
‘ಆಗಮಡಂಬರ’ ಇದು ಆಚಾರ್ಯ ಸಿ. ಜಿ. ವಿಜಯಸಿಂಹ ಅವರ ಅನುವಾದ ಕೃತಿಯಾಗಿದ್ದು, ಇದು ಒಂಬತ್ತನೇ ಶತಮಾನದ ಜಯಂತಭಟ್ಟನೆಂಬ ತಾರ್ಕಿಕ ರಚಿಸಿದ ನಾಟಕ. ಈ ನಾಟಕವು ತತ್ವಶಾಸ್ತ್ರವನ್ನು ತಿಳಿಯ ಬಯಸುವ ಎಲ್ಲರಿಗೂ ಪ್ರವೇಶಿಕೆಯಾಗಿ ನಿಲ್ಲುತ್ತದೆ. ವೇದಾಂತ ಸಾಮ್ರಾಜ್ಯದಲ್ಲಿ ಅದ್ವೈತ ಸ್ಥಾಪನೆಯಾದ ಹೊಸ್ತಿಲಲ್ಲೇ ಅದ್ವೈತ ಮತ್ತು ವಿಶಿಷ್ಟಾದೈತ ಸ್ಥೂಲ ಹಾಗು ತತ್ವವಾದ ಸ್ಥಾಪನೆಯಾಗುವ ಮುನ್ನ ಭಾರತದಲ್ಲಿ ಷಣ್ಮತಗಳದರ್ಶನ ಹಾಗೂ ಅಂದಿನ ಕಾಲದ ಬೌದ್ಧಿಕಮಟ್ಟವನ್ನು ಸ್ಥೂಲವಾಗಿ ಪರಿಚಯಿಸುತ್ತದೆ. ಇಲ್ಲಿ ಬೌದ್ಧ, ಚಾರ್ವಾಕ, ನೈಯಾಯಿಕ, ನಾಸ್ತಿಕ, ಹೀಗೆ ಅನೇಕ ಮತಗಳ ವಿಮರ್ಶೆಯನ್ನು ಕಾಣಬಹುದು. ಈ ಕೃತಿಯಲ್ಲಿ ವೇದ - ಆಗಮಗಳ ಪ್ರಾಮಾಣಿಕತೆಯ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸಲಾಗಿದೆ, ಇದು ಸಜ್ಜನರ ನಂಬಿಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ ಮತ್ತು ತಾತ್ವಿಕ ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಈ ನಾಟಕ ಅಧ್ಯಯನ ಮಾಡುವುದರಿಂದ ಬೌದ್ಧರು ಭಾರತವನ್ನು ತೊರೆಯಲು ಯಾರು ಕಾರಣರಾದರು ಎನ್ನುವುದು ಐತಿಹಾಸಿಕವಾಗಿ ಸ್ಪಷ್ಟವಾಗುತ್ತದೆ. ಹೀಗೆ ಆ ಕಾಲದಲ್ಲಿ ಪ್ರಚಲಿತವಾಗಿದ್ದ ಎಲ್ಲ ಅವೈದಿಕ-ನಾಸ್ತಿಕ್ಯಮತಗಳ ವಿಮರ್ಶೆ, ಅಲ್ಲಿಂದ ವೇದ-ಆಗಮಗಳ ಪ್ರಮಾಣ್ಯವನ್ನು ಸ್ಥಾಪಿಸಿ ಜಯಭೇರಿ ಬಾರಿಸಿದ ಪೂರ್ಣಚಿತ್ರವನ್ನು ಕಾಣಬಹುದು. ಯಾರೇ ಒಬ್ಬ ವಿದ್ಯಾರ್ಥಿ ತತ್ವಶಾಸ್ತ್ರಕ್ಕೆ ಪ್ರವೇಶ ಪಡೆಯಬೇಕಿದ್ದರೆ, ಮತತ್ರಯಗಳು ಕಾಲಿಡುವ ಮುನ್ನ ವಿದ್ವತ್ ಪ್ರಪಂಚದ ಬೌದ್ಧಿಕ ಚಿತ್ರಣವನ್ನು ಅರಿಯುವುದು ತುಂಬ ಮುಖ್ಯವಾಗುತ್ತದೆ ಹಾಗು ತತ್ವಶಾಸ್ತ್ರದ ಪಯಣದಲ್ಲಿ ಮುಂದಿನ ಅಧ್ಯಯನಕ್ಕೂ ಅನುಕೂಲವಾಗುತ್ತದೆ.
©2025 Book Brahma Private Limited.