ಡುಮಿಂಗ

Author : ಶಶಿ ತರೀಕೆರೆ

Pages 108

₹ 90.00




Year of Publication: 2019
Published by: ಛಂದ ಪುಸ್ತಕ
Address: ಐ-004, ಮಂತ್ರಿಪ್ಯಾರಡೈಸ್‌ ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076
Phone: 9844422782

Synopsys

ಬರಹ ಶೈಲಿ ಹಾಗೂ ಪಾತ್ರಗಳ ಹೆಸರಿನ ಮೂಲಕ ಕುತೂಹಲ ಹುಟ್ಟಿಸುವ ಕೃತಿ. ’ಡುಮಿಂಗ’. ಡುಮಿಂಗ ಎಂದರೇನು ಎಂಬುದನ್ನು ತಿಳಿಯಲು ನೀವು ಈ ಕೃತಿಯನ್ನು ಓದಲೇಬೇಕು. ಛಂದ ಪುಸ್ತಕ ಬಹುಮಾನ ಪಡೆದಿರುವ ಈ ಕೃತಿಗೆ ಮುನ್ನುಡಿ ಬರೆದಿರುವ ಲೇಖಕಿ ಲಲಿತಾ ಸಿದ್ಧಬಸವಯ್ಯ ಅವರ ಮಾತುಗಳಲ್ಲಿಯೇ ಈ ಕೃತಿಯ ಬಗ್ಗೆ ತಿಳಿದುಕೊಳ್ಳಬೇಕೆಂದರೆ ’ ಹುಟ್ಟಿದ ಮಗುವಿಗೆ ಹಿಂದೆ ಇಟ್ಟಿಲ್ಲ, ಮುಂದಿಡುವುದಿಲ್ಲ; ಅಂತಹ ಹೆಸರು ಬೇಕೆನ್ನುವ ಹರಕೆ ಇರುವವರು ಶಶಿಯವರ ಕತೆಗಳನ್ನು ಓದಿರಿ. ಮತ್ತು ಇನ್ನೂ ಅವರ ಸ್ಟಾಕಿನಲ್ಲಿರಬಹುದಾದ ನವನವೀನ ಹೆಸರುಗಳ ಬಗ್ಗೆ ಅವರಿಗೊಂದು ಕಾಲ್ ಮಾಡಿ ವಿಚಾರಿಸಿಕೊಳ್ಳಿ.

ಒಂದೆರಡು ಸ್ಯಾಂಪಲ್ಲಿಗೆ: ಭುಜಕೀರ್ತಿ, ಧಾವಂತ, ಲಿಪೇಶ್ವರಿ, ಗುಂಗೇರಾ, ಪಿಣ್ಣಿಗುಲಿ, ಢಾಮಗುಲಿ, ಸುಖಪುರುಷ, ಪರ್ಚಂಡಿ, ಶಾವಿಗೆ, ಜೀರಿಗೆ, ಪಪೀತಾ, ಮಲೀನಾ, ನಾಕಾಣಿ...

“ನಾ ಏನನ್ನೂ ಕದ್ದಿಲ್ಲ ಆದ್ದರಿಂದ ನನಗೆ ಬಿಡುಗಡೆಯೇ ಇಲ್ಲ” ಇದು ಇಲ್ಲಿನ ಜನರಲ್ ವಾರ್ಡ್ ಎಂಬ ಕತೆಯ ಪಾತ್ರವೊಂದು ಓದುವ ಕವನಸಾಲು. ಈ ಸಾಲನ್ನು ಸ್ವಲ್ಪ ಬೀಸಾಗಿ ಶಶಿಯವರ ಕತೆಗಳಿಗೂ ಅನ್ವಯಿಸಬಹುದು. ಈ ಹಿಂದಿನ ಕನ್ನಡದ ಕತೆಗಾರರ ಋಣಕ್ಕೆ ತೃಣದಷ್ಟೂ ಬಿದ್ದಿಲ್ಲ ಎನಿಸುವಂತಹ ಕತೆಗಳನ್ನು ಅವರು ಬರೆದಿದ್ದಾರೆ. ಆ ಕಾರಣವಾಗಿಯೇ ಅವರಿಗೆ ಕತೆ ಬರೆಯುವ ಗೋಡೆಗಳಿಲ್ಲದ ಜೈಲಿನಿಂದ ಇನ್ನು ಬಿಡುಗಡೆಯಿಲ್ಲ. ಆ ಜೈಲಿನೊಳಗೆಯೇ ಸ್ವಾತಂತ್ರ್ಯದ ಸ್ವಂತಿಕೆಯನ್ನೂ, ಸಂತೋಷವನ್ನೂ ಕಂಡುಕೊಳ್ಳುವ ಯುಕ್ತಿ ಅವರಿಗೆ ಕರಗತವಾಗಿದೆ.

ಈ ಕತೆಗಳನ್ನು ಬರೆಯುವ ಮುಖೇನ ಈ ಜೀವಿಗಳಿಗೆ ತಾನು ನ್ಯಾಯ ಕೊಡಿಸುವೆನೆಂಬ ಹಮ್ಮು ಶಶಿಯವರ ಕತೆಗಳಲ್ಲಿಲ್ಲ. ಕನಿಷ್ಠ ಆ ಲೋಕದಲ್ಲಿ ಬದಲಾವಣೆಯ ಸಾಧ್ಯತೆ ಇದೆ ಎನ್ನುವ ಸೋಗಿನೊಂದು ಉಪಸಂಹಾರದ ಸಾಲನ್ನೂ ಕತೆಗಾರನು ಆ ಪಾತ್ರಗಳಿಗೆ ಸೂಚಿಸುವುದಿಲ್ಲ. ಇಂತಹ ಬದುಕುಗಳನ್ನು ಓದುಗರ ಮುಖಕ್ಕೆ ಹಿಡಿದು ಅವರ ಆತ್ಮಗಳನ್ನು ಕೋರ್ಟ್ ಮಾರ್ಷಲಿಗೊಳಪಡಿಸುವ ಅಹಂಭಾವವೂ ಇಲ್ಲಿಲ್ಲ. ಅಥವಾ ನಿರ್ಲಿಪ್ತದ ಹೆಸರಿನಡಿ ಆ ಬದುಕುಗಳನ್ನು ತಮಾಷೆಯಾಗಿ ನೋಡುವ ಕಣ್ ದೃಷ್ಟಿಯನ್ನೂ ಭಾಷಾಸೃಷ್ಟಿಯನ್ನೂ ಅವರು ಅಪೇಕ್ಷಿಸುತ್ತಿಲ್ಲ. ಇದು ಹೀಗಿದೆ ಎನ್ನುವ ವರದಿಗಾರತ್ವದ ಚಪ್ಪಟೆತನದಿಂದ ಪಾರಾಗುವ ಜಾಣ್ಮೆಯೂ ಅವರಿಗಿದೆ. ಈ ವಿಕ್ಷಿಪ್ತ ಮನೋಭಾವಗಳಿಗೆ ಕಾರಣವಾದ ಪಾತ್ರಗಳ ಗತದಲ್ಲೂ ಅವರು ಪಕ್ಷ ಸಾಧಿಸುವುದಿಲ್ಲ. ಎಲ್ಲಾ ಪಾರ್ಶ್ವಗಳನ್ನು ತೆರೆದಿಡುವ ವಿವರಣಾತ್ಮಕ ಶೈಲಿಗೆ ತಾವೇ ಬಹಿಷ್ಕಾರ ಘೋಷಿಸಿಕೊಂಡಿದ್ದಾರೆ. ಬಹಳ ಯೋಚಿಸಿಯೇ ಬರೆದ ಕತೆಗಳಿವು’ ಎಂದಿದ್ದಾರೆ. 

ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಶ್ರೀ ಹೇಮರಾಜ್ ಜಿ. ಎನ್. ಕುಶಾಲನಗರ ದತ್ತಿ ಪ್ರಶಸ್ತಿ ದೊರೆತಿದೆ.

About the Author

ಶಶಿ ತರೀಕೆರೆ
(07 January 1990)

ಯುವ ಬರಹಗಾರ ಶಶಿ  ಅವರು ಜನಿಸಿದ್ದು 1990 ಜನವರಿ 7ರಂದು. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ಶಶಿ ಪ್ರಸ್ತುತ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಟೆಕ್ನೀಷಿಯನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವಿತೆ, ಕಿರುಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಇವರು ಬರೆದ ಕವಿತೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ.  ಇವರ  ‘ಡುಮಿಂಗ’ ಕಥಾ ಸಂಕಲನ 2019 ರ ಸಾಲಿನ ಛಂದ ಪ್ರಶಸ್ತಿ ಒಲಿದು ಬಂದಿದೆ. ಟೊಟೊ ಫಂಡ್ಸ್‌ ದಿ ಆರ್ಟ್ (ಟಿ.ಎಫ್.ಎ) ಕೊಡಮಾಡುವ 2020ನೇ ಸಾಲಿನ ಟೊಟೊ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...

READ MORE

Related Books