ಒಡನಾಡಿಯ ಒಡಲಾಳ

Author : ಸ್ಟ್ಯಾನ್ಲಿ

Pages 370

₹ 350.00




Year of Publication: 2020
Published by: ಅಭಿರುಚಿ ಪ್ರಕಾಶನ
Address: .# 386, 3ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಸರಸ್ವತಿಪುರ, ಮೈಸೂರು-09.

Synopsys

ಸ್ಟ್ಯಾನ್ಲಿ- ಪರಶು ಅವರ ಕೃತಿ-ಒಡನಾಡಿಯ ಒಡಲಾಳ. ಆತ್ಮೀಯ ಬರಹಗಳ ಸಂಕಲನವಿದು. ಹತ್ತು ಹಲವು ಘಟನೆಗಳನ್ನು, ವ್ಯಕ್ತಿ ಚಿತ್ರಗಳನ್ನು, ಸಂದಿಗ್ಧತೆಗಳನ್ನು ರೋಚಕ ತಿರುವುಗಳನ್ನು, ಮನೋಸಮಾಧಾನ ನೀಡಿದ ತೃಪ್ತಿಯನ್ನು ಪದಗಳಲ್ಲಿ ಹೆಣೆದು ಪುಸ್ತಕವಾಗಿಸಿದ್ದಾರೆ. ನಾವು, ಏನೇನೋ ಆಗಬೇಕೆಂದುಕೊಳ್ಳುತ್ತೇವೆ. ಆದರೆ ಅಂತಃಕರಣದ ಸೆಲೆಯೊಂದು ನಮ್ಮ ಬದುಕಿಗೆ ತಿರುವು ನೀಡಲಿದೆ ಎಂಬುದನ್ನು ಊಹಿಸಿಕೊಂಡೂ ಇರಲಿಲ್ಲ. ಯಾವ ತರಬೇತಿಯೂ ಇಲ್ಲದ, ಪ್ರಾಥಮಿಕ ಮಾಹಿತಿಯೂ ಇಲ್ಲದ ಕ್ಷೇತ್ರವೊಂದರಲ್ಲಿ ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುತ್ತಾ, ಅದರಿಂದಲೇ ಕಲಿಯುತ್ತಾ, ಸೇವೆ ಹಾಗೂ ಹೋರಾಟವನ್ನು ಬದುಕಿನೊಡನೆ ಮೇಳೈಸಿ, ವರ್ಷಗಳನ್ನು ಕಳೆದದ್ದು ಒಮ್ಮೊಮ್ಮೆ ಸೋಜಿಗವಾಗಿ ಕಾಣುತ್ತದೆ. ಆರಂಭದಲ್ಲಿ ಅದು ನಮ್ಮ ಬದುಕಿನ ಆಯ್ಕೆಯಾಗಿರಲಿಲ್ಲವೆಂಬುದು ನಿಜವಾದರೂ, ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡ ಸೇವಾಕ್ಷೇತ್ರದ ಬಗ್ಗೆ ಅದಮ್ಯ ಪ್ರೀತಿ ಹಾಗೂ ಗೌರವವಿರುವ ನಾವು ಕಂಡ ಸೂಕ್ಷ್ಮಸತ್ಯಗಳನ್ನು ಲೇಖಕರು ಕಾಣಿಸಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ಸ್ಟ್ಯಾನ್ಲಿ

ಲೇಖಕ ಸ್ಟ್ಯಾನ್ಲಿ ಅವರು ಮೈಸೂರಿನಲ್ಲಿ ತಮ್ಮ ಒಡನಾಡಿ ಪರಶು ಜೊತೆಗೂಡಿ ‘ಒಡನಾಡಿ’ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕರು. ಒಡನಾಡಿಯ ಒಡಲಾಳ-ಸಹೋದ್ಯೋಗಿ ಪರಶು ಅವರೊಂದಿಗೆ ಬರೆದ ಬರಹಗಳ ಸಂಕಲನ. ...

READ MORE

Reviews

ಬಯಲಾಗುವ ಮನುಷ್ಯತ್ವದ ಬಂಡವಾಳ

'ಒಡನಾಡಿಯ ಒಡಲಾಳ' ಎಂಬುದು ಮನುಷ್ಯತ್ವದ ಬಂಡವಾಳ ಬಯಲು ಮಾಡುವ ಕೃತಿ. ಮೈಸೂರಿನ ಒಡನಾಡಿ ಸಂಸ್ಥೆಯ ಸ್ನಾನಿ-ಪರಶು ಅವರ ಹೋರಾಟದ ಕತೆಗಳು ಇದರಲ್ಲಿ ಇವೆ. ಹಣ ಗಳಿಸುವುದಕ್ಕಾಗಿ ಮನುಷ್ಯ ಯಾವ ಮಟ್ಟಕ್ಕೂ ಇಳಿಯುತ್ತಾನೆ ಎನ್ನುವುದನ್ನು ಪುರಾವೆ ಸಹಿತ ಈ ಕೃತಿ ಬಹಿರಂಗಪಡಿಸುತ್ತದೆ. ಒಂದೊಂದು ಕತೆಯನ್ನು ಓದಿ ಮುಗಿಸಿದ ಅನಂತರವೂ ಸಾಮಾಜಿಕ ವ್ಯವಸ್ಥೆಯ ಬಗ್ಗೆ, ಪುರುಷನ ಕ್ರೌರ್ಯದ ಬಗ್ಗೆ ಸಿಟ್ಟು ಉಕ್ಕುತ್ತದೆ.

ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿ ಇರುವಂತೆ ಕಾಣುವ ಸಮಾಜ ತೆರೆಯ ಹಿಂದೆ ಎಷ್ಟೊಂದು ಹುಳುಕುಗಳನ್ನು ಹೊತ್ತುಕೊಂಡಿದೆ, ಭೀಕರವಾಗಿದೆ, - ಅಮಾನವೀಯವಾಗಿದೆ ಎನ್ನುವುದನ್ನು ಕೃತಿ ಹಂತಹಂತವಾಗಿ ಬಿಚ್ಚಿಡುತ್ತದೆ, ಬೆಚ್ಚಿ ಬೀಳಿಸುತ್ತದೆ. ಮೇರೆಮೀರಿದ ಪುರುಷನ ಕ್ರೌರ್ಯ, ಹೆಣ್ಣಿನ | ಅಸಹಾಯಕತೆ, ಗಂಡಸಿನ ಕಾಮದ ಹಸಿವು, ಹೆಣ್ಣಿನ ಹೊಟ್ಟೆಯ ಹಸಿವು ಎಲ್ಲವೂ ಇಲ್ಲಿ ಬಯಲಾಗುತ್ತವೆ. ಪುಸ್ತಕ ಓದಿ ಮುಗಿಸಿದಾಗ ಎಲ್ಲ ಪುರುಷರೂ ಬೆತ್ತಲಾದ ಅನುಭವ. ಪುರುಷ ಜನಾಂಗದ ಮೇಲೆ ಹೇಸಿಗೆಯ ಭಾವ ಹುಟ್ಟಿದರೆ ಅಚ್ಚರಿಯಲ್ಲ.

ಲೈಂಗಿಕ ಕಾರ್ಯಕರ್ತೆಯರ ಆತ್ಮಕತೆಗಳೂ ಕನ್ನಡದಲ್ಲಿ ಬಂದಿವೆ. ಆದರೆ ಇದು ಇಂತಹ ಹಲವಾರು ಹತಭಾಗೈಯರ ಕತೆ, ಕತ್ತಲ ಕೂಪಕ್ಕೆ ಅವರನ್ನು ತಳ್ಳಿದ ಕತೆ. ಅಲ್ಲಿಂದ ಅವರನ್ನು ಬಿಡಿಸಲು ಸ್ಟಾನಿ-ಪರಶು ನಡೆಸಿದ ಹೋರಾಟದ ಕತೆ. ಈ ಹೋರಾಟದಲ್ಲಿ ಸೋಲು ಗೆಲುವು ಎರಡೂ ಇವೆ. ಎಲ್ಲವನ್ನೂ ಅವರು ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. ವೇಶ್ಯಾವಾಟಿಕೆ ಎನ್ನುವುದು ಪುರಾತನ ಉದ್ಯೋಗ, ಎಲ್ಲ ಸಮಾಜಗಳಲ್ಲಿಯೂ ಎಲ್ಲ ದೇಶಗಳಲ್ಲಿಯೂ ಅದು ಮಾಮೂಲು ಎಂದು ಹೇಳುತ್ತಾ ಅದನ್ನು ಸಮರ್ಥಿಸಿಕೊಳ್ಳುತ್ತಾ ಬಂದಿರುವ ಸಮಾಜ ಕಾನೂನು ಬಾಹಿರ, ಅನೈತಿಕ ಮತ್ತು ಹಿಂಸಾತ್ಮಕ ಉದ್ಯಮವನ್ನು ಹೇಗೆ ಬೆಳೆಸುತ್ತಿದೆ ಎನ್ನುವುದರ ಮೇಲೆಯೂ ಈ ಪುಸ್ತಕ ಬೆಳಕು ಚೆಲ್ಲುತ್ತದೆ.

ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಮಾನಸಿಕ ಸ್ಥಿತಿ, ಮಹಿಳೆಯರನ್ನು ಇಂತಹ ಕೂಪಕ್ಕೆ ಕೆಡವಲು ಪ್ರಯತ್ನಿಸುವ ವ್ಯಕ್ತಿಗಳ ಮಾನಸಿಕ ಸ್ಥಿತಿ, ದಂಧೆಯ ವಿವಿಧ ಮುಖಗಳು, ತಂದೆ ತಾಯಿಯ ಸಂಕಟ ಎಲ್ಲವೂ ಇಲ್ಲಿ ದಾಖಲಾಗಿವೆ. ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಮೈಸೂರಿನ ಇನ್ನೊಂದು ಮುಖ ಇಲ್ಲಿ ಕಾಣ ಸಿಗುತ್ತದೆ. ಅದೇ ರೀತಿ ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವೇಶ್ಯಾವಾಟಿಕೆ ಉದ್ಯಮವಾಗಿ ಬೆಳೆದ ಬಗೆ. ಹಾಗೂ ಅದರ ಪರಿಣಾಮಗಳ ಬಗ್ಗೆಯೂ ತಿಳಿವಳಿಕೆ ನೀಡುತ್ತದೆ. ಈ ಎಲ್ಲ ಅಂಶಗಳ ಬಗ್ಗೆ ಇನ್ನಷ್ಟು ಗಂಭೀರವಾಗಿ ಚಿಂತಿಸುವಂತೆಯೂ ಮಾಡುತ್ತದೆ.

ಯಾವ ಮರ್ಯಾದಾ ಪುರುಷರೂ ಮಾಡಲು ಬಯಸದೇ ಇರುವ ಈ ಸೇವಾ ಕಾರ್ಯದಲ್ಲಿ ಸ್ನಾನಿ-ಪರಶು ಕಳೆದ ಮೂರು ದಶಕಗಳಿಂದ ತೊಡಗಿದ್ದಾರೆ. ಎಲ್ಲ ರೀತಿಯ ಅವಮಾನ, ಅವಹೇಳನ, ಸನ್ಮಾನಗಳನ್ನೂ ಪಡೆದಿದ್ದಾರೆ. ಒಡನಾಡಿಯ ಸೋಲು ಗೆಲುವಿನ ಜೊತೆಗೆ ಸಮಾಜದ ಸೋಲು ಗೆಲುವುಗಳೂ ಇಲ್ಲಿವೆ. ಹಲವು ಬಾರಿ ಒಡನಾಡಿ ಗೆದ್ದಿದೆ. ಆದರೆ ಸಮಾಜ ಎಲ್ಲ ಬಾರಿಯೂ ಸೋತಿದೆ. ಒಮ್ಮೆ ಓದಿ ಕೆಳಗಿಡುವ ಪುಸ್ತಕ ಇದಲ್ಲ. ಓದಿದ ಮೇಲೆ ನಮ್ಮೊಳಗೂ ತಳಮಳ ಉಂಟಾದರೆ ಅದೇ ಇದರ ಯಶಸ್ಸು.

(ಪ್ರಜಾವಾಣಿ 25-04-2021)

Related Books