ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿದ ಸಮಕಾಲೀನ ವಿಷಯಗಳಿಗೆ ಸಂಬಂಧಿಸಿದ ಕಥಾ ಹಂದರವನ್ನು ಹೊಂದಿರುವ ಕೇಪಿನ ಡಬ್ಬಿ ಕೃತಿಯು ಓದುಗನನ್ನು ಸೆಳೆಯುತ್ತದೆ. ಈ ಕೃತಿಯಲ್ಲಿ ಬರುವ ಛದ್ಮವೇಷ ಕಥೆಯಲ್ಲಿ ಬಾಲ್ಯಾವಸ್ಥೆಯನ್ನು ಕಳೆದುಕೊಳ್ಳುತ್ತಿರುವ ಹುಡುಗ ಮಧುವಿನ ಮೂಲಕ ನಮಗೆ ಆ ಹುಡುಗ ನೋಡುವ ಬದುಕು ಹೇಗಿರುತ್ತದೆ ಎಂಬುದು ಅರ್ಥವಾಗುತ್ತದೆ. ಹಳ್ಳಿಯ ಹುಡುಗ ಮಧು ಯಕ್ಷಗಾನದ ಸ್ಪರ್ಧೆಗೆಂದು ಹುಬ್ಬಳ್ಳಿಗೆ ಹೋಗುವುದನ್ನು ಮುಖ್ಯವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಕಥೆ ಅದರ ಹಿಂದೆ ಮುಂದೆ ನಡೆಯುವ ಘಟನೆಗಳನ್ನು ಪ್ರಸ್ತುತ ಪಡಿಸುವ ಕ್ರಮದಲ್ಲಿಯೇ ಇಡೀ ಸನ್ನಿವೇಶದ ಸಂಕೀರ್ಣತೆಯನ್ನು ವಿವರಿಸಲಾಗುತ್ತದೆ. ಅಮ್ಮ ಮಗ ಹುಬ್ಬಳ್ಳಿಗೆ ಹೋಗಲು ತಯಾರಿ ನಡೆಸಿದರೆ ತಂದೆ ಹೋಗಬಾರದು ಎಂದು ಘೋಷಿಸುತ್ತಾನೆ. ಮುಂದೇನಾಯ್ತು? ಮಧು ಹುಬ್ಬಳ್ಳಿಗೆ ಹೋದನಾ? ಇವೆಲ್ಲವನ್ನು ತಿಳಿಯಲು ಈ ಕಥಾ ಸಂಕಲನವನ್ನು ನೀವು ಓದಲೇಬೇಕು.
’ಶೈಲಿಯ ಸಂಯಮ, ಅನುಭವದ ಗಟ್ಟಿತನ ಮತ್ತು ಬಿಗಿಯಾದ, ಮೊನಚಾದ ಭಾಷೆ ಪದ್ಮನಾಭರ ಕಥೆಗಳ ಮೂಲ ಲಕ್ಷಣಗಳು, ಆಡಂಬರವಿಲ್ಲದ, ತೋರಿಕೆಯಿಲ್ಲದ, ಜನಪ್ರಿಯತೆಯ ಹಪಾಹಪಿಯಿಲ್ಲದ ಈ ಕಥೆಗಾರ ಕನ್ನಡದ ಮುಖ್ಯ ಕಥೆಗಾರನಾಗುವ ದಾರಿಯಲ್ಲಿದ್ದಾರೆ’ ಎಂದಿರುವ ಆಶಾದೇವಿ ಅವರು ಕೇಪಿನ ಡಬ್ಬಿ ಹೇಗೆ ವಿಭಿನ್ನ ಕಥೆಯಾಗಿದೆ ಎನ್ನುವುದನ್ನು ವಿವರಿಸಿದ್ದಾರೆ.
ಪತ್ರಕರ್ತ, ಬರಹಗಾರ ಪದ್ಮನಾಭ ಭಟ್ ಅವರು ಜನಿಸಿದ್ದು 1990 ಜೂನ್ 27ರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶೇವ್ಕಾರ ಗ್ರಾಮದಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಜಾವಾಣಿಯಲ್ಲಿ ವರದಿಗಾರ ಹಾಗೂ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಪ್ರಸ್ತುತ ಸುಧಾ ವಾರಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ರಂಗಭೂಮಿ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇರುವ ಇವರ ಚೊಚ್ಚಲ ಕೃತಿ ಕೇಪಿನ ಡಬ್ಬಿ. ಈ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ, ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ-ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ -೨೦೧೨
ಛಂದ ಪ್ರಶಸ್ತಿ-2014
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ-2018