಗೌಡರ ಜೀವನ ಮತ್ತು ಸಾಧನೆಯ ಕುರಿತು ಕನ್ನಡದಲ್ಲಿ ಹಲವು ಪುಸ್ತಕಗಳು, ನೂರಾರು ಲೇಖನಗಳು ಪ್ರಕಟವಾಗಿವೆ. ಅದಕ್ಕೆ ಮೌಲ್ಯಯುತ ಹೊಸ ಸೇರ್ಪಡೆ ಡಾ.ನಟರಾಜ್‌ ಹುಳಿಯಾರ್‌ ಬರೆದಿರುವ  ಕೃತಿ ‘ಶಾಂತವೇರಿ ಗೋಪಾಲಗೌಡ’. ರೈತ ಹೋರಾಟ ಮತ್ತು ರಾಜಕೀಯವನ್ನು ಸಮೀಕರಿಸಿ ಗೋಪಾಲಗೌಡರು ನಡೆದಾಡಿದ ಶಿವಮೊಗ್ಗ, ಸಾಗರ, ತೀರ್ಥಹಳ್ಳಿಗಳ ಸುತ್ತಮುತ್ತ ಅಡ್ಡಾಡಿ ನಟರಾಜ್‌ ಈ ಪುಸ್ತಕವನ್ನು ಬರೆದಿದ್ದಾರೆ. ಕೋಣಂದೂರು ವೆಂಕಪ್ಪಗೌಡರು ಸಂಪಾದಿಸಿದ ‘ಜೀವಂತ ಜ್ವಾಲೆ’, ಡಾ.ವಿಷ್ಣುಮೂರ್ತಿ ಸಂಪಾದಿಸಿದ ‘ಗೋಪಾಲಗೌಡರ ಡೈರಿ, ಪತ್ರಗಳು ಇತ್ಯಾದಿ’, ಕೋಣಂದೂರು ಲಿಂಗಪ್ಪ ಸಂಪಾದಿಸಿದ ‘ಶಾಸನಸಭೆಯಲ್ಲಿ ಶಾಂತವೇರಿ’, ಜಿ.ವಿ.ಆನಂದಮೂರ್ತಿ/ ಕಾಳೇಗೌಡ ನಾಗವಾರ ಸಂಪಾದಿಸಿದ ‘ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ’ ಹಾಗೂ ಗೋಪಾಲಗೌಡರ ಸಮಕಾಲೀನರ  ಆತ್ಮಚರಿತ್ರೆಗಳಿಂದ ಅನೇಕ ವಿವರಗಳನ್ನು ಒಗ್ಗೂಡಿಸಿ ಲೇಖಕರು ಪುಸ್ತಕಕ್ಕೊಂದು ಹೊಸ ಆಯಾಮ ಒದಗಿಸಿದ್ದಾರೆ.

ಗೋಪಾಲಗೌಡರ ಸಂಗಾತಿಗಳಾದ ಹಾದಿಗಲ್‌ ರಾಮಪ್ಪ, ಮಿಣುಕಮ್ಮ, ಕಿಟ್ಟಪ್ಪಗೌಡ, ಕೋಲಿಗೆ ಶಿವಪ್ಪಗೌಡ, ಎ.ಪಿ.ರಾಮಪ್ಪ, ಪರಮೇಶ್ವರ ಭಟ್ಟ, ಕೋಣಂದೂರು ಲಿಂಗಪ್ಪ, ದಿವಾಕರ ಹೆಗಡೆ, ಕಾಗೋಡು ತಿಮ್ಮಪ್ಪ, ಪೆರಡೂರು ಪುಟ್ಟಯ್ಯ ಅವರು ಹಂಚಿಕೊಂಡ ನೆನಪುಗಳು ಈ ಪುಸ್ತಕದಲ್ಲಿವೆ. ಪಿ.ಲಂಕೇಶ್‌, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಯು.ಆರ್‌.ಅನಂತಮೂರ್ತಿಯವರು ಅಲ್ಲಲ್ಲಿ ಬರೆದಿರುವ ಟಿಪ್ಪಣಿಗಳ ಮತ್ತು ಸಮಾಜವಾದಿ ಚಳವಳಿಯ ಇತಿಹಾಸ ಕುರಿತ ಹಲವು ಪುಸ್ತಕಗಳಿಂದ ಸಮರ್ಥನೆಗಾಗಿ ಆಯ್ದ ವಿವರಗಳೂ ಇವೆ. ಹೊಸ ತಲೆಮಾರಿನ ಓದುಗರಿಗೆ ಸಂಕ್ಷಿಪ್ತರೂಪದಲ್ಲಿ ಶಾಂತವೇರಿ ಗೋಪಾಲಗೌಡರನ್ನು ಪರಿಚಯಿಸುವ ಈ ಪುಸ್ತಕ, ಕನ್ನಡ ಸಾಹಿತ್ಯಲೋಕಕ್ಕೊಂದು ಅಮೂಲ್ಯ ಸೇರ್ಪಡೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ ನಾಡಿನ ರಾಜಕೀಯಕ್ಕೆ ಸಮಾಜವಾದಿ ದಿಕ್ಕೊಂದನ್ನು ತೋರಿದ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಮೈಸೂರು ರಾಜ್ಯದ ಚುನಾವಣಾ ಕಣಕ್ಕೆ ಇಳಿದದ್ದು ಆಕಸ್ಮಿಕವೇ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಒಮ್ಮೆ ಸೋಲುಂಡಿದ್ದರು. ಗೆದ್ದರೂ, ಸೋತರೂ ಅವರ ಸಮಾಜವಾದಿ ನಿಲುವು ಬದಲಾಗಲಿಲ್ಲ. ಆರಗದಲ್ಲಿದ್ದ ಪುಟ್ಟ ಗುಡಿಸಲು ಹಾಗೂ ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ವಾಸವಾಗಿಯೇ ಅವರು ಭೂಹೀನರ ಮತ್ತು ದುರ್ಬಲರ ಪರ ಹೋರಾಟದ ಹಾದಿ ತುಳಿದರು. ಅವರ ಸರಳ ಬದುಕಿನ ಶೈಲಿ, ಜಾತ್ಯತೀತ ವ್ಯಕ್ತಿತ್ವ ಮತ್ತು ನಿಷ್ಠುರ ವಿಮರ್ಶಾನೋಟಗಳನ್ನು ಈ ಕೃತಿ ಸಮರ್ಥವಾಗಿ ಪ್ರತಿಬಿಂಬಿಸಿದೆ. ಭೌತಿಕ ನಿರ್ಗಮನದ 47 ವರ್ಷಗಳ ನಂತರವೂ ಕರ್ನಾಟಕದಲ್ಲಿ ಆದರ್ಶ ರಾಜಕಾರಣದ ಅತ್ಯುತ್ತಮ ಮಾದರಿಯಾಗಿ ಉಳಿದುಕೊಂಡಿರುವ ಶಾಂತವೇರಿಯವರ ಜೀವನ ಮತ್ತು ಹೋರಾಟದ ವಿವರಗಳನ್ನು ಓದುತ್ತಾ ಹೋದಂತೆ, ಇವತ್ತಿನ ರಾಜಕೀಯ ಹಿಡಿದಿರುವ ಅಧಃಪತನದ ದಾರಿಯೂ ಕಣ್ಣಮುಂದೆ ನಿಚ್ಚಳವಾಗುತ್ತದೆ.

ಅಭ್ಯರ್ಥಿ ಮತ್ತು ಮತದಾರರಿಬ್ಬರೂ ಭ್ರಷ್ಟಗೊಳ್ಳದ ಚುನಾವಣೆಯ ಮಾದರಿಗಳನ್ನು ಯೋಚಿಸುವಾಗೆಲ್ಲ ಗೋಪಾಲಗೌಡರು ನೆನಪಾಗುತ್ತಾರೆ. ‘ಒಂದು ವೋಟು, ಒಂದು ನೋಟು’ ಪ್ರಯೋಗದ ಮೂಲಕ ಅವರು ಚುನಾವಣೆ ಗೆಲ್ಲುತ್ತಿದ್ದ ರೀತಿ, ವಿದ್ಯಾವಂತರು ಮತ್ತು ಅವಿದ್ಯಾವಂತರನ್ನು ಒಂದೇ ಸಮದಲ್ಲಿ ತಲುಪುತ್ತಿದ್ದ ಅವರ ರಾಜಕೀಯ ಭಾಷಣಗಳು, ಎಂತಹ ಸಂದರ್ಭದಲ್ಲೂ ತತ್ವಸಿದ್ಧಾಂತದ ಕುರಿತು ರಾಜಿಯಾಗದ ಮನೋಭಾವಗಳನ್ನು ಲೇಖಕರು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

ಒಟ್ಟು 11 ಅಧ್ಯಾಯಗಳಿದ್ದು, ‘ಸಾಂಸ್ಕೃತಿಕ ಲೋಕದ ಸಖ’, ‘ನೈತಿಕ ಸಿಟ್ಟು ಮತ್ತು ಚಿಕಿತ್ಸಕ ವ್ಯಂಗ್ಯ’ ಹಾಗೂ ‘ಸಮಾಜವಾದಿಯ ಕೊನೆಯ ವರ್ಷಗಳು’ ಅಧ್ಯಾಯಗಳು ಆಪ್ತವಾಗಿ ದಾಖಲಾಗಿವೆ. ಅಗ್ರಹಾರದಲ್ಲಿ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ, ಅಲ್ಪಕಾಲ ಓದು ನಿಲ್ಲಿಸಿ ದನ ಮೇಯಿಸಿದ್ದು, ಹೈಸ್ಕೂಲಿಗೆ ನಿತ್ಯ 12 ಕಿ.ಮೀ ನಡೆದೇ ಹೋಗಿ ಬರುತ್ತಿದ್ದುದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುನ್ನ ನಡೆವ ಸೆಲೆಕ್ಷನ್‌ ಟೆಸ್ಟ್ ಬರೆಯುತ್ತಿದ್ದಾಗ ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಬಂದ ಸ್ವಾತಂತ್ರ್ಯ ಹೋರಾಟಗಾರರ ಮೆರವಣಿಗೆಯ ಜೊತೆಗೆ ತಾವೂ ಹೊರಟು ನಿಂತದ್ದು, ಪೋಸ್ಟ್‌ಬಾಕ್ಸ್‌ಗಳ ಅಪಹರಣ, ತಂತಿ ಕತ್ತರಿಸುವುದು ಮುಂತಾದ ಭೂಗತ ಚಟುವಟಿಕೆಗಳಲ್ಲಿ ಭಾಗವಹಿಸಿ ಜೈಲು ಸೇರಿದ್ದು, ಕೋರ್ಟ್‌ನಲ್ಲಿ ವಾದಿಸಿ ಸರ್ಕಾರಿ ವಕೀಲರ ಫಜೀತಿಗೆ ಕಾರಣರಾದದ್ದು, 3 ತಿಂಗಳ ಜೈಲುಶಿಕ್ಷೆ ಆದಾಗ ರೆವಿನ್ಯೂ ಇನ್ಸ್‌ಪೆಕ್ಟರ್‌ ಆಗಿದ್ದ ಅಣ್ಣ ಜಾಮೀನು ನೀಡಲು ಬಂದರೂ ನಿರಾಕರಿಸಿದ್ದು, ಜೈಲಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಭೇಟಿ, ಜೂನಿಯರ್‌ ಇಂಟರ್‌ಮಿಡಿಯೆಟ್‌ನಲ್ಲಿ ಹಣದ ಮುಗ್ಗಟ್ಟಿನಿಂದಾಗಿ ಬೀಡಿ ಕಟ್ಟಿ, ಹೊಲಿಗೆ ಕೆಲಸ ಮಾಡಿ ಜೀವನ ಸಾಗಿಸಿದ್ದು– ಮುಂತಾಗಿ ಗೋಪಾಲಗೌಡರ ಬಾಲ್ಯದ ಕುರಿತ ಅಪರೂಪದ ವಿವರಗಳೆಲ್ಲ ಇಲ್ಲಿವೆ.

ಮೊದಲ ಬಾರಿ ಚುನಾವಣೆಗೆ ನಿಂತಾಗ ಅವರ ಚಿನ್ಹೆ ಆಲದ ಮರ. ಇವತ್ತು ಕರ್ನಾಟಕದ ರಾಜಕೀಯ ಇತಿಹಾಸವನ್ನೊಮ್ಮೆ ಹೊರಳಿ ನೋಡಿದರೆ ಗೋಪಾಲಗೌಡರ ಆಲದಮರದಂತಹ ಮೇರುವ್ಯಕ್ತಿತ್ವದ ಮಹತ್ವ ಎದ್ದು ಕಾಣುತ್ತದೆ. ‌ಈ ಮರದ ನೆರಳಲ್ಲಿ ಬೆಳೆದ ಅರಸು, ಬಂಗಾರಪ್ಪ, ಪಟೇಲ್‌ ಮುಖ್ಯಮಂತ್ರಿಗಳಾದರು. 1971ರಲ್ಲಿ ವೀರೇಂದ್ರ ಪಾಟೀಲರ ಸಂಪುಟ ರಾಜೀನಾಮೆ ನೀಡಿದಾಗ ಸಂಯುಕ್ತ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಗೋಪಾಲಗೌಡರೇ ಮುಖ್ಯಮಂತ್ರಿ ಆಗುವ ಅವಕಾಶವೊಂದು ಕೈತಪ್ಪಿತ್ತು.

ಸಾಹಿತಿಗಳ ಜೊತೆಗಿನ ಗೌಡರ ಸಾಹಚರ್ಯದ (ಡೈರಿಯಲ್ಲಿ ಟಿಪ್ಪಣಿಸಿದ) ರಸನಿಮಿಷಗಳೂ ಇಲ್ಲಿವೆ. ಲಂಕೇಶಪ್ಪನ ಜೊತೆ ಬಂದಿದ್ದ ಕೆ.ಎಸ್‌.ನಿಸಾರ್‌ ಅಹ್ಮದ್ ಪದ್ಯ ಓದಿದ್ದು/ ನೆಬೊಕೊವ್‌ನ 'ಲೋಲಿತಾ' ಕಾದಂಬರಿ ಓದಿದ್ದು/ ‘ಚೌದವೀ ಕ ಚಾಂದ್‌’ ಸಿನಿಮಾ ನೋಡಿದ್ದು/ ತೀರ್ಥಹಳ್ಳಿಯಲ್ಲಿ ಇದ್ದಾಗ ಹೊಳೆಯಾಚೆ ಹೋಗಿ ಕಳ್ಳುಕುಡಿದು ಬಂದದ್ದು/ ಬಂಧನದಲ್ಲಿದ್ದ ಆಫ್ರಿಕಾದ ಪೆಟ್ರೀಷಿಯಾ ಲುಮುಂಬಾ ಕುರಿತ ಟಿಪ್ಪಣಿ, ಶ್ರೀರಾಂಪುರದಲ್ಲಿದ್ದ ಪುಟ್ಟ ಮನೆಗೆ ದೇವರಾಜ ಅರಸು, ಎಸ್‌.ವೆಂಕಟರಾಂ, ಅಜೀಜ್‌ ಸೇಠ್‌, ಪಟೇಲ್‌, ಕೊಣಂದೂರು ಲಿಂಗಪ್ಪ, ಬಿ.ಬಸವಲಿಂಗಪ್ಪ ಬಂದು ಹೋಗುತ್ತಿದ್ದುದು, ಎಂ.ಡಿ.ನಂಜುಂಡಸ್ವಾಮಿ ಜರ್ಮನಿಯಿಂದ ಬಂದಾಗ ಗೌಡರ ಮನೆಯಲ್ಲಿ ಉಳಿದು ‘ಮಾನವ’ ಪತ್ರಿಕೆ ರೂಪಿಸುತ್ತಿದ್ದುದು– ಹೀಗೆ ಕುತೂಹಲಕರ ಮಾಹಿತಿಗಳು ಒಂದೇ ಕಡೆ ಓದಲು ಸಿಗುತ್ತವೆ. ಹೊಸ ತಲೆಮಾರಿನ ರಾಜಕೀಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದೊಂದು ಪುಷ್ಕಳ ಓದಿನೌತಣ.

- ಬಿ. ಎಂ. ಹನೀಫ್‌

ಕೃಪೆ: ಪ್ರಜಾವಾಣಿ, ಮೊದಲ ಓದು (2020 ಜನವರಿ 12)

Related Books