
`ಪಂಚಮ ವೇದ’ ಭಾರತಿ ಹೆಗಡೆ ಅವರ ವೇದ ಬದುಕಿನ ಸಾರವಾಗಿದೆ. ಪ್ರತಿಸಲವೂ ಒಬ್ಬ ಹೆಣ್ಣಿನ ಧಾರಣಾ ಶಕ್ತಿಯ ಬಗ್ಗೆ ನಾನು ಅಚ್ಚರಿಪಟ್ಟಿದ್ದೇನೆ. ಅಂಥದ್ದೇ ಅಚ್ಚರಿ ನನಗೆ ವೇದ ಅವರನ್ನು ನೋಡಿದಾಗ ಅನಿಸಿತು. ಕೊಡಗು, ಭದ್ರಾವತಿ, ಸಿಂಧನೂರು, ಬೆಂಗಳೂರು, ಮತ್ತೆ ಭದ್ರಾವತಿ ಎಂದೆಲ್ಲ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದ ವೇದಾ ಮನೋಹರ ಮಸ್ಕಿ ಅವರು ಈಗ ಭದ್ರಾವತಿಯ ಸಮೀಪದ ಗುಡ್ಡದ ಹಟ್ಟಿಯಲ್ಲಿ ತೋಟದ ಮನೆ ಮಾಡಿಕೊಂಡು ಸಾವಯವ ಕೃಷಿ ಮತ್ತು ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಈ ತೋಟದ ಮನೆಗೆ ಪಂಚಮವೇದ ಎಂಬ ಹೆಸರು. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಮಾಡುವ ಇವರ ಕೃಷಿ ವಿಧಾನವೇ ತುಂಬ ವಿಭಿನ್ನವಾದದ್ದು. ಇಡೀ ಬದುಕನ್ನು ಧನಾತ್ಮಕವಾಗಿಯೇ ನೋಡುವ ವೇದಾ ಅವರ ಬದುಕಿನಲ್ಲೂ ಅನೇಕ ಸಂಘರ್ಷಗಳಿದ್ದವು, ಹೋರಾಟಗಳಿದ್ದವು. ಅವೆಲ್ಲವನ್ನೂ ಮೆಟ್ಟಿ ಯಶಸ್ಸನ್ನು ಸಾಧಿಸಿದವರು ಇವರು. ಈಗ ಪಂಚಮವೇದ ಒಂದು ಅಧ್ಯಯನ ಕೇಂದ್ರವಾಗಿ ಬೆಳೆದು ನಿಂತಿದೆ. ಇಷ್ಟೆಲ್ಲ ಸಾಧನೆಯ ಹಿಂದಿದ್ದ ಹೋರಾಟ, ಸಂಘರ್ಷ, ಗೆಲುವು ಎಲ್ಲದರ ಮೊತ್ತವೇ ಪಂಚಮವೇದವೆಂಬ ಈ ಪುಸ್ತಕ.
©2025 Book Brahma Private Limited.