ನಾದದ ನೆರಳು

Author : ಎನ್.ಎಸ್. ಶ್ರೀಧರಮೂರ್ತಿ

Pages 363

₹ 270.00




Year of Publication: 2020
Published by: ಸಪ್ನ ಬುಕ್ ಹೌಸ್
Address: # 11, 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು
Phone: 080-40114455

Synopsys

ನಾದದ ನೆರಳು-ಲೇಖಕ ಎನ್.ಎಸ್. ಶ್ರೀಧರಮೂರ್ತಿ ಅವರ ಕಾದಂಬರಿ. ಸಾಹಿತಿ ಮಂಗಳೂರಿನ  ಎಚ್ .ಎಸ್. ನಂದಕುಮಾರ್ ಅವರು ‘ಈ ಕಾದಂಬರಿ ಕುರಿತು ಸಹ್ಯಾದ್ರಿಯ ಮಡಿಲಿನಲ್ಲಿರುವ ಅಪ್ಪಟ ಮಲೆನಾಡಿನ ಸುಂದರ ಪ್ರದೇಶ ಶೃಂಗೇರಿ ಸುತ್ತಮುತ್ತಲಿನ ಪರಿಸರದಲ್ಲಿ ಶಾಸ್ತ್ರ, ಸಂಪ್ರದಾಯ, ಅನಕ್ಷರತೆ, ಆರ್ಥಿಕ ಸಂಕಷ್ಟ ಮುಂತಾದ ಕಾರಣಗಳಿಂದಲೆ, ಸಾಹಿತ್ಯ, ಸಂಗೀತಗಳಿಗೆ ಅಂತಹ ಪ್ರಾಮುಖ್ಯತೆ ಇರಲಿಲ್ಲ. ಇಂತಹ ಪರಿಸರದಲ್ಲಿ ಬೆಳೆದ ಬ್ರಾಹ್ಮಣ ಕುಟುಂಬವೊಂದರ ಪ್ರತಿಭಾನ್ವಿತ ಗಾಯಕಿ ಮಂಗಳಾಳ ಸಂಗೀತ ಕ್ಷೇತ್ರದಲ್ಲಿನ ಸಾಧನೆ, ಅನೇಕ ಅಡೆತಡೆಗಳ ನಡುವೆಯೂ ಸತತ ಪರಿಶ್ರಮದಿಂದ ಆಕೆ ಜೀವನದಲ್ಲಿ ಸಾಧಿಸಿದ ಯಶಸ್ಸು ಈ ಕಾದಂಬರಿಯ ಸ್ಥೂಲ ಕಥಾವಸ್ತು. ಈ ಕಥೆ ಹೇಳುತ್ತಾ ಶಾಸ್ತ್ರೀಯ ಸಂಗೀತ, ಭಾರತೀಯ ಜ್ಯೋತಿಷ್ಯ ಶಾಸ್ತ್ರ , ಶ್ರೀ ಚಕ್ರ ಆರಾಧನೆ, ಶ್ರೀ ವಿದ್ಯೆ ಇವುಗಳಿಗಿರುವ ಅಂತರ್ ಸಂಬಂಧ, ನಾದ-ಶ್ರೀವಿದ್ಯೆ-ಅಧ್ಯಾತ್ಮಕ್ಕಿರುವ ಸಂಬಂಧ ಹಾಗೂ ಚಿತ್ರಗೀತೆಗಳಲ್ಲಿರುವ ಸಂಗೀತದ ಕುರಿತು ವಿದ್ವತ್ ಪೂರ್ಣ ಹಾಗೂ ಕುತೂಹಲಕಾರಿ ಒಳ ನೋಟ ನೀಡಿರುವುದು ಈ ಕಾದಂಬರಿಯ ವಿಶೇಷತೆ. ಅತೀಂದ್ರಿಯ ಅನುಭವಗಳ ಬಗೆಗಿನ ಕೌತುಕದ ದೃಷ್ಟಿ ಹಾಗೂ ಲೌಕಿಕದಲ್ಲಿದ್ದೇ ಅಲೌಕಿಕದೆಡೆಗಿನ ತುಡಿತವೂ ಇಲ್ಲಿದೆ. ಶೃಂಗೇರಿ, ಕೊಪ್ಪ, ಹರಿಹರಪುರಗಳ ಸುತ್ತಮುತ್ತಲಿನ ಪರಿಸರ, ಜನರ ನಡೆ-ನುಡಿ, ನಂಬಿಕೆಗಳು, ಸಂಬಂಧಗಳು, ವ್ಯವಹಾರ, ಅವ್ಯವಹಾರಗಳನ್ನೆಲ್ಲ ದಟ್ಟವಾಗಿ ಚಿತ್ರಿಸುವ ಮೊದಲಕಾದಂಬರಿ ಇದು’ ಎಂದು ಪ್ರಶಂಸಿಸಿದ್ದಾರೆ.

ಸಾಹಿತಿ ಸುಜಾತರಾವ್, ಮೈಸೂರು ಅಭಿಪ್ರಾಯಪಟ್ಟು ಈ ಕಾದಂಬರಿಯ ತುಂಬಾ ನಾದದ ಅಲೆಗಳು ಮೇಳೈಸಿವೆ.. ಸುಂದರ ಮಲೆನಾಡಿನ ಸ್ನಿಗ್ಧ ಸೌಂದರ್ಯ, ನಿಗೂಢತೆ, ಸಂಕೀರ್ಣತೆ ಎಲ್ಲವನ್ನೂ ಕಾದಂಬರಿಕಾರರಾದ ಶ್ರೀಧರ ಮೂರ್ತಿ ಅವರು ಮನೋಜ್ಞವಾಗಿ ಹಿಡಿದಿಟ್ಟಿದ್ದಾರೆ. ಸಂಗೀತದ ಇನ್ನೊಂದು ನೆಲೆಯಾಗಿ ಶ್ರೀಚಕ್ರ ಈ ಕಾದಂಬರಿಯನ್ನು ಆವರಿಸಿಕೊಂಡಿದೆ. ಸಂಗೀತದ ಬಗೆಗಂತೂ ಮೂರ್ತಿಯವರ ಅಪಾರವಾದ ಅಧ್ಯಯನ ಕಾದಂಬರಿಯ ಉದ್ದಕ್ಕೂ ಕಂಡುಬರುತ್ತದೆ.  ಕಾದಂಬರಿಯ ತುಂಬೆಲ್ಲಾ ರಾಗ ,ತಾನ, ಪಲ್ಲವಿಗಳು ಮೇಳೈಸಿರುವುದು ಅದರ ಸೊಗಸನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಶ್ಲಾಘಿಸಿದ್ದಾರೆ.

ತಮ್ಮ ಕಾದಂಬರಿ ಕುರಿತು ಲೇಖಕ ಎನ್.ಎಸ್. ಶ್ರೀಧರಮೂರ್ತಿ ‘ ‘ನಾದದ ನೆರಳು’ ಹೊರ ಬಂದಿದೆ. ಸುಮಾರು ಮೂವತ್ತು ವರ್ಷಗಳ ಕೆಳಗೆ ಜಿ.ಕೆ.ವೆಂಕಟೇಶ್ ಸಂಗೀತಗಾರರೊಬ್ಬರ ಕಥೆ ಹೇಳಿ ‘ಇದನ್ನು ಕಾದಂಬರಿಯನ್ನಾಗಿಸು’ ಎಂದರು. ಅವರಿಗೆ ಪ್ರಾಮಿಸ್ ಕೂಡ ಮಾಡಿ ಬಿಟ್ಟೆ. ಆದರೆ ಎಷ್ಟೇ ಪ್ರಯತ್ನಿಸಿದರು. ಕಥೆಗೆ ಒಂದು ರೂಪ ಕೊಡಲು ಆಗಲಿಲ್ಲ. ಹದಿನೈದು ವರ್ಷಗಳ ಕೆಳಗೆ ಸಂಗೀತ, ಸಾಹಿತ್ಯ, ಅಧ್ಯಾತ್ಮ, ಜ್ಯೋತಿಷಗಳಲ್ಲಿ ಅಸಾಧಾರಣ ಪಾಂಡಿತ್ಯ ಹೊಂದಿದ್ದ ನನ್ನ ತಾತ ನುಲೇನೂರು ಶಂಕರಪ್ಪನವರು ಮಾಡಿಟ್ಟ ಟಿಪ್ಪಣಿಗಳು ನನ್ನ ಕೈ ಸೇರಿದವು. ಅವುಗಳ ರಚನೆಯಾಗಿ ಅರ್ಧ ಶತಮಾನಗಳೇ ಆಗಿ ಹೋಗಿತ್ತು. ಇದರ ಉದ್ದೇಶ, ಅವರು ಅವಲೋಕಿಸಿದ ಗ್ರಂಥಗಳು, ಸಂಪರ್ಕಿಸಿದ್ದ ವ್ಯಕ್ತಿಗಳು ಯಾವ ವಿವರಗಳೂ ನನಗೆ ಗೊತ್ತಿರಲಿಲ್ಲ. ಆದರೆ ಅಪಾರ ಕುತೂಹಲ ಹುಟ್ಟಿಸುವಂತಿದ್ದ ಅವುಗಳಿಗೆ ಒಂದು ರೂಪ ಕೊಡಬೇಕು ಎನ್ನುವ ಹಂಬಲವಂತೂ ಮೂಡಿತು. ಆಗ ಕಾದಂಬರಿಗೆ ಮರು ಚಾಲನೆಗೆ ದೊರಕಿತು. ಅಂತೂ ಹನ್ನೆರಡು ವರುಷಗಳ ಅಧ್ಯಯನ, ಸಂಶೋಧನೆ, ಬರವಣಿಗೆಯ ಮೂಲಕ ಈ ಕಾದಂಬರಿ ರೂಪುಗೊಂಡಿದೆ. ಗುರುಕುಲ ಪದ್ದತಿಯಿಂದ ರಿಯಾಲಿಟಿ ಶೋವರೆಗೆ ಮೂರು ತಲೆಮಾರುಗಳು ಸಂಗೀತದ ಕಲಿಕೆಗೆ ಸ್ಪಂದಿಸಿದ ರೀತಿ ಹೇಳುವ ಈ ನೂರು ವರ್ಷದ ಕಥಾನಕಕ್ಕೆ ಭೂಮಿಕೆಯಾಗಿ ಹರಿಹರಪುರ, ಶೃಂಗೇರಿ, ನಾರ್ವೆ, ಕೊಪ್ಪಭಾಗದ ಮಲೆನಾಡನ್ನು ನೆಲೆಯಾಗಿ ಇಟ್ಟು ಕೊಂಡಿದ್ದೇನೆ. ಕಾದಂಬರಿ ಇನ್ನೊಂದು ಸಾಧ್ಯತೆಯಲ್ಲಿ ಬದಲಾಗುತ್ತಿರುವ ಮಲೆನಾಡಿನ ಕಥೆ ಕೂಡ ಹೌದು’ ಎಂದು ಹೇಳಿದ್ದಾರೆ. 

About the Author

ಎನ್.ಎಸ್. ಶ್ರೀಧರಮೂರ್ತಿ
(24 August 1968)

ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...

READ MORE

Related Books