ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ ಸಾಕ್ಷಿ’ಯು ಪುರಾಣ ಮತ್ತು ನಮ್ಮ ಈ ಇಂದ್ರಿಯ ವಾಸ್ತವ ಜಗತ್ತುಗಳನ್ನು ಜೋಡಿಸುವ ಮೂಲಕ ಮನುಷ್ಯನ ನೀತಿಯ ಬೇರುಗಳನ್ನು ಶೋಧಿಸುತ್ತದೆ. ನಿಜವೂ ನೀತಿಯ ನೆಲೆಯೋ, ನೀತಿಯು ನಿಜದ ನೆಲೆಯೋ ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಅರಗಿಸಿಕೊಂಡಿರುವ ಈ ಕಾದಂಬರಿಯ ಪಾತ್ರ ವೈಶಿಷ್ಟ್ಯ ರಚನಾ ವಿಧಾನ ಹಾಗು ಕಲಾತ್ಮಕ ಅನುಭವಗಳು ವಿಭಿನ್ನವಾಗಿರುವಂತದ್ದು.
ಭೈರಪ್ಪನವರ ಕಾದಂಬರಿ ’ಸಾಕ್ಷಿ’ ಯು ಚಿತ್ರಿಸಿರುವ ಕಥೆಯ ಬೆರಗು, ಮನುಷ್ಯನ ಧರ್ಮ, ಅರ್ಥ ಮತ್ತು ಕಾಮ, ಅಹಂಕಾರ ಮತ್ತು ಮೌಲ್ಯಗಳ ತಳಹದಿಯ ಪಾತ್ರ-ಪ್ರಸಂಗಗಳ ಚಿತ್ರಣದ ವಿವಿಧ ರೂಪಗಳ ಸೆಳೆತದಲ್ಲಿ, ಗ್ರಾಮೀಣ ಜನಜೀವನ ಮತ್ತು ಸಂಭಾಷಣೆಗಳಲ್ಲಿ ಓದುಗರ ಚಿತ್ತ ಕಳೆದುಹೋಗಿ, ಈ ಕಾದಂಬರಿಯು ಸೂಕ್ಷ್ಮವಾಗಿ, ಸೂಚಿಸುವ - ಪ್ರತಿಯೊಬ್ಬ ಜೀವಿಯಲ್ಲಿ ನಡೆಯುವ/ನಡೆಯಬೇಕಾದ/ನಡೆಯದ - ಮೌಲ್ಯವಿಶ್ಲೇಷಣೆಯನ್ನು, ಅದಕ್ಕೆ ಆಧಾರವಾದ ವಿವಿಧ ರೀತಿಯ ವ್ಯಕ್ತಿಗಳ ಅಹಂಕಾರ ಮತ್ತು ಆತ್ಮಸಾಕ್ಷಿಯ ಸ್ವರೂಪವನ್ನು ಗ್ರಹಿಸದೆ ಇದ್ದುಬಿಡುವ ಸಂಭವವಿದೆ. ಇದಕ್ಕೆ ಕಾರಣ ಕಾದಂಬರಿಯ ವಸ್ತುವಿನ ಆಕರ್ಷಣೆ ಒಂದೆಡೆಯಾದರೆ, ಅದನ್ನು ಅನನ್ಯ ರೀತಿಯಲ್ಲಿ ಪ್ರತಿನಿಧಿಸುವ ಪಾತ್ರಗಳು ಇನ್ನೊಂದೆಡೆ.
ಕಾದಂಬರಿಯಲ್ಲಿ ತನ್ನ ಸುತ್ತಲಿನ ವ್ಯಕ್ತಿಗಳನ್ನು ಪ್ರಚಂಡವಾಗಿ ಸೆಳೆಯುವ ಮಂಜಯ್ಯನಂತಹ ಖಳನಾಯಕ, ಓದುಗನ ಮನಸ್ಸನ್ನೂ ಆಕ್ರಮಿಸಿ ತನ್ನ ವಶವಾಗಿಸಿಕೊಳ್ಳುವ ಮಟ್ಟಿಗೆ. ಇಲ್ಲಿಯ ಪಾತ್ರಗಳ ಸೆಳೆತವನ್ನು ಮತ್ತು ಕಥನಶೈಲಿಯ ಆಕರ್ಷಣೆಯನ್ನು ಅನುಭವಿಸುತ್ತಲೇ, ಅವುಗಳು ಪ್ರತಿನಿಧಿಸುವ ಸೂಕ್ಷ್ಮತತ್ತ್ವಗಳನ್ನು ಗಮನಿಸಿದಲ್ಲಿ, ಪ್ರತಿಭೆಯ ಮಹಾದರ್ಶನ ನಮಗೆ ಕಾಣಸಿಗುತ್ತದೆ. ಈ ಒಂದು ಆಶ್ಚರ್ಯ, ಸಂತೋಷ ಮತ್ತು ಇಂತಹ ಚಿತ್ರಿಸಲಸಾಧ್ಯವಾದಂಥ ವಸ್ತು-ಪಾತ್ರ-ಪ್ರಕರಣಗಳ ರೂಪಣದ ಸಾಧ್ಯತೆಯನ್ನು ಲೇಖಕರು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ...
READ MORE