ಬದುಕಿನೊಂದಿಗೆ ಮಾನವನ ತೊಳಲಾಟಗಳು, ಯಾರ ತಪ್ಪು ಎಂದು ಗುರುತಿಸಲು ಸಾಧ್ಯವಾಗದ ಮಟ್ಟಿಗೆ ಕ್ಲಿಷ್ಟವಾಗಿ ಕವಲು ಹಿಡಿದಿರುವ ಮಾನವನ ಸಂಬಂಧಗಳು ಈ ಕಥೆಯ ಚರ್ಚಾ ವಿಷಯ.ಈ ಕೃತಿಯು ಸಮಾಜದ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಐಟಿ ಮಂದಿಯ ಐಷಾರಾಮಿ ಕಾರು, ಗಾಜಿನ ಬಿಲ್ಡಿಂಗ್, ಬ್ಯಾಂಕ್ ಬ್ಯಾಲೆನ್ಸ್ ಕೋಡಿಂಗ್ಗಳು ಇಷ್ಟರ ನಡುವೆ ಇನ್ನೇನಿದೆ? ಹುಡುಕಲು ಹೊರಟರೆ, ಅಲ್ಲೊಂದು ಗುರಿಯಿಲ್ಲದ ಓಟ! ವೀಕೆಂಡ್ಗಳಲ್ಲಿ ಒಂದೆರಡು ದಿನ ಕಳೆದುಹೋಗುವುದು ಬಿಟ್ಟರೆ, ಉಳಿದ ದಿನಗಳೆಲ್ಲ ಓಡುತ್ತಲೇ ಇರಬೇಕು. ಓಟ ನಿಲ್ಲಿಸಿದರೆ, ಇನ್ಯಾರೋ ಮುಂದೆ ಸಾಗಿಬಿಡುವ ಆತಂಕ. ಇಂಥದೊಂದಿಷ್ಟು ಓಟದ ದೃಶ್ಯಗಳನ್ನು 'ದೇವರು ಕಚ್ಚಿದ ಸೇಬು' ಎಂಬ ಕಥಾಸಂಕಲನದಲ್ಲಿದೆ. ಸಮಕಾಲಿನ ಸಮಾಜದಲ್ಲಿನ ಮಾನವನ ತುಮುಲಗಳನ್ನು ಅಕ್ಷರದ ಮೂಲಕ ಕಟ್ಟಿಕೊಡುವಲ್ಲಿ ದಯಾನಂದರವರು ಯಶಸ್ವಿಯಾಗಿದ್ದಾರೆ.
ಹುಟ್ಟಿದ್ದು 1988ರ ಅಂಬೇಡ್ಕರ್ ಜಯಂತಿಯಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರು, ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ‘ಸಮಯ ಟಿವಿ’, ‘ಪ್ರಜಾವಾಣಿ’ ಮತ್ತು ‘ಸಮಾಚಾರ’ದಲ್ಲಿ ಸುಮಾರು ಒಂದು ದಶಕದ ಪತ್ರಿಕೋದ್ಯಮದ ಅನುಭವ. ಸದ್ಯ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಅಧ್ಯಾಪಕರು. ಛಂದ ಪುಸ್ತಕ ಬಹುಮಾನ ಪಡೆದು 2017ರಲ್ಲಿ ಪ್ರಕಟಗೊಂಡ ಕಥಾ ಸಂಕಲನ ‘ದೇವರು ಕಚ್ಚಿದ ಸೇಬು’. ಇವರ ಕಥೆಗಳಿಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ, ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ, ಸಂಕ್ರಮಣ ಕಥಾ ಪುರಸ್ಕಾರ ಲಭಿಸಿದೆ. ...
READ MORE