ಕವಯತ್ರಿ ಕಾವ್ಯಾ ಕಡಮೆ ಅವರ ’ ಮಾಕೋನ ಏಕಾಂತ’ ಕೃತಿಯು ಕತಾಸಂಕಲನವಾಗಿದೆ. ಈ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ಕೃತಿಗೆ ಮುನ್ನುಡಿ ಬರೆದಿರುವ ಟಿ.ಪಿ ಅಶೋಕ್ ಅವರು, ‘ಭಿನ್ನ ಸಾಂಸ್ಕೃತಿಕ ಆವರಣಗಳಲ್ಲಿ ಅರಳಿರುವ ಈ ಕತೆಗಳು ಅನುಭವದ ತಾಜಾತನದಿಂದ, ಲವಲವಿಕೆಯ ನಿರೂಪಣೆಯಿಂದ, ಪ್ರಬುದ್ಧ ನಿರ್ವಹಣೆಯಿಂದ ಮನಮುಟ್ಟುತ್ತವೆ. ತೀರ್ಪು ಕೊಡುವ ಆತುರಕ್ಕೆ ಬೀಳದೆ ಮನುಷ್ಯ ಸ್ವಭಾವ ಮತ್ತು ಸಂಬಂಧಗಳ ಹಲವು ಆಯಾಮಗಳನ್ನು ಮುಕ್ತವಾಗಿ, ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುವ ವ್ಯವಧಾನ, ಉದಾರತೆ ಇಲ್ಲಿ ಕಾಣುತ್ತವೆ. ಜೀವನ ವೈಶಾಲ್ಯ-ವೈವಿಧ್ಯಗಳ ಬಗ್ಗೆ ಲೇಖಕಿ ಉಳಿಸಿಕೊಂಡಿರುವ ಬೆರಗು ಈ ಕತೆಗಳ ಸ್ಥಾಯೀ ಭಾವವಾಗಿದೆ. ಸಿದ್ಧ ಜಾಡನ್ನು ಬಿಟ್ಟು ಹೊಸ ಹೊಸ ಲೋಕಗಳನ್ನು ಅನ್ವೇಷಿಸುವ ದಿಟ್ಟತನ, ಕಾವ್ಯಕ್ಕೆ ಸಮೀಪವೆನ್ನಿಸುವಂತಹ ಭಾಷಾ ಬಳಕೆ, ಕತೆಗಿಂತ ಕಥನಕ್ಕೆ ನೀಡಿರುವ ಪ್ರಾಮುಖ್ಯತೆಗಳಿಂದಾಗಿ ಈ ಬರಹಗಳು ವಿಶಿಷ್ಟವಾಗಿವೆ. ಕನ್ನಡೇತರ ಪರಿಸರಗಳಲ್ಲಿ ಸೃಷ್ಟಿಯಾಗುವ ಅನುಭವಗಳನ್ನು ಕನ್ನಡ ಭಾಷೆಯಲ್ಲಿ ಗ್ರಹಿಸಿ-ಅಭಿವ್ಯಕ್ತಿಸುವ ಮೂಲಕ ಕನ್ನಡ ಓದುಗರ ಭಾವಲೋಕಗಳನ್ನು ಹಿಗ್ಗಿಸುವಲ್ಲಿ ಲೇಖಕಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಈ ಕತೆಗಳನ್ನು ಓದುತ್ತಿದ್ದಂತೆ ಹೊಸದೇನನ್ನೋ ಅನುಸಂಧಾನ ಮಾಡುತ್ತಿರುವ ಅನುಭವವಾಗುತ್ತದೆ’ ಎಂದಿದ್ದಾರೆ.
ಯುವ ಬರಹಗಾರ್ತಿ ಕಾವ್ಯ ಕಡಮೆ ನಾಗರಕಟ್ಟೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಅವರ ಜೀನ್ಸ್ ತೊಟ್ಟ ದೇವರು ಕವನ ಸಂಕಲನಕ್ಕೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ದೊರೆತಿದೆ. ...
READ MORE