ಕಾದಂಬರಿಕಾರ ಕಗ್ಗೆರೆ ಪ್ರಕಾಶ್ ಅವರ ಹೊಸ ಕಾದಂಬರಿ ‘ಚಂದ್ರಮಾನೆ’. ಚನ್ನಗಿರಿ ಕೇಶವಮೂರ್ತಿ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ,ನನ್ನ ಆತ್ಮೀಯ ಗೆಳೆಯರಾದ ಕಗ್ಗೆರೆ ಪ್ರಕಾಶ್ ವಿರಚಿತ ‘ಚಂದ್ರಮಾನೆ’ ಓದಿದಾಗ ನಾನು ಅವರಿಗೆ ಹೇಳಿದ ಮೊದಲ ಮಾತುಗಳು; “ಪ್ರಕಾಶ್, ನೀವು ಈ ಕೃತಿ ರಚಿಸಿರುವುದು ಜೇನುಗೂಡಿಗೆ ಕಲ್ಲು ಎಸೆದಂತಾಗಿದೆ” ಎಂದು. ನಿರೀಕ್ಷಿಸಿದಂತೆಯೇ ಅವರು ಓದುಗರ ಅಭಿಪ್ರಾಯ ಕೇಳಿದಾಗ; ಹಲವಾರು ಪರ-ವಿರೋಧ ಪ್ರತಿಕ್ರಿಯೆಗಳು ಬಂದವು. ಇದಕ್ಕೆ ಕಾರಣವಾಗಿದ್ದು ‘ಚಂದ್ರಮಾನೆ’ ಕಥಾವಸ್ತು. ಹಾಗಂತ ಈ ಕೃತಿಯಲ್ಲಿ ಅವರು ಹೇಳಬಾರದ್ದೇನೂ ಹೇಳಿಲ್ಲ, ಬರೆಯಬಾರದ್ದೇನೂ ಬರೆದಿಲ್ಲ.
ವಿವಾಹಿತರಲ್ಲಿನ ತ್ರಿಕೋನ ಪ್ರೇಮ ಅನಾದಿ ಕಾಲದಿಂದಲೂ ಚರ್ಚಿತವಾದ, ಈಗಲೂ ಚರ್ಚಿತವಾಗುತ್ತಿರುವ ವಿಷಯವಾಗಿದೆ. ಅವಿವಾಹಿತ ಯುವಕ ಯುವತಿಯರು, ವಿವಾಹಿತ ಮಹಿಳೆ-ಪುರುಷರನ್ನು ಬಯಸುವುದು ಸರ್ವೇಸಾಮಾನ್ಯವಾಗಿದೆ. ಇಂತಹ ಪ್ರಸಂಗಗಳಲ್ಲಿ ಜಾತಿ ಭೇದವಿರುವುದಿಲ್ಲ, ವಯಸ್ಸಿನ ಅಂತರ ಅಡ್ಡ ಬರುವುದಿಲ್ಲ, ಪ್ರೀತಿ-ಪ್ರೇಮದ ಹೆಸರಿನಲ್ಲಿ ಈ ಘಟನೆಗಳು ಪುನರಾವರ್ತನೆ ಆಗುತ್ತಿರುತ್ತವೆ. ಇದು ತಪ್ಪೆಂದು ತಿಳಿದಿದ್ದರೂ ಇಂತಹ ಪ್ರಸಂಗಗಳು ಜರುಗುತ್ತಲೇ ಇವೆ. ಇದರ ಪರಿಣಾಮದಿಂದಾಗಿ ಹಲವಾರು ಭಿನ್ನ ಸಮಸ್ಯೆಗಳ ಉಗಮಕ್ಕೆ, ಕೋಪ-ತಾಪಗಳಿಗೆ ಹಾಗೂ ಕೆಲವು ಬಾರಿ ಅತಿರೇಕದ ಮಟ್ಟ ತಲುಪಿ ಕೊಲೆ, ಆತ್ಮಹತ್ಯೆ, ಸಾವಿನಲ್ಲಿ ಪರ್ಯಾವಸಾನಗೊಂಡಿವೆ. ಅನೈತಿಕ ಸಂಬಂಧಗಳು ಅನಿವಾರ್ಯವಲ್ಲವೆಂದೂ, ತಪ್ಪೆಂದು ಮನವರಿಕೆಯಾಗಿದ್ದರೂ ಜೀವನ ಶೈಲಿಯಲ್ಲಿ ಇದೂ ಸಹ ಒಂದು ಹಂತದಂತಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ‘ಮಾನೆ’ ವಿವಾಹಿತ ಹೆಣ್ಣು, ರಿಯಾಜ್ ಎಂಬ ಮುಸ್ಲಿಂ ಯುವಕ ಅವಳಲ್ಲಿ ಅನುರಕ್ತನಾಗಿ ‘ಚಂದ್ರ-ಮಾನೆ’ ಅವರ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸುತ್ತಾನೆ. ಪತಿಯ ಎಚ್ಚರಿಕೆಯ ಗಂಟೆಗೆ ಮಾನೆಯಾಗಲಿ, ರಿಯಾಜ್ ಆಗಲಿ ಸೊಪ್ಪು ಹಾಕುವುದಿಲ್ಲ. ಇಂತಹ ಪ್ರೇಮ ಪ್ರಕರಣಗಳಿಗೆ ಕಾರಣಭೂತರು ಯಾರು ಎಂಬುದೇ ಇಲ್ಲಿಯ ಕಥಾವಸ್ತುವಾಗಿದೆ. ‘ಚಂದ್ರಮಾನೆ’ ಕಾದಂಬರಿಯ ಹೊಸತನ ಏನೆಂದರೆ; ಪ್ರಕಾಶ್ ಕೇವಲ ವಿಷಯ ನಿರೂಪಣೆ ಮಾಡಿ, ಒಳಿತು-ಕೆಡುಕುಗಳ ಪರಾಮರ್ಶೆಗೆ ಓದುಗರನ್ನೇ ಗುರಿ ಮಾಡಿದ್ದಾರೆ. ಸುಮ್ಮನೆ ಪುಸ್ತಕ ಓದಿ ಬದಿಗಿರಿಸುವ ಬದಲು ‘ಚಂದ್ರ-ಮಾನೆ’ ಅವರಂಥ ವಿವಾಹಯೇತರ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವ ಸೂತ್ರವನ್ನು ಓದುಗರ ವಿಶ್ಲೇಷಣೆಗೆ ಬಿಟ್ಟಿದ್ದಾರೆ.
ಆಧುನಿಕ ತಂತ್ರಜ್ಞಾನದ ಕೊಡುಗೆಯಾಗಿ ಬಂದ ಮೊಬೈಲ್ ದೊಡ್ಡವರೂ ಸೇರಿದಂತೆ ಮಕ್ಕಳ ಕೈಯಲ್ಲಿ ಆಡುವ ಆಟಿಕೆಯಂತೆ ಬಳಕೆಯಾಗುತ್ತಿದೆ. ಇದರ ಬಳಕೆಯಿಂದ ಸಾಕಷ್ಟು ಅನುಕೂಲಗಳು ಆಗಿರುವುದು ನಿಜ. ಆದರೆ ದುಷ್ಪರಿಣಾಮಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಹಾಗಾಗಿ ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಅವರ ಭವಿಷ್ಯವನ್ನು ನರಕ ಮಾಡದೆ ಉಜ್ವಲಗೊಳಿಸುವ ಅಗತ್ಯವಿದೆ. ವಿವಾಹಯೇತರ ಸಂಬಂಧಕ್ಕೆ ಇಲ್ಲಿ ಮೊಬೈಲ್ ಸೇತುವೆಯಾಗುತ್ತದೆ. ದೊಡ್ಡವರು, ಯುವಕರೂ ಕೂಡ ಮೊಬೈಲ್ ಬಳಕೆಯಲ್ಲಿ ಎಚ್ಚರಿಕೆ ವಹಿಸಿದರೆ ಆಗುವ ಅನಾಹುತ, ಅವಾಂತರಗಳನ್ನು ತಪ್ಪಿಸಬಹುದು. ಮೊಬೈಲ್ ಕೂಡ ಇಲ್ಲಿ ಒಂದು ಪಾತ್ರವಾಗಿಯೇ ಬಂದಿದ್ದು ‘ಚಂದ್ರಮಾನೆ’ ಕಾದಂಬರಿಯ ಮೂಲ ಆಶಯವೂ ಕೂಡ ಇದೇ ಆಗಿದೆ. ಕಗ್ಗೆರೆ ಪ್ರಕಾಶ್ ಹೆಚ್ಚಾಗಿ ಹೆಸರು ಗಳಿಸಿರುವುದು ಮನಸ್ಸಿಗೆ ನಾಟುವಂತಹ ತಮ್ಮ ಕವನಗಳಿಂದ ಹಾಗೂ ವಿವಿಧ ತೆರೆಮರೆಯ ಕಲಾವಿದರ ಬಗೆಗಿನ ಆಕರ್ಷಕ ಬರಹಗಳಿಂದ. ಇದೀಗ ಮೊದಲ ಬಾರಿಗೆ ಕಾದಂಬರಿ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ. ಕಥೆ ಹೇಳುವುದರಲ್ಲಿ ನಿಸ್ಸೀಮರಾಗಿರುವ ಪ್ರಕಾಶ್; ನಿರೂಪಣೆಯಲ್ಲಿ ತಮ್ಮದೇ ವಿಶೇಷ ಛಾಪು ಒತ್ತಿರುವ ಈ ಕಾದಂಬರಿ ಓದುಗರನ್ನು ಆಕರ್ಷಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಕಥಾವಸ್ತು ಚಿರಪರಿಚಿತವಾದರೂ ಪ್ರಕಾಶ್ ತಮ್ಮ ನೇರ ನಿರೂಪಣೆಯಿಂದ ಓದುಗರ ಮನಸೆಳೆಯುತ್ತಾರೆ.
ಕೃತಿಯ ಪರಿವಿಡಿಯಲ್ಲಿ 12 ಅಧ್ಯಾಯಗಳಿವೆ. ಪ್ರೀತಿ, ಪ್ರೇಮ, ಪ್ರಣಯದ ಸುತ್ತ, ಒಂದೊಳ್ಳೆಯ ಸಂಸಾರಕ್ಕೆ ಬೀಸಿದ ಬಿರುಗಾಳಿ, ಐದು ನಿಮಷ ಚೆನ್ನಾಗಿ ಮಾತಾಡೋ ಹೋಗ್ತೀನಿ, ಇವರ ಸಂಚು ಅರಿಯದ ಮಗ ಓಕೆ ಅಂದಿದ್ದ, ನೀ ಹಿಂಗೆ ಟಾರ್ಚರ್ ಕೊಟ್ಟರೆ ವಿಷ ತಗೊಂಡು ಸತ್ತೋಗುತ್ತೇನೆ, ಅದನ್ನು ಹೇಳೋಕೆ ಯಾಕೆ ಇಷ್ಟು ಸಂಕಟಪಡ್ತೀಯ, ಮಳೆ ಬರ್ತಾ ಇದೆ ಎಲ್ಲಿ ನಿಂತುಕೊಳ್ಳಲೋ, ಅವನಿಗೆ ಇವಳು ಹೇಗೆಲ್ಲಾ ಫೋನ್ ಮಾಡುತ್ತಿದ್ದಳು?, ಮನಶಾಸ್ತ್ರಜ್ಞೆ ಅಖಿಲಾ ಸಲಹೆ, ಏಕಾಂತಕ್ಕೆ ಮೊಬೈಲ್ ಸಾಂಗತ್ಯ, ಇವಳ ಮನದಾಳದ ಕೊನೆಯ ಮಾತು, ಓದುಗರ ವಿಭಿನ್ನ ಜಾಡಿನ ಕಾದಂಬರಿಯ ಓದು ಎಂಬಂತಿವೆ ಶೀರ್ಷಿಕೆಗಳು.
ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. ನಾಡಿನ ವಿವಿಧ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ವಾಸವಿದ್ದು, ವೆಸ್ತಾಕ್ರಾಫ್ಟ್ ಕ್ರಿಯೇಟಿವ್ ವರ್ಲ್ಡ್ ಕಂಪನಿಯ ಸೇವೆಯಲ್ಲಿದ್ದಾರೆ. ಕೃತಿಗಳು: ಕನ್ನಡಮ್ಮನಿಗೆ ಕಿರು ಕಾಣಿಕೆ, ಹೊನಲು, ಭುವಿಬಾಲೆ (ಕಾವ್ಯಗಳು). ಅನಂತ (ಸಾಹಿತ್ಯ ಸಂಚಿಕೆಯ ಸಂಪಾದನೆ). ಬಿಡುಗಡೆ (ಬಹುಮಾನಿತ ಬರಹಗಳ ಸಂಪಾದನೆ). ಅವಳ ಮಧುರ ಅಮರ ಪತ್ರಗಳು (ಸಂಪಾದನೆ). ಭೂಮಿಕೆ (ಸಾಹಿತ್ಯ ಸಂಚಿಕೆಯ ಸಂಪಾದನೆ). ಮಾತುಕತೆ- ...
READ MORE