
ಖ್ಯಾತ ಲೇಖಕಿ , ನಾಡೋಜ ಡಾ. ಸಾರಾ ಅಬೂಬಕ್ಕರ್ ಅವರ ಕೃತಿ-ಚಿಂತೆ-ಚಿಂತನೆ. ಕಾಲಕಾಲಕ್ಕೆ ಈ ಲೇಖಕಿಯು ಬರೆದ ಲೇಖನಗಳ ಸಂಗ್ರಹ ಕೃತಿ ಇದು. ಸಮಾಜದಲ್ಲಿ ವಿಶೇಷವಾಗಿ ಮುಸ್ಲಿಂ ಸಮಾಜದಲ್ಲಿ ಮಹಿಳೆಯರ ಶೋಷಣೆಯ ಪರಾಕಾಷ್ಠೆಯನ್ನು ತೋರುವ ಲೇಖಕಿಯು, ಈ ವ್ಯವಸ್ಥೆಗೆ ಶಾಶ್ವತ ಪರಿಹಾರ ಬೇಕು ಎಂದೂ ಆಶಿಸುತ್ತಾರೆ. ಇಂತಹ ಆಶಯಗಳ ಲೇಖನಗಳನ್ನು ಒಳಗೊಂಡಿರುವ ಕೃತಿಯು, ಹೆಣ್ಣು-ಗಂಡಿನ ಸಮಾನತೆಯನ್ನು ಪ್ರತಿಪಾದಿಸುತ್ತದೆ.

(ಹೊಸತು, ಫೆಬ್ರವರಿ 2013, ಪುಸ್ತಕದ ಪರಿಚಯ)
ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಅಂತರಾಳದ ಚೈತನ್ಯಗಳನ್ನು ಚಿಗುರಿಸಿಕೊಳ್ಳುವ ಶಿಕ್ಷಣ ಸಿಗುತ್ತಿಲ್ಲ. ಕೇವಲ ಶವಸಂಸ್ಕಾರ ಸಂದರ್ಭದ ರೀತಿಯ ಶೃಂಗಾರದ ಶಿಕ್ಷಣವನ್ನು ನೀಡುತ್ತಿದ್ದೇವೆ. ಆದರೆ ಶಿಕ್ಷಣದ ಮುಖ್ಯ ಉದ್ದೇಶ ಸಮಾಜವನ್ನು ಅರ್ಥಮಾಡಿಕೊಂಡು ಸಮಾಜದ ಸ್ವಾಸ್ಥ್ಯವನ್ನು ನಿರಂತರವಾಗಿ ಕಾಪಾಡಲು ಶ್ರಮಿಸುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ಸಾರಾ ಅಬೂಬಕ್ಕರ್ ಅವರ ಈ ಸಂಕಲನದ ಹಲವು ಲೇಖನಗಳು ತೀವ್ರತರವಾಗಿ ಚರ್ಚಿಸುತ್ತವೆ. ಸಾಹಿತಿಯಾಗಿದ್ದೂ, ಸಾಹಿತ್ಯ ಕೃತಿಗಳಿಗಿಂತ ಸಮಾಜದ ಕುರಿತಾಗಿ ಬರೆದ ಬರಹಗಳು ಈ ಸಂಕಲನದಲ್ಲಿವೆ. ಸುಮಾರು ೪೨ ಲೇಖನಗಳಿರುವ ಈ ಸಂಕಲನದಲ್ಲಿ ಕನ್ನಡಶಾಲೆಗಳು, ಪಠ್ಯಪುಸ್ತಕಗಳ ರೂಪಿಸುವಿಕೆ, ಮುಸ್ಲಿಂ ಮಹಿಳೆಯ ಸ್ಥಿತಿಗತಿ, ಮಹಿಳಾ ವಿರೋಧಿ ಕಾನೂನುಗಳು ಮುಂತಾದ ಸಂಗತಿಗಳ ಬಗೆಗೆ ಚರ್ಚಿಸುವ, ಯೋಚನೆಗೆ ಹಚ್ಚುವ ಚಿಂತನಶೀಲ ಲೇಖನಗಳ ಸಂಗ್ರಹವಿದು, ಸಮಾಜದ ಪ್ರತಿ ಘಟನೆಗೂ ಸ್ಪ೦ದಿಸುವ ತಾಯಿ ಮನಸ್ಸಿನ ಈ ಲೇಖಕಿಯಲ್ಲಿ ಸಮಾಜಶಾಸ್ತ್ರಜ್ಜೆಯಲ್ಲಿ ಇರಬೇಕಾದ ವಿವೇಕ, ಸ್ತ್ರೀವಾದಿಯಲ್ಲಿರಬೇಕಾದ ಕಾಳಜಿ, ಹೋರಾಟಗಾರ್ತಿಯಲ್ಲಿರಬೇಕಾದ ತೀವ್ರವಾಗಿ ಮಿಡಿಯುವ ಗುಣ, ಹಾಗೂ ಸಾಮಾಜಿಕ ಬದ್ಧತೆ, ಈ ಎಲ್ಲಾ ಗುಣಗಳನ್ನು ಇಲ್ಲಿ ಕಾಣಬಹುದು. ಒಟ್ಟಾರೆ, ಸಮಾಜಮುಖಿ ಚಿಂತನೆಯ ಯುವ ಬರಹಗಾರರಿಗೆ ಕೈಪಿಡಿಯಂತಿದ್ದು, ಸುತ್ತಲಿನ ಸಮಾಜವನ್ನು ಗ್ರಹಿಸಬೇಕಾದ ವಿಧಾನಗಳ ಅನಿವಾರ್ಯತೆಯನ್ನು ಕೃತಿ ಮನದಟ್ಟು ಮಾಡುತ್ತದೆ.
©2025 Book Brahma Private Limited.