
ಚಂದ್ರಶೇಖರ ಕಂಬಾರ ಅವರ 'ಕಾಡುಕುದುರೆ'ಯ ವಸ್ತು ಉತ್ಕಟ ಕಾಮದ ಸುತ್ತ ಹರಡಿದ್ದರೂ ಅದು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಧ್ವನಿಯನ್ನು ಗುರುತಿಸಬಹುದು. ವಿಧವೆ ಗೌಡ್ತಿಯ ಮೂವರು ಮಕ್ಕಳಲ್ಲಿ ಕಿರಿಯಳಾದ ಚಂಪಿಯನ್ನು ಪ್ರೀತಿಸುವ ಹುಲಿಗೊಂಡ ಅನಿವಾರ್ಯವಾಗಿ ಹಿರಿಯ ಮಗಳಾದ ಪಾರೋತಿ ಮದುವೆಯಾಗಿರುತ್ತಾನೆ. ಹುಲಿಗೊಂಡ ಮತ್ತು ಚಂಪಿಯರ ನಡುವಿನ ಸಂಬಂಧದಿಂದ ಗೌಡ್ತಿ ಹಾಗೂ ಅವರ ಹಿರಿಯ ಮಗಳಿಗೆ ಬೇಸರ. ಮನನೊಂದಿರುವ ಗೌಡ್ತಿ ಚಂಪಿಯ ಮದುವೆಯನ್ನು ತುರ್ತಾಗಿ ಮಾಡಲು ಬಯಸುತ್ತಾಳೆ. ಗೌಡ್ತಿಯ ಆಶಯದಂತೆ ಚಂಪಿಯ ಮದುವೆಯ ತಯಾರಿ ನಡೆದರೂ ಹುಲಿಗೊಂಡ ಚಂಪಿಯರ ಬಂಡಾಯದಿಂದಾಗಿ ಮದುವೆ ನಡೆಯುವುದಿಲ್ಲ. ಹುಲಿಗೊಂಡ ರಾತ್ರಿ ಚಂಪಿಯೊಂದಿಗೆ ಕುದುರೆ ಏರಿ ಮನೆಬಿಟ್ಟು ಓಡಿ ಹೋಗಲು ಪ್ರಯತ್ನಿಸುತ್ತಾರೆ. ಗೌಡ್ತಿಯು ಬಂದೂಕಿನಿಂದ ಹಾರಿಸಿದ ಗುಂಡು ತಪ್ಪುತ್ತದೆ. ಅವರಿಬ್ಬರೂ ಕಾಡು ಸೇರುವುದರೊಂದಿಗೆ ನಾಟಕ ಕೊನೆಗೊಳ್ಳುತ್ತದೆ.

©2025 Book Brahma Private Limited.