ಲಕ್ಷ್ಮಣ ಬಾದಾಮಿ ಅವರು ಬರೆದ ಕಥಾ ಸಂಕಲನ-ಬೇರು ಮತ್ತು ಬೆವರು. ಇಲ್ಲಿಯ ಕಥೆಗಳಲ್ಲಿ ಎರಡು ಮಾದರಿಗಳನ್ನು ಗುರುತಿಸಬಹುದು. ಕುಟುಂಬ ಕೇಂದ್ರಿತ ಮತ್ತು ಸಮಾಜ ಕೇಂದ್ರಿತ ನಿರೂಪಣೆಯ ಕಥೆಗಳಿವೆ. ಕುಟುಂಬ ಕೇಂದ್ರಿತ ಕಥೆಗಳಲ್ಲಿ ಕುಟುಂಬ, ಅದರೊಳಗಿನ ಸದಸ್ಯರು ಅವರ ಬದುಕಿನ ಲಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಆ ಸಮಸ್ಯೆಗಳನ್ನು ನಿಭಾಯಿಸಲು ನಡೆಯುವ ಸಂಘರ್ಷ ಮತ್ತು ಹೋರಾಟಗಳು.
'ಕೊನೆಯ ಜಾವದ ಕನಸುಗಳು' ಕಥೆ ತಾಯಿ ಮಗಳ ಸಂಬಂಧ ಮತ್ತು ವಯಸ್ಸಾದ ತಾಯಿ ವಯಸ್ಸಿಗೆ ಬಂದ ಮಗಳು ಆಕೆಯ ಮದುವೆಗೆ ಆಕೆಯದೇ ದೈಹಿಕ ಕೊರತೆಗಳು. 'ಕಡೆಗೀಲು' ಕಥೆಯಲ್ಲಿ ದಾಯಾದಿಗಳ ವೈಮನಸ್ಸು ಆ ವೈಮನಸ್ಸಿಗೆ ಕಾರಣಗಳಿರುವುದಿಲ್ಲ ಎಂಬುದು ಗಾಢವಾಗಿ ಚಿತ್ರಿತವಾಗಿವೆ. ಇಲ್ಲಿಯ ಮುಖ್ಯ ಕಥೆಗಳಲ್ಲಿ ನೇಕಾರಿಕೆಯು ಒಂದು ಜೀವನ ವಿಧಾನವಾಗಿದೆ, ಬದುಕು ರೂಪಿಸುವ ಸಂಸ್ಕೃತಿಯಾಗಿದೆ, ಜೀವಣ್ಮರಣದ ಪ್ರಶ್ನೆಯಾಗಿ ಈ ಕಥೆಗಳ ಹಿಂದಣ ಬಹು ಮುಖ್ಯವಾದ ಭಿತ್ತಿಯಾಗಿ ತೆರೆದುಕೊಂಡಿದೆ. ಹೀಗೆ ತೆರೆದುಕೊಳ್ಳುತ್ತಲೆ ಅದೇ ಒಂದು ರೂಪಕವಾಗಿ ಪ್ರತಿಮೆಯಾಗಿ ಮೌಲ್ಯ ನಿಷ್ಕರ್ಷೆಯ ಮಾನದಂಡವಾಗಿ ರೂಪಾಂತರಗೊಳ್ಳುವ ಮಾಂತ್ರಿಕತೆ ಪಡೆದುಕೊಳ್ಳುತ್ತದೆ. 'ಬೇರು ಮತ್ತು ಬೆವರು' , 'ನಿಜಗುಣವುಳ್ಳಡೆ', 'ಶೋಧ' ಈ ಕಥೆಗಳಲ್ಲಿ ಲಕ್ಷ್ಮಣ ಬಾದಾಮಿಯವರ ಭಾಷೆಗಿರುವ ವ್ಯಂಜಕ ಶಕ್ತಿಯನ್ನು, ಅದಕ್ಕಿರುವ ತೀಕ್ಷ್ಣತೆಯನ್ನು, ಆರ್ದ್ರಗುಣವನ್ನು ಕಾಣಬಹುದು.
ಲಕ್ಷ್ಮಣ ಬದಾಮಿ ಬಾಗಲಕೋಟೆ ಜಿಲ್ಲೆಯ ಸಿರೂರ ಅವರ ಸ್ವಂತ ಊರು. ವೃತ್ತಿಯಿಂದ ಚಿತ್ರಕಲಾ ಶಿಕ್ಷಕರು. ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಅವರ ಕಥಾಸಂಕಲನಗಳು. ‘ಮನುಷ್ಯರು ಬೇಕಾಗಿದ್ದಾರೆ’ ಅವರ ಪ್ರಕಟಿತ ಕವನ ಸಂಕಲನ. ‘ರೂಪ ನಿರೂಪ’ ಪೇಂಟಿಂಗ್ಸ್ ಗಳ ಕುರಿತ ಕೃತಿಯಾಗಿದೆ. ‘ಬಿಸಿಲ ಸೀಮೆಯ ಜಾನಪದ ಸಿರಿ’ ಅವರ ಸಂಪಾದಿತ ಕೃತಿ. ಅವರ ‘ಬೇರು ಮತ್ತು ಬೆವರು’ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ, ‘ಒಂದು ಚಿಟಿಕೆ ಮಣ್ಣು’ ಕಥೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ ದೊರೆತಿದ್ದು ಇದೇ ಶೀರ್ಷಿಕೆಯ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ. ...
READ MORE