
ಸಾಹಿತ್ಯ ವಿಮರ್ಶೆಯ ಪಾರಿಭಾಷಿಕ ಪದಗಳನ್ನು ವಿವರಿಸುವ ಓ.ಎಲ್. ನಾಗಭೂಷಣ ಸ್ವಾಮಿಯವರ ’ವಿಮರ್ಶೆಯ ಪರಿಭಾಷೆ’ ಸಾಹಿತ್ಯ ಮತ್ತು ವಿಮರ್ಶಾಲೋಕವನ್ನು ಪ್ರವೇಶಿಸುವವರೆಲ್ಲರೂ ಓದಲೇಬೇಕಾದ ಗ್ರಂಥ. ೧೯೮೩ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ಇದು. ವಿಮರ್ಶೆ ಅಥವಾ ಯಾವುದೇ ಜ್ಞಾನವಲಯ ಬೆಳೆಯುತ್ತಲೇ ಇರುವಂಥದ್ದು. ಅದನ್ನು ಒಂದು ಬೊಗಸೆಯಲ್ಲಿ ಹಿಡಿದಿಡಲೂ ದೊಡ್ಡಮಟ್ಟದ ವಿದ್ವತ್ತು ಬೇಕು. ವಿಮರ್ಶೆಯ ಆಳ ಅಗಲವಂತೂ ಅರಿವಿರಲೇ ಬೇಕು. ಹಾಗೆಂದೇ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ’ವಿಮರ್ಶೆಯ ಪರಿಭಾಷೆ’ಯನ್ನು ಓದಿ ’ಈ ಕೆಲಸ ಸಾಮಾನ್ಯವಾದದ್ದಲ್ಲ. ಅಭಿನಂದನೆಗಳು’ ಎಂದು ಪ್ರತಿಕ್ರಿಯಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ, ’ಕನ್ನಡ ಸಾರಸ್ವತ ಪ್ರಪಂಚದ ಕೃತಜ್ಞತೆಗೆ ಪಾತ್ರವಾಗಬಲ್ಲ ಕೃತಿ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಎಲ್.ಎಸ್. ಶೇಷಗಿರಿ ರಾವ್, ’ಪರಿಭಾಷೆ ಪದಗಳ ವಿವರಣೆ ವಿಮರ್ಶೆಯ ಸಾಹಿತ್ಯ ವಿಮರ್ಶೆಯ ಸಾಹಿತ್ಯದ ಗಂಭೀರ ಅಭ್ಯಾಸದಲ್ಲಿ ಆಸಕ್ತಿ ಇರುವವರಿಗೆ ನೆರವಾಗುವ ಪ್ರಕಟಣೆ’ ಎಂದು ಕರೆದಿದ್ದಾರೆ.
ಕನ್ನಡ ಸಾರಸ್ವತಲೋಕದ ದಿಗ್ಗಜರ ಈ ಮೆಚ್ಚುಗೆಯ ಮಾತುಗಳು ಕೃತಿಯ ಹಿರಿಮೆಯನ್ನು ಸಾರುತ್ತವೆ. ಹಾಗೆ ಪುಸ್ತಕವನ್ನು ಮೆಚ್ಚಿ ಮಾತನಾಡಿದವರ ಪಟ್ಟಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ. ಎಚ್.ಎಸ್. ರಾಘವೇಂದ್ರ ರಾವ್ ಕೃತಿಯನ್ನು ತುಂಬಾ ಉಪಯುಕ್ತ ಸೋರ್ಸ್ ಬುಕ್ ಎಂದು ಕರೆದರೆ ಟಿ.ಪಿ. ಅಶೋಕ, ’ಭಾಷಾವಿಜ್ಞಾನ, ಸಾಹಿತ್ಯ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ, ಸಾಮಾನ್ಯ ಓದುಗರಿಗೂ ಪ್ರಿಯವಾಗಬಲ್ಲ ಅಪರೂಪದ ಕೃತಿ’ ಎಂದು ಮೆಚ್ಚುಗೆ ಸೂಸಿದ್ದಾರೆ. ’ಇಂಗ್ಲಿಷ್ ಬಾರದ ಸಾಹಿತ್ಯಪ್ರಿಯರ ಬಹುದೊಡ್ಡ ಅಗತ್ಯವನ್ನು ಪೂರೈಸಿರುವ ಪುಸ್ತಕ’ ಎಂಬ ವರ್ಣನೆ ಲೇಖಕ ಎಸ್. ದಿವಾಕರ್ ಅವರದು.
ವಿಮರ್ಶೆಯ ಪರಿಭಾಷೆ (ಸಾಹಿತ್ಯ ವಿಮರ್ಶೆಯ ಪಾರಿಭಾಷಿಕ ಪದಗಳ ವಿವರಣೆ, ಲೇಖಕರು- ಓ.ಎಲ್.ನಾಗಭೂಷಣಸ್ವಾಮಿ

©2025 Book Brahma Private Limited.