‘ಪ್ರಳಯದಲ್ಲೊಂದು ಪ್ರಣತಿ’ಯು ವೈಜ್ಞಾನಿಕ ಕತೆಗಳ ಸಂಕಲನ. ಇಲ್ಲಿ ಕತೆಗಾರ್ತಿಯು ಮಾನವನ ವಿನಾಶದ ಒಡಲಲ್ಲೇ ಪ್ರೀತಿಯ ಬೀಜ ಮೊಳಕೆಯೊಡೆದು ಚಿಗುರುವ ಪರಿಯನ್ನು ವಿಸ್ಮಯಕಾರಿಯಾಗಿ ಪ್ರಸ್ತುತಪಡಿಸಿದ್ದಾರೆ. ವೈಜ್ಣಾನಿಕ ವಸ್ತುವಿನ ಕಲ್ಪನೆಯಲ್ಲೂ, ಬದುಕನ್ನು ಪ್ರೀತಿಸುವ, ಸೃಷ್ಟಿಯ ಮುಂದುವರಿಕೆಯ ಕ್ರಿಯಾ ಸಂಕೇತ, ಇವೆಲ್ಲ ಕತೆಗಾರ್ತಿಯ ಅಗಾಧ ಬೌದ್ಧಿಕ ಸಾಮರ್ಥ್ಯದ ಸಂಕೇತ. ವರ್ತಮಾನ ದಾಟಿ ಭವಿಷ್ಯದ ಕಲ್ಪಿತ ನೆಲೆಯಲ್ಲಿ ವಸ್ತು, ಪಾತ್ರ ಸೃಷ್ಟಿಯು ಅಸಾಧಾರಣ ಬರಹಗಾರನಿಗೆ ಮಾತ್ರ ಸಾಧ್ಯ. ಅಂತಹ ಪ್ರಯತ್ನದಲ್ಲಿ ಕಾವ್ಯಶ್ರೀ ಯಶಸ್ವಿಯಾಗಿ ತಮ್ಮ ಪ್ರತಿಭೆ ಹಾಗೂ ಪ್ರಬುದ್ಧತೆ ವ್ಯಕ್ತಪಡಿಸಿದ್ದಾರೆ.
ಈ ಕೃತಿಯಲ್ಲಿರುವ ‘ಮ್ಯಾನ್ ಹೋಲ್ ನಲ್ಲೇ…!?’, ‘ಪಲಾಯನ’ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ದೊರೆತರೆ, ‘ಚೌಕಟ್ಟಿನ ಒಳ… ಹೊರಗು…’, ‘ವಿಪರ್ಯಾಸ’, ‘ನಾನೊಂದು ಬಿಂದು’ ರಾಜ್ಯ ಮಟ್ಟದ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಬಾಲ್ಯದಿಂದ ಬದುಕಿನುದ್ದಕ್ಕೂ ನಡೆದು ಬರುವ ಮಾತೃ ವಾತ್ಸಲ್ಯದ ನೆನಪಿನ ಕತೆ ‘ನಿನ್ನೊಳಗೆ ನಾನೊ? ನನ್ನೊಳಗೆ ನೀನೊ?’ ಹೃದಯಸ್ಪರ್ಶಿಯಾಗಿದ್ದು, ಓದುಗರ ಭಾವನೆಗಳನ್ನು ಬಡಿದೆಬ್ಬಿಸುವಂತಿವೆ. ಇಲ್ಲಿರುವ ಕಥಾವಸ್ತು, ಪಾತ್ರ ಚಿತ್ರಣ, ಲೇಖಕಿಯ ಪ್ರಗತಿಪರ ಧೋರಣೆಯ ಸಂಕೇತ. ಕತೆಗಾರ್ತಿಯ ನಿರ್ಣಯ, ಕತೆಯ ಅಂತ್ಯ, ಸಮಾಜದ ನಂಬಿಕೆಗಳ ವಿರುದ್ಧ ದನಿ ಎತ್ತಿದೆ. ಭಾಷೆ, ಶೈಲಿ, ತಂತ್ರ, ನಿರೂಪಣೆಯ ರೀತಿಯು ಸಹಜ ಮತ್ತು ಆಕರ್ಷಕವಾಗಿದೆ.
ಲೇಖಕಿ, ಕಾವ್ಯಶ್ರೀ ಮಹಾಗಾಂವಕರ್ ಹುಟ್ಟೂರು ಶಿವಮೊಗ್ಗ. ಇವರು ಬರೆದಿರುವ ಕಥೆಗಳಿಗೆ ಗುಲ್ಬರ್ಗ ವಿಶ್ವವಿದ್ಯಾಯಲಯವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಬರೆದಿರುವ ಪ್ರಮುಖ ಕಾದಂಬರಿ ಪ್ರೇಮಕಾವ್ಯ ಹಾಗೂ ಬೆಳಕಿನೆಡೆಗೆ. ಪಿಸುಮಾತುಗಳ ಜುಗಲ್, ಜೀವಜಗತ್ತಿಗೆ ಜೇನಹನಿ, ಪ್ರಳಯದಲ್ಲೊಂದು ಪ್ರಣತಿ ಅವರ ಮತ್ತಿತರ ಕೃತಿಗಳು. ...
READ MORE