ಲೇಖಕ ಗೋಪಾಲಕೃಷ್ಣ ಕುಂಟಿನಿ ಅವರ ಕಥಾ ಸಂಕಲನ-ವಿಲೇಜ್ ವರ್ಲ್ಟು ಮತ್ತು ಇತರ 24 ಕತೆಗಳು. ಶೀರ್ಷಿಕೆಯೇ ಸೂಚಿಸುವಂತೆ ಸಂಕಲನದಲ್ಲಿ ಒಟ್ಟು 24 ಕತೆಗಳಿವೆ. ಪುರುಷೋತ್ತಮ ಮೇಷ್ಟ್ರ ಅರ್ಥಗಾರಿಕೆಯೂ ಹುಲಿ ಕೊಲೆಯೂ...!, ಅಫ್ಜಲ್ ಖಾನನ ಕೋತಿ ಬಂಧನ ಮತ್ತು ದಿನೇಶನ ಸಮಾಜಸೇವೆ, ರೆಂಬೆಮರದ ದೆವ್ವ ಮತ್ತು ಕಿಟ್ಟಣ್ಣನ ಪವಾಡ, ಇಂದೂಶೇಖರನ ಮದುವೆ ಮತ್ತು ಪ್ರಾಣಸಖಿಯ ಆವಾಂತರ, ಕೃಷ್ಣಭಟ್ಟರ ದರ್ಕಾಸ್ತು ಮತ್ತು ಒಂದು ರಾಶಿ ಕೆಂಪು ಮೆಣಸು, ಹೇಳದೇ ಹೋದ ಅವಧೂತನೂ ಮತ್ತು ಬಾಳಿಗೊಂದು ಬೆಳಕೂ ಹೀಗೆ ಕತೆಗಳು ಸಂಕಲನಗೊಂಡಿವೆ.
ಸಾಹಿತಿ ಎಸ್ಕೆ ಶಾಮಸುಂದರ ಅವರು ಕೃತಿಗೆ ಮುನ್ನುಡಿ ಬರೆದು ‘ಇಲ್ಲಿಯ ಕತೆಗಳು ಅವರಾಡುವ ಮಾತುಗಳ ಹಾಗೆ ಬಿಡುಬೀಸು. ಗ್ರಾಂಥಿಕ ಎಂಬ ಪದಕ್ಕೆ ಅವರ ಪದಕೋಶದಲ್ಲಿ ತಾವಿಲ್ಲ, ಹೇಳುತ್ತೇನೆ ಕೇಳು ಎಂಬ ಧಾಟಿ, ಹೇಳದೇ ಇದ್ಯದುದ್ದನ್ನೂ ಕೇಳು ಎಂಬ ವಿನಯ ಯಾವುದೇ ಲೇಖಕನಿಗೆ ಭೂಷಣ. ಕುಂಟಿನಿಯ ಕತೆಗಳಲ್ಲಿ ಅವೆರೆಡೂ ಸ್ಥಾಯಿ. ಎಷ್ಟೊಂದು ಸಂಗತಿಗಳನ್ನು ಈ ಕತೆಗಳು ಅನಾವರಣಗೊಳಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಜೋಗಿ ಅವರು ‘ಈ ಬರಹಗಳನ್ನು ಸೊಗಯಿಸಿರುವುದು ಕುಂಟಿನಿಯ ಸೊಗಸಾದ ಭಾಷೆ. ಈ ಭಾಷೆ ಏರಿ ಇಳಿದು ಬಾಗಿ ಬಳುಕಿದೆ. ತನ್ನೂರಿನ ತನ್ನ ಜನಗಳ ಚರಿತ್ರೆಯನ್ನು ಚರ್ವಿತ ಚರ್ವಣ ಆಗದಂತೆ ಹೇಳಿರುವ ಈ ಕತೆಗಳನ್ನು ಜ್ಞಾಪಕ ಚಿತ್ರಶಾಲೆ , ನಮ್ಮ ಊರಿನ ರಸಿಕರು, ಪರಿಸರದ ಕಥೆಗಳು ಶೈಲಿಯ ಕಥನಗಳ ಹಾಗೆ ಈ ಪ್ರಸಂಗಗಳು ನಮ್ಮ ಮನಸ್ಸಿನಲ್ಲಿ ನಿರಂತರ ನೆಲೆಸುವಂಥವು’ ಎಂದು ಶ್ಲಾಘಿಸಿದ್ದಾರೆ.
ಕೃತಿಯ ಕುರಿತು ಸ್ವತಃ ಲೇಖಕ ಗೋಪಾಲಕೃಷ್ಣ ಕುಂಟಿನಿ ‘ಒಂದೊಂದು ಪ್ರಸಂಗಗಳೂ ಹಳ್ಳಿ ಮತ್ತು ಕಾಡಿನ ಬದುಕಿನಲ್ಲಿ ಹೊಕ್ಕು ಹೊರಟ ನಾಗರಿಕ ಜಗತ್ತಿನ ಚಿತ್ರಿಕೆಗಳು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯವರು. ಕತೆಗಾರರಾಗಿರುವ ಗೋಪಾಲಕೃಷ್ಣ ಅವರು ‘ಅಪ್ಪನ ನೀಲಿಕಣ್ಣು’, ‘ಪೂರ್ಣ ತೆರೆಯದ ಪುಟಗಳು’ ಎಂಬ ಕತೆಗಳ ಸಂಕಲನ ಪ್ರಕಟಿಸಿದ್ದಾರೆ. ’ಆಮೇಲೆ ಇವನು’ ಮತ್ತು ’ವೃತ್ತಾಂತ ಶ್ರವಣವು’ ಅವರ ಪ್ರಕಟಿತ ಕೃತಿಗಳು. ಪತ್ರಕರ್ತ ಗೆಳೆಯ ಜೋಗಿ (ಗಿರೀಶರಾವ್ ಹತ್ವಾರ) ಅವರೊಂದಿಗೆ ಸೇರಿ ಆರಂಭಿಸಿದ ’ಕಥಾಕೂಟ’ವು ಕತೆಗಳ ರಚನೆ-ಚರ್ಚೆಗೆ ಅನುವು ಮಾಡಿಕೊಟ್ಟಿದೆ. ...
READ MORE