ಕೈರೊಟ್ಟಿ ಮತ್ತು ಇತರ ಕಥೆಗಳು

Author : ತಿರುಪತಿ ಭಂಗಿ

₹ 120.00




Year of Publication: 2016
Published by: ಗೌರಿ ಪುಸ್ತಕ ಪ್ರಕಾಶನ
Address: ಬಾಗಲಕೋಟೆ

Synopsys

‘ಕೈರೊಟ್ಟಿ’ ಕೃತಿಯು ತಿರುಪತಿ ಭಂಗಿ ಅವರ ಕಥಾಸಂಕಲನವಾಗಿದೆ. ಕೈರೊಟ್ಟಿ ಕತೆಯೊಳಗೆ ಕೇರಿಯ ಅಜ್ಜಿಯ ಕೈರೊಟ್ಟಿ ತಿಂದಿದ್ದಕ್ಕೆ, ಅಜ್ಜಿಯ ಮೊಮ್ಮಗನನ್ನು ಕಂಬಕ್ಕೆ ಕಟ್ಟಿ ಬಾರ್ಕೊಲ ಏಟ ಹಾಕಿದ್ದನ್ನು ಕೇಳಿದ ಅಜ್ಜಿ ಓಡೋಡಿ ಬರುವದರಲ್ಲಿ ಗುಡಿ ಮುಂದ್ಲ ಬೊರಗಲ್ಲಿಗೆ ಏಡವಿ ಬಿದ್ದು ಕೊನೆ ಉಸಿರೆಳದ ಅಜ್ಜಿಯನ್ನು ನೆನೆಯತ್ತ ನಿಂತ ಮೊಮ್ಮಗ, ಇಲ್ಲಿ ಮೇಲು- ಕೀಳು ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ. 'ಚಾಕ್ರಿ' ಕಥೆಯಲ್ಲಿ, ಸಮಾಜ ಸಂಪ್ರದಾಯವು ಬದುಕನ್ನು ಹೇಗೆ ಭಿನ್ನ ದಿಕ್ಕಿಗೆ ತಿರುಗಿಸುತ್ತದೆ ಎಂದು ಹೇಳಲಾಗಿದೆ. 'ಕೃಷ್ಣೆ ಹರಿದಳು' ಕಥೆಯಲ್ಲಿ ನಿಸರ್ಗದ ವಿಕೋಪಕ್ಕೆ ಬಲಿಯಾಗುವ ಸಮಾಜವು ಮೂಢನಂಬಿಕೆಯನ್ನು ಪಾಲಿಸುವ ಪರಿ, ಮಾನವನ ಅಸಹಾಯಕತೆಯನ್ನು ತೋರಿಸುತ್ತದೆ. 'ನೀಲಿ' ಕಥೆಯಲ್ಲಿ ಅಮರ ಪ್ರೇಮಿಯಾಗಿ ಮೇಲ್ವರ್ಗದ ದಬ್ಬಾಳಿಕೆಗೆ ಬಲಿಯಾಗುವ ರಂಗನ ಪಾತ್ರ ಬದುಕಿನ ತಿರುವುಗಳಿಗೆ ಸಾಕ್ಷಿಯಾಗಿದೆ. 'ಸಾವಿಗೂ ನೋವಿಗೂ ನಾಕಾಣೆ ಕಿಮ್ಮತ್ತು' ಕಥೆಯಲ್ಲಿ ಬಡವರ ಬದುಕಿಗೆ ಯಾವ ಬೆಲೆ ಇದೆ ಎಂದು ಓದುಗರಲ್ಲಿ ಪ್ರಶ್ನೆ ಹುಟ್ಟಿಸುತ್ತದೆ. 'ಪಾಪಿ ಹೆಣದ ಸುತ್ತ' ಕಥೆಯು ಹಿರಿಯರನ್ನು ಕಡೆಗಣಿಸುವ ಹಾಗೂ ಸಮಾಜವು ನಿರ್ಗತಿಕರನ್ನು ನಡೆಸಿಕ್ಕೊಳ್ಳುವ ರೀತಿ, ಮಕ್ಕಳು ಅನಾಗರಿಕತೆಯ ಪ್ರಭಾವಕ್ಕೆ ಒಳಗಾದವರಂತೆ ಅಸಮರ್ಥರನ್ನು ಗೋಳು ಹೊಯ್ಯುವಿಕೆ, ಮರುಕ ಪಡುವ ಕೆಲವು ಮನಸ್ಸುಗಳ ಆಯಾಮವನ್ನು ಮನಕುಲುಕುವಂತೆ ಹೇಳಿದ್ದಾರೆ.

'ಒಡೆದ ಚೂರು ಮುರಿದ ಕನಸು' ಈ ಕಥೆಯಲ್ಲಿ ತಾಯಿಯ ಕಷ್ಟಕಾಯಕದ ಬೆವರಿನಲ್ಲಿ ಹನಿಸುವ ಕನಸು, ಆ ಕನಸು ಪಾಲಿಸುವ ಮುಗ್ಧ ಬಾಲಕನ ಮನಸು, ಬದುಕಿನ ಶೈಲಿಗೆ ಬೆಸೆದುಕೊಂಡ ವ್ಯವಸ್ಥೆಯ ಗೋಜಲು, ಹಾಗೂ ಗುಮಾಸ್ತನು ಬದುಕುವ ಚಡಪಡಿಕೆಯ ಹುನ್ನಾರ, ಹೀಗೆ ಸಮಾಜದಲ್ಲಿ ನಡೆಯುವ ಘಟನೆಯ ಹಿಂದೆ ಅಡಗಿರುವ ಸತ್ಯಕಥೆಯನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ. 'ಅಯ್ಯಯ್ಯೋ ದೆವ್ವ!!' ಕಥೆಯಂತೂ ಕುಗ್ರಾಮವೊಂದರಲ್ಲಿ ನಡೆಯುವ ಅತ್ಯಾಚಾರ-ಕೊಲೆಯು ವಿವಿಧ ಮಜಲುಗಳಲ್ಲಿ ಅನಾವರಣಗೊಳ್ಳುತ್ತಾ ರೋಚಕವಾಗಿ ಸಾಗುತ್ತದೆ. 'ಪಾಲು' ಪೂರ್ವಜರ ಭೂಮಿಯನ್ನು ಅನ್ಯೋನ್ಯತೆಯಿಂದ ಊಳುವುದನ್ನು ಬಿಟ್ಟು, ತುಂಡು ತುಂಡುಮಾಡಿ ಇಂದು ಆಧುನಿಕತೆಯಲ್ಲಿ ಹೆಣಗುವ ಪರಿಯನ್ನು ಪ್ರಸ್ತುತಪಡಿಸಿದ್ದಾರೆ. 'ಸುಣ್ಣದ ಯಮನ್ಯಾ' ನೀಯತ್ತನ್ನು ನಂಬಿ ತನ್ನ ಕೆಲಸದಿಂದ ಬದುಕು ಸಾಗಿಸುವ ಬಡವರ ಬಾಳು ಅಕಸ್ಮಿಕವಾಗಿ ಅಂತ್ಯ ಕಾಣುವ ಕರುಣಾಜನಕ ಕಥೆ ಇದು. 'ಮಾತಿನ ಕಟ್ಟೆ' ಮೂಕ ಫಕೀರಪ್ಪ, ಅವನ ಹೆಂಡತಿ ದುಂಡಿ, ಊರಿನ ಪ್ರಭಾವಿ ಚಂದ್ರೇಗೌಡರ ನಡುವಿನ ವಿವಿಧ ರೀತಿಯ ತಳಮಳಗಳನ್ನು ಹೊಂದಾಣಿಕೆಗಳನ್ನು ಸೋಲುಗಳನ್ನು ಊರಿನ ಕಥೆಯ ರೂಪದಲ್ಲಿ ಪ್ರಸ್ತುತವಾಗಿದೆ. "ನೀತಿ ತಪ್ಪಿ ನಡೆದರೆ ನಿನಗೆ" ಈ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಲಾಲಿಸಿ ಪಾಲಿಸಿ ಪೋಷಣೆ ಮಾಡಿದ ಜನ್ಮದಾತರನ್ನು ಮರೆತು ಬದುಕುವ ಇಂದಿನ ಆಧುನಿಕ ಶೈಲಿಯ ಮೋಡಿಗೆ ಬಲಿಯಾದವರು ಒಮ್ಮೆ ಓದಲೇಬೇಕಾದ ಕಥೆ ಇದಾಗಿದೆ.

About the Author

ತಿರುಪತಿ ಭಂಗಿ

ಕತೆಗಾರ ತಿರುಪತಿ ಭಂಗಿ ಅವರು ಬಾಗಲಕೋಟೆ ಸಮೀಪದ ದೇವನಾಳ ಎಂಬ ಹಳ್ಳಿಯಲ್ಲಿ 1984 ರಲ್ಲಿ ಜನಿಸಿದರು. ತಂದೆ ಮಲ್ಲಪ್ಪ ತಾಯಿ ಗೌರವ್ವ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡರು. ಹೈಸ್ಕೂಲ್ ಶಿಕ್ಷಣ ಮಾಡುತ್ತಿರುವಾಗಲೇ ಅಜ್ಜ-ಅಜ್ಜಿಯರೂ ತೀರಿಕೊಂಡರು. ಸಾಹಿತ್ಯ ರಚನೆಗೆ ಇವರ ಬಡತನ, ಹಸಿವು, ಅವಮಾನಗಳೇ ಮೂಲ ದ್ರವ್ಯ. . ಬಾಗಲಕೋಟೆಯ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಹೃದಯರಾಗ, ಅವ್ವ, ಕವಳೆಗಣ್ಣಿನ ಹುಡುಗಿ, ಮನಸು ಕೊಟ್ಟವಳು, ಅಪ್ಪ’ ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಮೊದಲ ಕಾದಂಬರಿ ‘ಫೋಬಿಯಾ' 2017ರಲ್ಲಿ ಪ್ರಕಟಣೆ ಕಂಡಿತು. ಅವರ ‘ಜಾತಿ ಕುಲುಮ್ರಾಗ ಅರಳಿದ ಪ್ರೀತಿ’ ಚೊಚ್ಚಲ ಕೃತಿ ...

READ MORE

Related Books