ಕವಿಯಾಗಿ ಗುರುತಿಸಿಕೊಂಡಿರುವ ಜ್ಯೋತಿ ಗುರುಪ್ರಸಾದ್ ’ತಂತಿ ಪಕ್ಷಿ’ ಮೂಲಕ ಕಥಾಲೋಕ ಪ್ರವೇಶಿಸಿದವರು. ’ತಂತಿ ಪಕ್ಷಿ’ ಹುಟ್ಟಿದುದರ ಹಿನ್ನೆಲೆ ಕುತೂಹಲಕರವಾಗಿದೆ. ಕಥೆಗಾರ ಅಬ್ದುಲ್ ರಷೀದ್ ಗೋಷ್ಠಿಯೊಂದರಲ್ಲಿ ಹೇಳಿದ ಮಾತು ಶೀರ್ಷಿಕೆ-ಕತೆ ಹುಟ್ಟಲು ಪ್ರೇರಣೆಯಾಯಿತು. ಇನ್ನು ಇಲ್ಲಿನ ಉಳಿದ ಕತೆಗಳ ಹಿಂದೆ ’ಪ್ರಜಾವಾಣಿ’ ಮತ್ತು ’ಮಯೂರ’, ’ವಾರ್ತಾಭಾರತಿ’ ಮತ್ತಿತರ ಪತ್ರಿಕೆಗಳ ಸಂಪಾದಕರ ಪ್ರೇರಣೆ ಒತ್ತಡ ಇದೆ ಎಂದು ಪ್ರೀತಿಯಿಂದ ನೆನೆದಿದ್ದಾರೆ.
ಪ್ರಕಾಶಕರು ಕೃತಿಯ ಬಗ್ಗೆ ಹೇಳಿರುವ ಮಾತುಗಳು ಹೀಗಿವೆ: ’ಓದಲೇಬೇಕಾದ ಕತೆಗಳಿವು. ಇಲ್ಲಿರುವ ಹದಿನೈದು ಕತೆಗಳು ಒಂದು ಬಗೆಯ ವಿಶಿಷ್ಟತೆಯಿಂದ ಒಂದೇ ಬಿಂದುವಿನಲ್ಲಿ ಸಂಧಿಸುತ್ತವೆ. ಆ ವಿಶಿಷ್ಟತೆಯೇ ’ತಂತಿ ಪಕ್ಷಿ’ ಪ್ರತಿಮೆಯ ಕ್ರಮ. ಇಲ್ಲಿ ಪ್ರಶಾಂತ ಮನಸ್ಸೊಂದರ ಶೋಧನೆಯ ಸ್ತ್ರೀಯಾತ್ಮಕ ನೆಲೆಗಟ್ಟಿನ ಆಪ್ತ ದೃಷ್ಟಿಕೋನವಿದೆ. ಜೀವನೋತ್ಸಾಹದ ಹೊಳಹುಗಳಿವೆ. ಸರಳತೆಯ ದಾರಿಯಿದೆ. ಸಮಾಧಾನದ ಅಲೆಯಿದೆ. ಹದಿನೈದು ಕತೆಗಳ ವಿಭಿನ್ನ ಚಿತ್ರಗಳು ಮನಸ್ಸಿನಲ್ಲಿ ದೃಶ್ಯವಾಗಿ ಮೂಡುತ್ತ ಹೊಸತನಕ್ಕೆ ಒಡ್ಡಬಲ್ಲ ಒಂದು ಸೃಜನಶೀಲ ಪಯಣವಿದು’.
ಪ್ರೀತಿ ಪ್ರೇಮ ದಾಂಪತ್ಯಗಳ ವಿಷಯಗಳ ಮೇಲೆ ನವಿರಾಗಿ ಕಾವ್ಯ ಸೃಷ್ಟಿಸುತ್ತಿರುವ ಜ್ಯೋತಿ ಗುರುಪ್ರಸಾದ್ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಟಿ. ನರಸೀಪುರ ಮೂಲದವರಾದ ಅವರು ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಎಸ್.ವಿ.ಟಿ. ಮಹಿಳಾ ಕಾಲೇಜು, ಕ್ರೈಸ್ಟ್ಕಿಂಗ್ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಜ್ಯೋತಿ ಅವರ ಮೊದಲ ಕವನ ಸಂಕಲನ’ಚುಕ್ಕಿ’ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ’ಮಾಯಾಪೆಟ್ಟಿಗೆ’, ’ವರನಂದಿ ಪ್ರತಿಮೆ’, ...
READ MORE