ಕಾರಂತರ ಕಾದಂಬರಿಗಳಲ್ಲಿ `ದುಡಿ'ಮೆ

Author : ಕೆ. ಸತ್ಯನಾರಾಯಣ

Pages 104

₹ 110.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001

Synopsys

‘ಕಾರಂತರ ಕಾದಂಬರಿಗಳಲ್ಲಿ ದುಡಿಮೆ’ ಲೇಖಕ ಕೆ. ಸತ್ಯನಾರಾಯಣ ಅವರ ಕೃತಿ. ಶಿವರಾಮ ಕಾರಂತರ ಕಾದಂಬರಿಗಳಿಂದ ಕೆಲವು ಸನ್ನಿವೇಶ-ಸಂದರ್ಭಗಳನ್ನು ಆಯ್ದುಕೊಂಡ ಲೇಖಕರು, ಅವುಗಳನ್ನು ಪ್ರಸ್ತುತವಾಗಿ ಎದುರಿಸುತ್ತಿರುವ ಸಂಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುದರ ಚಿತ್ರಣ ನೀಡಿದ್ದಾರೆ. ಈ ವಿವರಣೆಗಳು ಸಂಕ್ಷಿಪ್ತವಾದರೂ ಸೂಕ್ತ ಹಾಗೂ ಸಮಂಜಸವಾಗಿವೆ. 

ಯಾರೂ ಮುಂಗಾಣದಿದ್ದ ಪ್ರಸಕ್ತ ಸನ್ನಿವೇಶದ ಸಂಕಷ್ಟದ ದಿನಗಳು ಕಾರಂತರ ಕೃತಿಗಳಲ್ಲಿ ಕಂಡುಬರುತ್ತವೆ. ಈ ಸಮಕಾಲೀನತೆಯ ಬಗ್ಗೆ ಲೇಖಕರು ದೀರ್ಘವಾಗಿ ವಿವರಿಸಿದ್ದಾರೆ ಎನ್ನುತ್ತಾರೆ -ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಮಾಳವಿಕಾ ಕಪೂರ್. ಕಾರಂತರ ಪ್ರತಿ ಕಾದಂಬರಿಯ ಸಂಕ್ಷಿಪ್ತ ಐತಿಹಾಸಿಕ ಹಿನ್ನೆಲೆ ಹಾಗೂ ಕಾರಂತರು ಆ ಕೃತಿಗಾಗಿ ಕೈಗೊಂಡ ಸಿದ್ಧತೆಗಳ ಕುರಿತು ಲೇಖಕರು ವಿವರಗಳನ್ನು ನೀಡುತ್ತಾರೆ. ಸಾಮಾಜಿಕ ಅಸಮಾನತೆಗಳು, ಬದುಕಿಗಾಗಿ ಎದುರಿಸಿದ ಸಂಘರ್ಷಗಳು, ಕಾಯಿಲೆಗಳು, ವಲಸೆ ಹೀಗೆ ಕಾದಂಬರಿಗಳಲ್ಲಿ ಕಾಣ ಸಿಗುವ ಸನ್ನಿವೇಶಗಳನ್ನು ಆಯ್ದು ಚರ್ಚಿಸುತ್ತಾರೆ. ಆ ಮೂಲಕ ಲೇಖಕರು,  ಕಾರಂತರ ದೂರದೃಷ್ಟಿ, ಸೂಕ್ಷ್ಮ ಮನೋಭಾವದ ದರ್ಶನ ಮಾಡಿಸುತ್ತಾರೆ. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Reviews

ಕಾರಂತರ ಕಾದಂಬರಿಗಳಲ್ಲಿ ʼದುಡಿʼಮೆ ಕೃತಿಯ ವಿಮರ್ಶೆ

ಸಣ್ಣ ಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಅಂಕಣ ಬರಹ, ಪ್ರವಾಸ ಕಥನ - ಮುಂತಾಗಿ ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಬರಹಗಳನ್ನು ರಚಿಸಿರುವ ಪ್ರಸಿದ್ದ ಲೇಖಕ ಶ್ರೀ ಕೆ. ಸತ್ಯನಾರಾಯಣ ಅವರ ಶಿವರಾಮ ಕಾರಂತರ ಆಯ್ದ ಕಾದಂಬರಿಗಳ ವಿಮರ್ಶಾತ್ಮಕ ಬರಹ ಈ ಪುಸ್ತಕ. ದುಡಿಮೆಯನ್ನೇ ಜೀವನದ ಮೌಲ್ಯವನ್ನಾಗಿ ಪರಿಗಣಿಸುವ ಕಾರಂತರು ಅದನ್ನು ತಮ್ಮ ಕಾದಂಬರಿಗಳು ಅಭಿವ್ಯಕ್ತಿಸಿರುವ ರೀತಿ ಅನನ್ಯವಾದದ್ದು. ಕಾರಂತರ ಆಯ್ದ ಆರು ಕಾದಂಬರಿಗಳಲ್ಲಿ ಶ್ರಮ ಪ್ರಪಂಚದ ಸಂಕೀರ್ಣ ವಿವರಗಳ ಲಯವನ್ನು ಅತ್ಯಂತ ತನ್ಮಯತೆಯಿಂದ ಲೇಖಕರು ಬಿಚ್ಚಿಡುತ್ತಾರೆ. ಈ ವಿಮರ್ಶೆಯ ಪುಸ್ತಕ ರಚಿತವಾದ ಸಂದರ್ಭವೇ ವಿಶಿಷ್ಟವಾದುದು. ಇಡೀ ದೇಶ ಕೋವಿಡ್-19 ವಿಶ್ವವ್ಯಾಪಿ ಪಿಡುಗಿನಿಂದ ತತ್ತರಿಸುತ್ತಿರುವಾಗ ದುಡಿಮೆಗಾರರ ವಲಸೆ ಸೃಷ್ಟಿಸಿದ ಭೀಕರ ಪರಿಣಾಮದ ಹಿನ್ನೆಲೆಯಲ್ಲಿ ಕಾರಂತರ ಕಾದಂಬರಿ ಜಗತ್ತಿನ ಅನುಭವವನ್ನು ಶೋಧಿಸುವ ಪ್ರಯತ್ನ ಮಾಡಲಾಗಿದೆ. ಕರ್ನಾಟಕದ ನಿರ್ದಿಷ್ಟ ಪ್ರದೇಶದಲ್ಲಿ ವಿವಿಧ ವಿನ್ಯಾಸದ ದುಡಿಮೆಗಾರರ ವಲಸೆಯನ್ನು, ಅದಕ್ಕೆ ಕಾರಣವಾಗುವ ಸಾಮಾಜಿಕ, ಆರ್ಥಿಕ ಒತ್ತಡಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ.

ವಸಾಹತೀಕರಣದ ಪ್ರಭಾವದಿಂದಾಗಿ ಕರಾವಳಿಯ ಕೆಲವೆಡೆ ಪ್ಲಾಂಟೇಶನ್ ವ್ಯವಸ್ಥೆ ಜಾರಿಗೆ ಬಂದುದರ ಪರಿಣಾಮವಾಗಿ ಕೆಳ ಜಾತಿ, ವರ್ಗಗಳ ಶ್ರಮಿಕರು ಗುಂಪು ಗುಂಪುಗಳಾಗಿ ಪಶು-ಪ್ರಾಣಿಗಳಂತೆ ವಲಸೆ ಹೋಗುವ ಅವಸ್ಥೆ ಬಂದೊದಗಿದೆ. ಮತ್ತೊಂದು ಕಡೆ ಇಂಗ್ಲಿಷ್ ಕಲಿತ ಮೇಲ್ಜಾತಿಯ ಹುಡುಗರು ನಗರ ಜೀವನಕ್ಕೆ ಹಾತೊರೆಯುವುದು ಮತ್ತು ಕೆಲವೊಮ್ಮೆ ಅದನ್ನು ಬಿಟ್ಟು ಗ್ರಾಮ ಜೀವನಕ್ಕೆ ಹಿಂತಿರುಗುವುದು , ಈ ವಿನ್ಯಾಸವನ್ನು ಕಾರಂತರ ಬರಹದಲ್ಲಿ ಗುರುತಿಸಲಾಗಿದೆ. ಹೊಟ್ಟೆಯ ಪಾಡಿಗಾಗಿ, ದುಡಿಯುವ ಅಗತ್ಯಕ್ಕಾಗಿ ನಡೆಸುವ ವಲಸೆ ಒಂದು ರೀತಿಯದಾದರೆ, ಚಾಲ್ತಿಯಲ್ಲಿರುವ ದುಡಿಮೆಯಲ್ಲಿ ಆಸಕ್ತ ಕಳೆದುಕೊಂಡು ಹೊಸ ರೀತಿಯ ದುಡಿಮೆ ಮತ್ತು ಆದಾಯದ ಮೂಲಗಳನ್ನು ಹುಡುಕಿಕೊಂಡು ನಗರ ಪ್ರದೇಶಕ್ಕೆ ವಲಸೆ ಹೋಗುವ ಗುಂಪು ಇನ್ನೊಂದು. ಈ ಎರಡೂ ಗುಂಪುಗಳ ಸಾಂಸ್ಕೃತಿಕ ವೈಲಕ್ಷಣ್ಯಗಳನ್ನು ಕಾರಂತರ ಚೋಮನ ದುಡಿ, ಕುಡಿಯರ ಕೂಸು, ಮರಳಿ ಮಣಿಗೆ, ಬೆಟ್ಟದ ಜೀವ, ಚಿಗುರಿದ ಕನಸು ಜಾರುವ ದಾರಿಯಲ್ಲಿ ಕಾದಂಬರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ಲೇಷಿಸಲಾಗಿದೆ. "ಚೊಮನ ದುಡಿ'ಯ ಬೆಳ್ಳಿಯಂತಹ ಕೂಲಿ ಹೆಣ್ಣಾಗಲೀ, ಇಲ್ಲವೇ 'ಮರಳಿ ಮಣ್ಣಿಗೆ'ಯ ಸರಸೋತಿ, ಪಾರೋತಿ, ನಾಗವೇಣಿಯರಾಗಲೀ ಎರಡು ಪಾಳಿಯ ಕೆಲಸದಿಂದ ಮುಕ್ತರಲ್ಲ ಎಂಬ ಸೂಕ್ಷ್ಮ ವಿಚಾರಗಳನ್ನು ಗಮನಿಸುವ ಕಾರಂತರ ಬರಹದ ರೀತಿ ಅವರಿಗೇ ವಿಶಿಷ್ಟವಾದದ್ದು. ಸತ್ಯನಾರಾಯಣ ಅವರ ವಿಮರ್ಶೆ ಕಾರಂತರ ಕಾದಂಬರಿಯಂತೆಯೇ ಆಕರ್ಷಕವಾಗಿ ಓದಿಸಿಕೊಳ್ಳುವುದು ಈ ಪುಸ್ತಕದ ಹಿರಿಮೆಯಾಗಿದೆ. 

(ಕೃಪೆ: ಹೊಸತು ಎಪ್ರಿಲ್‌ 2021, ಬರಹ: ಆಶಾ ಎನ್., ಬೆಂಗಳೂರು)

Related Books