ಮುಖಾಂತರ

Author : ಶ್ರೀಧರ ಬಳಗಾರ

Pages 121

₹ 50.00




Year of Publication: 1998
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ಅಂಕೋಲಾ-581314, ಜಿಲ್ಲೆ: ಉತ್ತರ ಕನ್ನಡ
Phone: 9448934008

Synopsys

‘ಮುಖಾಂತರ’ ಕೃತಿಯು ಶ್ರೀಧರ ಬಳಗಾರ ಅವರ ಕತಾಸಂಕಲನವಾಗಿದೆ, ಈ ಕೃತಿಯು ಮರವಾಗಿ ನಿಂತವನು, ಚರಿತ್ರೆ, ಗಂಜಿಗದ್ದೆ, ಸಮುದ್ರ ಮತ್ತು ಸಾಂತಾ, ವಿಭಕ್ತ, ಹುಡುಕಾಟ, ಬೆಚ್ಚು ಕೆ, ಬೆಚ್ಚು ನಾಟಕ, ಇವಿಷ್ಟು ಅಧ್ಯಾಯಗಳನ್ನು ಒಳಗೊಂಡಿದೆ. ಸಣ್ಣಕತೆಯ ಆಕೃತಿ, ವಸ್ತು ಮತ್ತು ತಂತ್ರಗಳ ಕುರಿತಂತೆ ನಂಬಿರುವ ನಿರೀಕ್ಷಿಸುವ ಎಲ್ಲವನ್ನು ಪೂರ್ತಿಯಾಗಿ ನಿರಾಕರಿಸಿದಂತಿರುವ ಮತ್ತು ನಿರಾಕರಿಸುವುದರ ಮೂಲಕವೇ ಹೊಸ ಹಾದಿಯೊಂದನ್ನು ತೆರೆಯುವ ವಿಶಿಷ್ಟವಾದ ಕತೆಹೇಳುವ ಒಂದು ಕ್ರಮ ಇವರ ಕೃತಿಯಲ್ಲಿದೆ. ಇದು ಬಳಗಾರರದ್ದೇ ಬಳಗಾರರಿಗೇ ವಿಶಿಷ್ಟವಾದದ್ದು. ಮೊದಲಿಗೆ ಇವರ ನಿರ್ದಿಷ್ಟ ಕತೆಯ ವಸ್ತುವನ್ನು ಗಮನಿಸುತ್ತ ಹೋದರೆ, ಇವರ ಪ್ರತಿಯೊಂದು ನಿರ್ದಿಷ್ಟ ಕತೆಯ ಒಟ್ಟಾರೆ ಉದ್ದೇಶ ಅಥವಾ ಇವರು ಕತೆಯ ಮೂಲಕ ಹೇಳುತ್ತಿರುವುದೇನನ್ನು ಎನ್ನುವುದನ್ನು ಗಮನಿಸುತ್ತ ಹೋದರೆ, ಬಳಗಾರರ ಕತೆಗಳಿಗೆ ನಿರ್ದಿಷ್ಟ ಅಜೆಂಡಾ ಇಲ್ಲದಿರುವುದು (ನವಿಲುದೀಪ ಮತ್ತು ಕೊನೆಗಾಲ ಕತೆಗಳನ್ನು ಹೊರತುಪಡಿಸಿ) ಗಮನಕ್ಕೆ ಬರುತ್ತದೆ. ಹಾಗಾಗಿ ಈ ಕತೆಗಳು ತೊಡಗಿದಾಗಲೇ ನಮಗೆ ಈ ಕಥಾನಕದ ಆತ್ಮಗತ ಗಮ್ಯವೊಂದರ ಸುಳಿವು, ಹೊಳಹು ಸಿಗುವುದಿಲ್ಲ. ಹಾಗೆಯೇ, ಕತೆಯ ಓದು ಮುಗಿದ ಬಳಿಕವೂ ಬಳಗಾರರ ಕತೆ ಇಂಥದ್ದರ ಕುರಿತಾಗಿದೆ ಎಂದು ಸರಳಗೊಳಿಸಿ ಹೇಳುವುದು ಕಷ್ಟವಾಗುತ್ತದೆ. ಸಾಧಾರಣವಾಗಿ ಸಣ್ಮಕತೆಯೊಂದರ ಕಥಾನಕ, ವಸ್ತುವಿಗೆ ಇರುವ ಮೊನಚು ಬಳಗಾರರ ಕಥೆಗಳಲ್ಲಿ ತೀವ್ರವಾಗಿ ಇರುವುದು ಗಮನಕ್ಕೆ ಬರುವುದಿಲ್ಲ. ಬದಲಿಗೆ, ಕಾದಂಬರಿಯೊಂದರ ಸಾಮಾನ್ಯ ಲಕ್ಷಣವಾದ ವಿಶಾಲ ಹರಹು, ಸಮಷ್ಟಿಯನ್ನು ಒಳಗೊಂಡು ವಿಸ್ತಾರಗೊಳ್ಳುವ ತುಡಿತವೇ ಹೆಚ್ಚಾಗಿ ಕಂಡುಬರುತ್ತದೆ. ತಮ್ಮದೇ ಆದ ವಿವರಗಳಲ್ಲಿ ಮೂರ್ತಗೊಳ್ಳುವ ಒಂದು ಪುಟ್ಟ ಜಗತ್ತಿನಲ್ಲಿ ಈ ಕತೆಗಳು ಮೈತಳೆಯುವುದು ಬದುಕನ್ನು ಗಮನಿಸುವ ಬಳಗಾರರ ಗ್ರಹಿಕೆಯ ಕ್ರಮದಲ್ಲಿ, ಈ ಗ್ರಹಿಕೆಗಳು ಇನ್ನೇನು ಒಂದು ಆಕೃತಿಯ ಆಕಾರಕ್ಕೆ ಬಂತೆನ್ನುವಾಗ ಕಥಾನಕವೂ ಕೊನೆ ಎನ್ನಬಹುದಾದ ಒಂದು ನಿಲುಗಡೆಯನ್ನು ಕಂಡುಕೊಳ್ಳುತ್ತದೆ. ನಿಲ್ಲುವುದು ಕಥಾನಕ, ಬದುಕಲ್ಲ ಎಂಬ ಸ್ಪಷ್ಟ ಪ್ರಜ್ಞಾಪೂರ್ಣ ಅರಿವಿನಲ್ಲೇ ಈ ಅರ್ಥ ಕೂಡಾ ಹೊಳೆಯಬೇಕು’ ಎಂದಿದ್ದಾರೆ.

 

About the Author

ಶ್ರೀಧರ ಬಳಗಾರ

ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ  ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ  'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...

READ MORE

Related Books