”ಚೆಲುವಿನ ನಿಲುವು ’ ಕವಿ ವಿ.ಕೃ. ಗೋಕಾಕ ಅವರ 13 ಪ್ರಬಂಧಗಳ ಸಂಕಲನ. ಪ್ರತಿ ಪ್ರಬಂಧವು ಲೇಖಕರ ಅಧ್ಯಯನದ ಆಳ-ವಿಸ್ತಾರಗಳ ಸೂಚಕವಾಗಿವೆ. ವಸ್ತು ವೈವಿಧ್ಯತೆ ಇದೆ. ಗದ್ಯ ಶೈಲಿಯು ತುಂಬಾ ಸರಳವಾಗಿದ್ದು, ಪರಿಣಾಮಕಾರಿಯಾಗಿದೆ. ವಿವೇಚನೆಯನ್ನು ಪ್ರೇರೇಪಿಸುವ ಸಾಮರ್ಥ್ಯ ಇಲ್ಲಿಯ ಪ್ರಬಂಧಗಳಿಗಿದೆ. ಚೆಲುವಿನ ನಿಲುವುಗಳನ್ನು ಅನಾವರಣಗೊಳಿಸುತ್ತವೆ. ಇಲ್ಲಿಯ ಬರಹಗಳು ಸೌಂದರ್ಯಶಾಸ್ತ್ರದ ಮೂಲತತ್ವಗಳನ್ನು ವಿವೇಚಿಸುತ್ತವೆ. ನೆನಹು-ಕತೆಗಳ ರಸನಿಮಿಷಮಾಲೆ ಎಂದು ವರ್ಣಿಸಲಾಗಿದೆ. ಜೀವನದಲ್ಲಿಯ ಆನಂದ, ಅಂತರಂಗದ ಕದ, ಸೃಷ್ಟಿ-ದೃಷ್ಟಿಗಳ ಸಮ್ಮೀಳನ, ದೃಷ್ಟಿ ದೋಷ, ಚೆಲುವಿನ ನಾಲ್ಕು ಲೋಕಗಳು, ಸಾಹಿತ್ಯದಲ್ಲಿ ಸೌಂದರ್ಯ, ಚೆಲುವಿನ ಪರಂಪರೆ, ಪ್ರಕೃತಿಯ ರೂಪರಾಶಿ, ಸ್ತ್ರೀರೂಪ (1), ರೂಪದ ಬಗ್ಗೆ ಸಂಯಮ, ಸ್ತ್ರೀರೂಪ (2)-ರೂಪದ ಶಕ್ತಿ, ಪ್ರೀತಿ-ಶಾಂತಿ, ಸೌಂದರ್ಯವೇ ಸತ್ಯ, ದೈವ ಹೀಗೆ ಶೀರ್ಷೀಕೆಯ ಪ್ರಬಂಧಗಳಿವೆ.
ಮನುಷ್ಯ ಎಷ್ಟೇ ಪ್ರಯತ್ನಿಸಿದರೂ ಕೊನೆಗೆ ಫಲಿತಾಂಶ ಎಲ್ಲವೂ ದೈವಾಧೀನ ಎಂಬುದು ಲೇಖಕರ ಗಟ್ಟಿ ನಿಲುವು. ‘ದೈವ’ ಶೀರ್ಷಿಕೆಯ ಪ್ರಬಂಧವು ಈ ತತ್ವವನ್ನೇ ಪ್ರತಿಪಾದಿಸುತ್ತದೆ. ಇಂಗ್ಲೆಂಡಿನ ಫೀಲ್ಡ್ ಪ್ಲೇಸ್ (ಕವಿ ಶೆಲ್ಲಿಯ ಜನ್ಮಸ್ಥಳ) ಲೇಖಕರಿಗೆ ಇಷ್ಟವಾದ ಸ್ಥಳ. ಸ್ಕಾಟ್ ಲ್ಯಾಂಡ್ ಪ್ರವಾಸದಲ್ಲಿರುವಾಗ ಕರುಳಬೇನೆಯಿಂದ ಆಸ್ಪತ್ರೆಗೆ ದಾಖಲಾದಾಗ, ಮತ್ತೇ ಅಸ್ವಸ್ಥರಾದಾಗ ಎಡಿನ್ ಬರೋ ಆಸ್ಪತ್ರೆಯಲ್ಲಿದ್ದಾಗಲೂ ಅವರು ದೈವದ ಆಟವನ್ನು ಕಾಣುತ್ತಾರೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ದಲ್ಲಿಇವರಿಗೆ ಪ್ರಥಮ ದರ್ಜೆಯ ಪದವಿ ದಯಪಾಲಿಸುತ್ತಾರೆ. ಈ ಎಲ್ಲದರಲ್ಲೂ ದೈವದ ಅಂಶವೇ ಪ್ರಧಾನವಾಗಿ ಕಾಣಿಸುತ್ತಾರೆ ಎಂಬುದು ಲೇಖಕರ ಅನುಭವ ಹಾಗೂ ಪ್ರಬಂಧಗಳ ಪ್ರಧಾನ ಸಂದೇಶವೂ ಆಗಿದೆ. ಲೇಖಕರು ಹೇಳುತ್ತಾರೆ; ನನ್ನ ಜೀವನದ ಚಮತ್ಕೃತಿಗಳಲ್ಲಿ ಇದೊಂದು. ನಾವು ನಮ್ಮ ಜೀವನವನ್ನು ಬಾಳಿದರೂ ದೈವವೇ ಅದರ ನಕ್ಷೆಯ ರೂಪುರೇಷೆಗಳನ್ನು ಬರೆಯುತ್ತಿರುವುದೆಂದು ಅನೇಕ ಸಲ ನನಗನ್ನಿಸಿದೆ’ ಎಂದು ಹೇಳುತ್ತಾರೆ.
‘‘ಗೋಕಾಕರು ನುಡಿಯುವಾಗ ಇದೇ ಶ್ರದ್ಧೆ, ಸಂಸ್ಕೃತಿಗಳಲ್ಲಿ ಬೆಳೆದುಬಂದ ನಾವು ಅವರ ಈ ಸಂವೇದನೆಗೆ ಹೌದೆಂದು ಸ್ಪಂದಿಸುತ್ತೇವೆ. "ದೈವ"ದಲ್ಲಿ ವಿನಾಯಕರು ತಮ್ಮ ವ್ಯಕ್ತಿತ್ವದ ಕವಚವನ್ನೇ ತೆರೆದಿಟ್ಟು ಅಂತರಂಗದ ದರ್ಶನವನ್ನು ಮಾಡಿಸಿದ್ದಾರೆ’ ಎಂದು ಸಾಹಿತಿ ಎನ್ಕೆ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
1949 ರಲ್ಲಿ, ಮೊದಲಬಾರಿಗೆ ಹಾವೇರಿಯ ಆನಂದವನದ ಶೇಷಾಚಲ ಗ್ರಂಥಮಾಲೆ ಪ್ರಕಾಶನದಡಿ ಈ ಕೃತಿ ಪ್ರಕಟಗೊಂಡಿತ್ತು. ಆಗ ಈ ಕೃತಿಯ ಬೆಲೆ 1 ರೂ. 12 ಆಣೆ. ನಂತರ, ಧಾರವಾಡದ ಪ್ರತಿಭಾ ಗ್ರಂಥಮಾಲೆಯು 1961ರಲ್ಲಿ ಪ್ರಕಟಿಸಿತ್ತು. ಪುಟಗಳು : 155.
©2024 Book Brahma Private Limited.