ಚಿಪ್ಪಿನಲ್ಲಿ ಮುತ್ತುಗಳು ಸಣ್ಣ ಕಥೆಗಳ ಆಗರ. ಸಮಕಾಲೀನ ವಿಷಯವಸ್ತುವನ್ನೇ ಮುಖ್ಯವಾಗಿಸಿಕೊಂಡು ಲೇಖಕರು ಈ ಕೃತಿಯಲ್ಲಿ ಕತೆಗಳನ್ನು ರಚಿಸಿದ್ದಾರೆ. ನೈತಿಕತೆಯು ಪತನವಾಗುತ್ತಿರುವ ಕಾಲದಲ್ಲೂ ಪ್ರಾಮಾಣಿಕತೆ ತಲೆಯೆತ್ತಿ ನಿಲ್ಲುವುದು - ಡಂಬಾಚಾರದ ಮೆರೆದಾಟ - ತಂದೆ ತಾಯಿ ಮಕ್ಕಳ ನಡುವಿನ ಬಂಧುತ್ವದ ಬಂಧ ಕಳಚಿ ಹೋಗುತ್ತಿರುವುದು - ಮೊಬೈಲಿನ ಮಾಯಾ ಲೋಕ... ಹೀಗೆ ಹಲವಾರು ಚಿಂತನಾರ್ಹ ವಿಷಯಗಳನ್ನು ಕತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇಂದಿನ ಸಮಾಜದಲ್ಲಿ ನಾವು ನೋಡುವ, ಕೇಳುವ ಅನುಭವಿಸುವ ವಿಷಯಗಳೇ ಬರಹದಲ್ಲಿರುವ ವಸ್ತುಗಳು. ಆದ್ದರಿಂದ ಚಿಪ್ಪಿನಲ್ಲಿರುವ ಮುತ್ತುಗಳು ನಮ್ಮ ಸ್ಪ್ರರ್ಶಕ್ಕೆ ಥಟ್ಟನೆ ಸಿಗುತ್ತವೆ. ಸರಳ ಭಾಷೆ ನಿರೂಪಣಾ ಕ್ರಮ ಆತ್ಮೀಯವೆನಿಸುತ್ತವೆ. ಕೆಲವು ಕಥೆಗಳಲ್ಲಿನ ಸನ್ನಿವೇಷಗಳು ಕಣ್ಣಿಗೆ ಕಟ್ಟುವ ಅಕ್ಷರ ಚಿತ್ರಣಗಳಂತಿವೆ.
ಚಿಪ್ಪಿನಲ್ಲಿರುವ ಮುತ್ತುಗಳನ್ನು ಕಣ್ಣಿಗೆ ಒತ್ತಿಕೊಳ್ಳುವ ಮೊದಲು.. "ಆಕಸ್ಮಿಕ" - ಜೀವನದ ಒಂದು ವಿಚಿತ್ರ ಲಕ್ಷಣ. ಆಕಸ್ಮಿಕಗಳಿಂದ ವಿವಾದ, ವಿಷಾದ, ಲಾಭ, ನಷ್ಟ, ಸಮಸ್ಯೆ, ಸಂತೋಷ... ಹೀಗೆ ಏನೇನೋ ಒದಗಿ ಬರಬಹುದು. ಯಾವುದೋ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದ ನನಗೆ ಎದುರಾದ ಆಕಸ್ಮಿಕವು ಸಂತಸವನ್ನು ತಂದಿದೆ. "ಚಿಪ್ಪಿನಲ್ಲಿರುವ ಮುತ್ತುಗಳು" ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯುವ ಆಹ್ವಾನ ಬರಬಹುದೆಂಬ ನಿರೀಕ್ಷೆ ಸಹ ನನಗಿರಲಿಲ್ಲ. ಲೇಖಕರ, ಪ್ರಕಾಶಕರ ಪೂರ್ವ ಪರಿಚಯ ನನಗಿರಲಿಲ್ಲ. ಲೇಖಕರನ್ನಾಗಲಿ, ಪ್ರಕಾಶಕರನ್ನಾಗಲಿ ನಾನು ಮುಖತಃ ಭೇಟಿಯಾಗಿ ಮಾತನಾಡಿಲ್ಲ. ಸ್ನೇಹಿತರೊಬ್ಬರ ಮೂಲಕ ದೂರವಾಣಿಯಲ್ಲಿ ಪರಿಚಿತರಾದ ಪ್ರಕಾಶಕರ ಆಹ್ವಾನವನ್ನು ಸ್ವೀಕರಿಸಿ ಮುನ್ನುಡಿ ಬರೆದಿದ್ದೇನೆ. ನಿರೀಕ್ಷಿತ ಸಂತಸಕ್ಕಿಂತ ಅನಿರೀಕ್ಷಿತ ಸಂತಸವು ಹೆಚ್ಚು ಉತ್ಕಟವಾಗಿರುತ್ತದೆ. ಲೇಖಕರಾಗಿರುವ ಡಾ. ರಾಘವೇಂದ್ರ ಎಫ್.ಎನ್. ರವರು , ಓದುವ-ಬರೆಯುವ ತುಡಿತವು ಚಿಕ್ಕಂದಿನಿಂದ ತಂದೆಯಿಂದ ಬಂದುದೆಂದು "ಅರ್ಪಣೆ" ಯಲ್ಲಿ ಹೇಳಿಕೊಂಡಿದ್ದಾರೆ. ಬಹಳಷ್ಟು ವ್ಯಕ್ತಿಗಳು ವೃತ್ತಿಗನುಗುಣವಾಗಿ ತಮ್ಮ ಮೂಲ ತುಡಿತವನ್ನು ಕಳೆದುಕೊಳ್ಳುತ್ತಾರೆ. ಶ್ರೀಯುತರು ವೈದ್ಯಕೀಯ ವೃತ್ತಿಯ ಬಿಡುವಿಲ್ಲದ ಕೆಲಸಗಳ ನಡುವೆಯೂ ಬರೆಯುವ ತುಡಿತವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಇದು ಅವರ ಹೆಗ್ಗಳಿಕೆಯೇ ಸರಿ. ದಶಕ ದಶಕಗಳ ಹಿಂದೆ ಪೊಲೀಸ್, ವೈದ್ಯಕೀಯ ಇಂತಹ ವೃತ್ತಿಯಲ್ಲಿರುವವರು ಸಾಹಿತ್ಯ ಕ್ಶೇತ್ರಕ್ಕೆ ಕೈಯ್ಯಿಕ್ಕುತ್ತಲೇ ಇರಲಿಲ್ಲ. ಇತ್ತೀಚಿನ ದಶಕಗಳಲ್ಲಿ ವೈದ್ಯಕೀಯ, ಪೊಲೀಸ್ ವೃತ್ತಿಯಲ್ಲಿರುವವರು ಸಾಹಿತ್ಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ. ಇಂತಹವರ ಪರಂಪರೆಗೆ ಡಾ. ರಾಘವೇಂದ್ರ ರವರು ಸೇರಿಕೊಂಡಿದ್ದಾರೆ ಎಂಬುದು ಗಮರ್ನಾಹವಾಗಿದೆ. ಶ್ರೀಯುತರು ಈಗಾಗಲೇ "ರಾಘುಯಿಸಂ" ಎಂಬ ಪುಸ್ತಕವನ್ನು ಪ್ರಕಟಿಸಿದ್ದು , ಅದಕ್ಕೆ ಓದುಗರಿಂದ ದೊರೆತ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಿಂದ ಪುಳಕಿತರಾಗಿದ್ದಾರೆ. "ಚಿಪ್ಪಿನಲ್ಲಿ ಮುತ್ತುಗಳು" ಪುಸ್ತಕಕ್ಕೆ ಸಹ ಇದೇ ರೀತಿಯ ಸ್ಪಂದನ ದೊರೆಯುವುದರಲ್ಲಿ ಸಂದೇಹವಿಲ್ಲ. ಇಂದಿನ ಸಮಾಜದಲ್ಲಿ ನಾವು ನೋಡುವ, ಕೇಳುವ ಅನುಭವಿಸುವ ವಿಷಯಗಳೇ ಶ್ರೀಯುತರ ಬರಹದಲ್ಲಿರುವ ವಸ್ತುಗಳು. ಆದ್ದರಿಂದ ಚಿಪ್ಪಿನಲ್ಲಿರುವ ಮುತ್ತುಗಳು ನಮ್ಮ ಸ್ಪ್ರರ್ಶಕ್ಕೆ ಥಟ್ಟನೆ ಸಿಗುತ್ತವೆ. ಶ್ರೀಯುತರ ಭಾಷೆ ನಿರೂಪಣಾ ಕ್ರಮಗಳು ಸರಳವಾಗಿದ್ದು, ಆತ್ಮೀಯವೆನಿಸುತ್ತವೆ. ಕೆಲವು ಕಥೆಗಳಲ್ಲಿನ ಸನ್ನಿವೇಷಗಳು ಕಣ್ಣಿಗೆ ಕಟ್ಟುವ ಅಕ್ಷರ ಚಿತ್ರಣಗಳಂತಿವೆ. ನೈತಿಕತೆಯು ಪತನವಾಗುತ್ತಿರುವ ಕಾಲದಲ್ಲೂ ಪ್ರಾಮಾಣಿಕತೆ ತಲೆಯೆತ್ತಿ ನಿಲ್ಲುವುದು - ಡಂಬಾಚಾರದ ಮೆರೆದಾಟ - ತಂದೆ ತಾಯಿ ಮಕ್ಕಳ ನಡುವಿನ ಬಂಧುತ್ವದ ಬಂಧ ಕಳಚಿ ಹೋಗುತ್ತಿರುವುದು - ಮೊಬೈಲಿನ ಮಾಯಾ ಲೋಕ... ಹೀಗೆ ಹಲವಾರು ಚಿಂತನಾರ್ಹ ವಿಷಯಗಳನ್ನು ಶ್ರೀಯುತರು "ಮುತ್ತು" ಗಳಲ್ಲಿ ಬಿಂಬಿಸಿದ್ದಾರೆ. "ರೋಗಿಗಳ ನಡುವೆ", "ಸೈಲೆಂಟ್ ಮೋಡ್" - ಇವು ಕಥಾ ರೂಪಕ್ಕಿಂತ ಭಿನ್ನವಾಗಿ ಪ್ರಬಂಧ ರೂಪದಲ್ಲಿದೆ ಎನಿಸುತ್ತದೆ. ಸಮಾಜಮುಖಿ ಚಿಂತನೆಗೆ ಪ್ರೇರಣೆ ನೀಡುವ ಮುತ್ತುಗಳನ್ನು ನೀಡಿದ ಶ್ರೀಯುತರಿಗೆ ಶುಭವಿರಲಿ, ಗೆಲುವಿರಲಿ..
- ಶ್ರೀಧರಮೂರ್ತಿ ಕೆ.ಎಸ್.
©2022 Book Brahma Private Limited.