ಗೈರ ಸಮಜೂತಿ

Author : ರಾಘವೇಂದ್ರ ಪಾಟೀಲ

₹ 458.00




Year of Publication: 2020
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

’ತೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕತೆಗಾರ ರಾಘವೇಂದ್ರ ಪಾಟೀಲರ ಕಾದಂಬರಿ 'ಗೈರ ಸಮಜೂತಿʼ. ಮನೋಹರ ಗ್ರಂಥಮಾಲೆ ಪ್ರಕಟಿಸಿರುವ ಈ ಕಾದಂಬರಿ ಇವತ್ತಿನ ಸಮಾಜ ಕಟ್ಟಿಕೊಂಡಿರುವ ತಪ್ಪುಕಲ್ಪನೆಗಳನ್ನು ಎತ್ತಿ ತೋರಿಸುತ್ತದೆ. ತಮ್ಮ ಅನುಭವಗಳ ಮೂಸೆಯಲ್ಲಿ ಈ ಕಾದಂಬರಿಯನ್ನು ಹೊಸೆದಿರುವ ಲೇಖಕರು, ತಪ್ಪು ಕಲ್ಪನೆಗಳಿಂದಾಗಿ ಸಮಾಜದಲ್ಲಿ ಘಟಿಸುವ ಹಲವು ಅನ್ಯಾಯಗಳ ಕುರಿತು ಈ ಕೃತಿಯಲ್ಲಿ ಹೊಸ ದೃಷ್ಟಿಕೋನ ನೀಡಿದ್ದಾರೆ.

About the Author

ರಾಘವೇಂದ್ರ ಪಾಟೀಲ
(16 April 1951)

ಕನ್ನಡದ ಸೃಜನಶೀಲ ಬರಹಗಾರ ರಾಘವೇಂದ್ರ ಪಾಟೀಲರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರು. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅಧ್ಯಾಪಕ, ಪ್ರಾಂಶುಪಾಲರಾಗಿಯೂ ದುಡಿದವರು. ಬಾಲ್ಯದಿಂದಲೂ ಬರೆಹದ ತುಡಿತವಿದ್ದ ಅವರು ಕಥಾರಚನೆಯಿಂದ ಕಾದಂಬರಿ, ಪ್ರವಾಸಸಾಹಿತ್ಯ, ವಿಮರ್ಶೆ ಇನ್ನಿತರ ಪ್ರಕಾರಗಳತ್ತ ವಿಸ್ತಾರಗೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ.  ‘ಒಡಪುಗಳು, ಪ್ರತಿಮೆಗಳು, ಮಾಯಿಯ ಮುಖಗಳು, ದೇಸಗತಿ’ ಅವರ ಕತಾ ಸಂಕಲನಗಳಾದರೆ ‘ಬಾಳವ್ವನ ಕನಸುಗಳು, ತೇರು’ ಕಾದಂಬರಿಗಳು. ಜೊತೆಗೆ ಆನಂದಕಂದರ ಬದುಕು-ಬರಹ, ವಾಗ್ವಾದ ಅವರ ವಿಮರ್ಶಾಕೃತಿಗಳು. ಕಥೆಯ ಹುಚ್ಚಿನ ಕರಿಟೊಪಿಗಿಯರಾಯ, ತುದಿಯೆಂಬ ತುದಿಯಿಲ್ಲ ಪಾಟೀಲರ  ನಾಟಕಗಳು, ಇವರ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.  ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ...

READ MORE

Reviews

ಗೈರ ಸಮಜೂತಿ ಕೃತಿಯ ವಿಮರ್ಶೆ

'ಒಡಪುಗಳು', 'ಪ್ರತಿಮೆಗಳು', 'ದೇಸಗತಿ', 'ಮಾಯಿಯ ಮುಖಗಳು', 'ತೇರು' ಕೃತಿಗಳ ಮೂಲಕ ಕಥನ ಕ್ರಿಯೆಯ ಹೊಸ ಸಾಧ್ಯತೆಗಳನ್ನು ತೋರಿದ ರಾಘವೇಂದ್ರ ಗೈರ ಸಮಸೂತಿ ಪಾಟೀಲ ಕನ್ನಡ ಕಥನ ಸಾಹಿತ್ಯದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ಈಗ ಅವರ ಹೊಸ ಕಾದಂಬರಿ 'ಗೈರ ಸಮಜೂತಿ' ಬಂದಿದೆ. ಅವರ ಕೃತಿಗಳ ವಸ್ತು, ಅವು ನಿರೂಪಿಸ ಬಯಸುವ ಬದುಕು, ಅಲ್ಲಿನ ಪಾತ್ರಗಳ ವೈವಿಧ್ಯತೆ... ಇವು ಯಾವೂ ಕೂಡ ಪಾಟೀಲರ ವಿಶಿಷ್ಟ ಕಥನ ಕ್ರಮವನ್ನು ನಿರ್ಲಕ್ಷಿಸಲು ಬಿಡುವುದಿಲ್ಲ. ಈ 'ಗೈರ ಸಮಜೂತಿ' ಕಾದಂಬರಿಯಲ್ಲೂ ಅವರು ಕಥನದ ಮತ್ತೊಂದು ಮಗ್ಗುಲನ್ನು ತಲುಪಲು ಯತ್ನಿಸಿದ್ದಾರೆ. 

ಸ್ವಾತಂತ್ರ್ಯ ಪೂರ್ವ ಕಾಲದ ಬದುಕಿನಿಂದ ಆರಂಭವಾಗುವ ಈ ಕಾದಂಬರಿಯ ವಸ್ತು ಈ ಹೊತ್ತಿನ ವರ್ತಮಾನದವರೆಗೂ ಚಾಚಿಕೊಳ್ಳುತ್ತದೆ. ಮೂರು ತಲೆಮಾರುಗಳ ಈ ಕಥನ ಬೆಟಗೇರಿ, ಐನಾಪುರದ ಎರಡು ಬ್ರಾಹ್ಮಣ ಕುಟುಂಬಗಳ ಅಥವಾ ಶಾಮರಾಯ, ಸತ್ಯಭೋಧ, ಅಚ್ಯುತ, ರಾಘಣ್ಣ, ವಚ್ಚಕ್ಕ, ರಾಧಜ್ಜಿ, ಕುಮಾರಿಲನಾಥನ ಕತೆಯಷ್ಟೇ ಆಗದೆ ಭಾರತದ ಸ್ವಾತಂತ್ರ್ಯ ಹೋರಾಟ, ಗಾಂಧೀಜಿಯ ಸತ್ಯಾನ್ವೇಷಣೆ, ವಿಧವಾ ಸಮಸ್ಯೆಗಳ ಮೂಲಕ ಈ ಕಾದಂಬರಿ ಹಲವು ಭಾವತಂತುಗಳನ್ನು ಮೀಟುತ್ತದೆ. ಧಾರ್ಮಿಕ, ರಾಜಕೀಯ ಜಿಜ್ಞಾಸೆಗಳನ್ನು ನಡೆಸುತ್ತ ಭಾರತದ ಸಂಸ್ಕೃತಿ, ಅದರ ಸೌಹಾರ್ದದ ನೆಲೆಗಳನ್ನು ಶೋಧಿಸಲು ಯತ್ನಿಸುತ್ತದೆ.

ಆಡುನುಡಿಯಲ್ಲಿ ಇಂತಹದೊಂದು ದೀರ್ಘ ಕಾದಂಬರಿ ಬರೆಯುವುದು ಬಲು ಪ್ರಯಾಸದ ಕ್ರಿಯೆ. ಎಲ್ಲೂ ಅಸಹಜ ಅನ್ನಿಸದಂತೆ, ಗೋಕಾಂವಿ ಭಾಷೆಯ ಸೊಗಡು ತಟಗೂ ಮುಕ್ಕಾಗದಂತೆ ಒಂದು ಲಯದೊಳಗಡೆ ಇಡೀ ಕಾದಂಬರಿಯ ನೇಯ್ಕೆ ಇದೆ. ಓದುತ್ತಾ ಹಳ್ಳಿಯ ಯಾವುದೋ ಒಂದು ಓಣಿಯಲ್ಲಿ ತಿರುಗಾಡಿದಂತೆ, ಆ ಪಾತ್ರಗಳ ಜೊತೆ ನಾವು ಜೀವಿಸುತ್ತಿರುವಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಇಲ್ಲಿನ ಭಾಷೆ ಜೀವಂತಿಕೆಯನ್ನು ಚಿಮ್ಮಿಸುತ್ತದೆ.

'ಗೈರ ಸಮಜೂತಿ' ಎಂದರೆ ತಪ್ಪು ಕಲ್ಪನೆ ಎಂದರ್ಥ. ಬ್ರಿಟಿಷ್ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡು ತಲೆ ಮರೆಸಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ, ತನ್ನ ಚಿಕ್ಕಪ್ಪ ಕೃಷ್ಣಾಜಿಯನ್ನು ಅಚ್ಯುತ ಹೋಲುತ್ತಿದ್ದ. ಅವನನ್ನು ಬಂಧಿಸಲಾಗದಿದ್ದಲ್ಲಿ ಗುಂಡಿಕ್ಕಿ ಕೊಲ್ಲುವ ಆದೇಶವಿತ್ತು. ಅಚ್ಯುತನನ್ನೇ ಕೃಷ್ಣಾಜಿಯೆಂದು ಭಾವಿಸಿ ಕೊಲ್ಲಲಾಯಿತು. ಈ 'ಗೈರ ಸಮಜೂತಿ'ಯಿಂದಾಗಿ ಬಾಲ್ಯವಿವಾಹವಾಗಿದ್ದ ವಚ್ಚಕ್ಕ ವಿಧವೆಯಾಗುತ್ತಾಳೆ. ಬ್ರಾಹ್ಮಣ ಪರಿಸರದ ವೈಧವ್ಯದ ಪಡಿಪಾಟಲುಗಳನ್ನು ದಾಟಿಕೊಂಡು ವಚ್ಚಕ್ಕೆ ಸಂಸ್ಕೃತ ಕಲಿಯುತ್ತ, ಕಠೋಪನಿಷತ್‌ನ್ನು ಬದುಕಿನಲ್ಲಿ ಅಳವಡಿಸಿಕೊಂಡು ಓಂಕಾರದ ವಚ್ಚಕ್ಕೆ ಗೌಡತಿಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ. ಮದುವೆಯೊಂದೇ ಅಂತಿಮವಲ್ಲ; ಬದುಕು ಬಹು ದೊಡ್ಡದು. ಬದುಕಿನ ದಿನಚರಿಗೆ ಮುಖಾಮುಖಿಯಾಗುತ್ತ ಆದರ್ಶದ ಬಾಳನ್ನು ಕಟ್ಟಿಕೊಳ್ಳುವದು ಮುಖ್ಯವೆಂದು ತೋರ್ಪಡಿಸುತ್ತಲೆ ವಚ್ಚಕ್ಕನ ದಿಟ್ಟ ಬದುಕನ್ನು ಲೇಖಕ ಪಾಟೀಲರು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ಸಂಭವಿಸುವ 'ಗೈರ ಸಮಜೂತಿ'ಗಳು ಆ ವ್ಯಕ್ತಿಯ ಬಾಳಿನಲ್ಲಷ್ಟೇ ತಾಪತ್ರಯ ತಂದೊಡ್ಡಬಹುದು. ಆದರೆ, ಪಭುತ್ವ ಎಸಗುವ ತಪ್ಪು ಕಲ್ಪನೆಗಳು ಸಮಾಜೋ- ರಾಜಕೀಯ ವಿಪ್ಲವಗಳಿಗೆ ಕಾರಣವಾಗುತ್ತವೆ. ಅಂತಹ ಹತ್ತಾರು 'ಗೈರ ಸಮಜೂತಿ'ಗಳನ್ನು ಈ ಕಾದಂಬರಿಯುದ್ದಕ್ಕೂ ಕಾಣುತ್ತೇವೆ. ಕೌಟುಂಬಿಕ, ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ವಲಯದೊಳಗಡೆ ಜರುಗುವ ಗೈರ ಸಮಜೂತಿಗಳು ಹೇಗೆ ಸಾಮಾಜಿಕವಾಗಿ ಪ್ರಕ್ಷುಬ್ದತೆಯನ್ನು ಉಂಟುಮಾಡುತ್ತವೆ ಎನ್ನುವುದನ್ನು ಕಾದಂಬರಿ ಮನಗಾಣಿಸುತ್ತದೆ. ಇಲ್ಲಿ 'ಗೈರ ಸಮಜೂತಿ' ಒಂದು ರೂಪಕ, ತಂತ್ರದಂತೆ ಬಳಕೆಯಾಗಿದೆ.

ಮುಸ್ಲಿಂ ಮಹಿಳೆಯೊಬ್ಬಳು ಹೆರಿಗೆ ಬೇನೆ ತಿನ್ನುತ್ತ ತೊಂದರೆ ಅನುಭವಿಸುತ್ತಿರುವಾಗ ಆ ಹೆರಿಗೆ ಮಾಡಿಸಲು ಸಹಾಯ ಕೋರಿ ವಚಕ್ಕನನ್ನು ಕೇಳಲು ಹುಸೇನಬೀ ಶಾಮರಾಯರ ಮನೆಗೆ ಬರುವ ದೃಶ್ಯ ಮನ ಕಲಕುವಂತಿದೆ. ಮತಾಂಧತೆ ಎನ್ನುವುದು ಅದೆಷ್ಟು ಕಠೋರವಾಗಿರುತ್ತದೆ, ಕತ್ತಿಯ ಅಂಚಿನ ಹಾಗೆ ಹರಿತವಾಗಿರುತ್ತದೆ ಎಂಬುದನ್ನೂ ಪಾಟೀಲರು ಇಲ್ಲಿ ಚಿತ್ರಿಸಿದ್ದಾರೆ. ಹುಸೇನಬೀ ಬಂದಾಗ ಮಾಧವ ರೌಸಿನಿಂದ ಚೀರಾಡಲು ಶುರು ಮಾಡುತ್ತಾನೆ: 'ಯಾವ ಓಂಕಾರದ ಗೋಡತೇನೂ ಬರೂದುಲ್ಲಾ... ಯಾರೂ ಬರೂದುಲ್ಲಾ..! ನಡೀರಿ... ಹೋಗರಿ ಅಲ್ಲಿಗೇ... ಅದ ನಿಮ್ಮ ಪಾಕಿಸ್ತಾನ ಐತೆಲಾ.. ಅಲ್ಲಿಗೇ ಹೋಗರೀ..'

- ಹುಸನಬೀ ಎರಡೂ ಕೈ ಜೋಡಿಸಿ ಅಂದಳು. 'ನಮಗ ಯಾವ ಪಾಕಿಸ್ತಾನನೂ ಗೊಂತಿಲ್ಲ ಯಪ್ಪಾ, ದುಡಕೊಂಡು ತಿನ್ನಾವರ ನಾವಾ.. ನಮಗ ಗೊಂತಿರೂದು ಇದ ಬೆಟಗೇರೀ ಮತ್ತ ಖಬರಸ್ತಾನಾ ಎಡ್ಡ. ಇವನ್ನ ಬಿಟ್ಟರ ನಮಗ ಯಾವದೂ ಗೊಂತಿಲ್ಲ ತಂದೆ.”

ಕೊನೆಗೆ ಮಾಧವನ ಮಾತನ್ನು ಅಲಕ್ಷಿಸಿ ವಚ್ಚಕ್ಕೆ ಹೆರಿಗೆ ಮಾಡಿಸಲು ತೆರಳುತ್ತಾಳೆ. ಜಾತಿ, ಮತದ ಹೊಟ್ಟು ಗಾಳಿಗೆ ತೂರಿ ಮುಂದೆ ಸಾಗುವ ಮಜ್ಜನ ಮಾನವೀಯತೆಗೆ ಗೆಲುವಾಗುತ್ತದೆ

ಭಾರತದ ಸಾಮಾಜಿಕ, ಧಾರ್ಮಿಕ ಸಮಸ್ಯೆಗಳಿಗೆ ನಮ್ಮ ಸಂಸ್ಕೃತಿಯಲ್ಲಿಯೇ ಉತ್ತರಗಳಿವೆ ಎಂಬುದನ್ನು ಸೂಚ್ಯವಾಗಿ ಕಾದಂಬರಿ ಪ್ರಕಟಿಸಲು ಪ್ರಯತ್ನಿಸುತ್ತಿರುವಂತಿದೆ. ಇದು ಈ ಹೊತ್ತಿನ ಹಿಂದೂ - ಮುಸ್ಲಿಂ ಸಮುದಾಯಗಳ ಮೂಲಭೂತವಾದ ತಂದೊಡ್ಡಿದ ಸಮಸ್ಯೆಯವರೆಗೂ ಮಾತಾಡುತ್ತದೆ. 'ನಾವು' ಮತ್ತು 'ಅವರು' ಎನ್ನುವ ಭಿನ್ನತೆ ಹುಟ್ಟಿಕೊಂಡದ್ದು ರಾಜಕೀಯ ದುರುದ್ದೇಶದಿಂದ ಎಂಬುದು ಸ್ಪಷ್ಟವಾಗಿದ್ದರೂ ಕೆಲ 'ಗೈರ ಸಮಜೂತಿ'ಗಳಿಂದಾಗಿ ಇಂಡಿಯಾದ ಮನಸ್ಸುಗಳಲ್ಲಿ ಕೋಮು ದಳ್ಳುರಿ ಹೊತ್ತಿ ಉರಿಯುತ್ತಲೇ ಇದೆ. ಇದು ಶಮನವಾಗುವುದು ಎರಡೂ ಕಡೆಯ ಮೂಲಭೂತವಾದಕ್ಕೆ ಬೇಕಾಗಿಲ್ಲ ಎಂದು ಸೂಚಿಸುತ್ತಾ ಲೇಖಕರು ಈ ಭಿನ್ನ ಸಂಸ್ಕೃತಿಗಳನ್ನು ಚಿತ್ರಿಸುವಾಗ ಮತ್ತೊಂದು ಸಂಸ್ಕೃತಿಯ ಬಗೆಗೆ ಮೆಲುವಾಗಿ ಮಾತಾಡಿದರೂ ಅಲ್ಲೊಂದು ಅಸ್ಪಷ್ಟತೆಯ ಗೆರೆ ಕೊರೆದುಕೊಂಡು ಹೋಗುತ್ತದೆ.

ತಮ್ಮ ಅನುಬಂಧಧ ಮಾತುಗಳಲ್ಲಿ ಓ.ಎಲ್. ನಾಗಭೂಷಣಸ್ವಾಮಿ ಅವರು ಗುರುತಿಸುವಂತೆ ಮನುಷ್ಯ ಪ್ರೀತಿ, ಕಾರುಣ್ಯಗಳ ದಾರಿ "ನಿಜ' ಸನಾತನ ಮಾತ್ರವೇ? ಹೌದಾದರೂ ಅದರ ಪ್ರತಿನಿಧಿಯಾಗಿರುವ ವಚಕ್ಕನಿಗೆ ಜೊತೆಯಾಗಿ ನಿಸರ್ಗವೂ ಹಕ್ಕಿ ಪಕ್ಷಿಗಳೂ ಒದಗಿಬರುವುದು ಸುಂದರ, ಅಪೇಕ್ಷಣಿಯ ಸ್ವಪ್ನವಾಗಿದ್ದರೂ ಮಾಧವ ಪ್ರತಿನಿಧಿಸುವ ಉಗ್ರ ಧಾರ್ಮಿಕತೆಯೇ ನಿಜವೆನಿಸಿಬಿಡುವ ಅಪಾಯವಿದೆ...

ಈ ಮಾತು ಖರೆ. ಈ ಕಾದಂಬರಿಯ ಪಾತ್ರಗಳಾದ ಆದರ್ಶದ ಹಾದಿ ತುಳಿದ ವಚ್ಚಕ್ಕೆ, ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಾಜಿ ಮತ್ತು ಮತಾಂಧನಂತಿರುವ ಮಾಧವ ಒಂದೇ ಕುಟುಂಬದಿಂದ ಬಂದವರು. ಆದರೆ ಎಲ್ಲರದೂ ಭಿನ್ನ ವ್ಯಕ್ತಿತ್ವ ಮತ್ತು ಭಿನ್ನ 'ಸಂಸ್ಕಾರ'. ಈ ವಿಭಿನ್ನತೆ ಬರೀ ಈ ಕುಟುಂಬದಲ್ಲಷ್ಟೇ ಅಲ್ಲ, ಎಲ್ಲ ಭಾರತೀಯ ಧರ್ಮಗಳ ಬಹುತೇಕ ಕುಟುಂಬಗಳ ಕತೆಯೂ ಹೀಗೆಯೇ ಇರುತ್ತದೆ. ಈ ಕಾದಂಬರಿ ಹೊರಡಿಸಲು ಪ್ರಯತ್ನಿಸುವ ಆದರ್ಶ ಮಾರ್ಗದ ಧ್ವನಿ ಹಲವು ತರಂಗಗಳಲ್ಲಿ ಕೇಳಿಸಿ ಗೊಂದಲ ಮೂಡಿಸುತ್ತದೆ. ಸಂಸ್ಕೃತ ಕಲಿತು, ಕಠೋಪನಿಷತ್ತು ಅಳವಡಿಸಿಕೊಂಡವರಷ್ಟೇ ಆದರ್ಶದ ದಾರಿಯಲ್ಲಿ ಸಾಗುತ್ತಾರೆ. ಭಾರತೀಯ ಅಧ್ಯಾತ್ಮಿಕ ಪರಂಪರೆ ಹಾಗೂ ಸನಾತನೆಗಳಲ್ಲಿಯೇ ಔನ್ಯತ್ಯ ಅಡಗಿದೆ ಎಂಬರ್ಥ ಇಲ್ಲಿ ಧ್ವನಿಸಿದಂತಾಗುತ್ತದೆ. ಧರ್ಮ ಮತ್ತು ರಾಜಕಾರಣದ ಬಗೆಗೆ ಕೃತಿಯಲ್ಲಿ ನಡೆಯುವ ಜಿಜ್ಞಾಸೆ ತಿಳಿಗೊಳ್ಳದೆ ಓದುಗನೊಳಗೆ ಹಲವು ಜಟಿಲ ಪ್ರಶ್ನೆಗಳ ಅಲೆ ಎಬ್ಬಿಸಿ ಈ ಕಾದಂಬರಿ ಮುನ್ನಡೆಯುತ್ತದೆ.

(ಕೃಪೆ: ಹೊಸ ಮನುಷ್ಯ ಡಿಸೆಂಬರ್ 2021, ಬರಹ- ಟಿ.ಎಸ್‌.ಗೊರವರ)

---

ಗೈರ ಸಮಜೂತಿ ಕೃತಿಯ ವಿಮರ್ಶೆ(ಪ್ರಜಾವಾಣಿ)

ಕನ್ನಡಕ್ಕೆ ಹಲವು ಮಹತ್ವದ ಕಥೆಗಳನ್ನೂ 'ತೇರು'ವಿನಂಥ ಕಾದಂಬರಿಯನ್ನೂ ಕೊಟ್ಟಿರುವ ಬಹುಮುಖ್ಯ ಲೇಖಕ ರಾಘವೇಂದ್ರ ಪಾಟೀಲ. ಅವರು ತಮ್ಮ ಹೊಸ ಕಾದಂಬರಿ 'ಗೈರ ಸಮಜೂತಿ'ಯ ಮೂಲಕ ಕಥನವಿಸ್ತಾರ ಮತ್ತು ಕೃತಿಯ ಗಾತ್ರ ಎರಡು ದೃಷ್ಟಿಯಿಂದಲೂ ದೊಡ್ಡ ಜಿಗಿತಕ್ಕೆ ಪ್ರಯತ್ನಿಸಿದ್ದಾರೆ. ನಾಲ್ಕುನೂರಕ್ಕೂ ಮಿಕ್ಕಿ ಪುಟಗಳಿರುವ ಈ ಕೃತಿ ಮೂರು ತಲೆಮಾರುಗಳ ಕಥನವ್ಯಾಪ್ತಿಯನ್ನು ಹೊಂದಿದೆ. ಹಲವು ಪಾತ್ರಗಳು, ಹಲವು ನಿರೂಪಣಾ ತಂತ್ರಗಳು, ಹಲವು ಭಾವತೀವ್ರ ಘಟ್ಟಗಳನ್ನು ಹೊಂದಿರುವ ಈ ಕೃತಿಯ ಓದು ಕಥನಕಾಡಿನೊಳಗೆ ಅಡ್ಡಾಡಿದ ಅನುಭವವನ್ನು ಕೊಡುತ್ತದೆ. ಇಲ್ಲಿ ಬಳಕೆಯಾಗಿರುವ ಭಾಷೆ ಹರಿಯುವ ನೀರಲ್ಲಿ 340 ಪಾಟೀಲರ ಬರವಣಿಗೆ ಸಾವಧಾನದ ಬೆನ್ನೇರಿದ ಗಟ್ಟಿ ನಡಿಗೆ. ತಾನು ಹೆಜ್ಜೆ ಊರಿದ ಜಾಗದಲ್ಲಿ ಬರೀ ಪಾದದ ಆಕಾರವಷ್ಟೇ ಅಲ್ಲ, ಐದು ಬೆರಳುಗಳು, ಅದರಲ್ಲಿನ ರೇಖೆಗಳ ಗುರುತೂ ಸ್ಪಷ್ಟವಾಗಿ ಮೂಡಬೇಕು ಎಂಬ ವ್ಯವಧಾನದಿಂದ ಅವರು ಬರೆಯುತ್ತಾರೆ. ಕಣ್ಣಿಗೆ ಕಾಣದ ಸಂದಿಗೊಂದಿಗಳಲ್ಲೆಲ್ಲವೂ ಹಗೂರ ಹರಿದು ತುಂಬ ತುಂಬಿಕೊಂಡು ಏರುವ ನೀರಿನಂತೆ ಸಣ್ಣಪುಟ್ಟ ವಿವರಗಳನ್ನು ತುಂಬಿಸುವ ಮೂಲಕವೇ ಕಥನವನ್ನು ವಿಸ್ತರಿಸುತ್ತ ಹೋಗುತ್ತಾರೆ. ಇದು ಹಲವೆಡೆ ತುಸು ಭಾರವೆನಿಸುವುದೂ ಇದೆ. ಕಾಲುಬಿಟ್ಟು ಕುಳಿತು ಜುಳುಜುಳು ನಿನಾದ ಕೇಳುತ್ತಿರುವ ಖುಷಿಯನ್ನು ಕೊಡುವಷ್ಟು ಜೀವಂತವಾಗಿದೆ.

ಪಾಟೀಲರ ಬರವಣಿಗೆ ಸಾವಧಾನದ ಬೆನ್ನೇರಿದ ಗಟ್ಟಿ ನಡಿಗೆ, ತಾನುಹೆಜ್ಜೆ ಊರಿದ ಜಾಗದಲ್ಲಿ ಬರೀ ಪಾದದ ಆಕಾರವಷ್ಟೇ ಅಲ್ಲ, ಐದು ಬೆರಳುಗಳು ಅದರಲ್ಲಿನ ರೇಖೆಗಳ ಗುರುತೂ ಸ್ಪಷ್ಟವಾಗಿ ಮೂಡಬೇಕು ಎಂಬ ವ್ಯವಧಾನದಿಂದ ಅವರು ಬರೆಯುತ್ತಾರೆ. ಕಣ್ಣಿಗೆ ಕಾಣದ ಸಂದಿಗೊಂದಿಗಳೆಲ್ಲೆಲ್ಲವೂ ಹಗೂರ ಹರಿದು ತುಂಬ ತುಂಬಿಕೊಂಡು ಏರುವ ನೀರಿನಂತೆ ಸಣ್ಣಪುಟ್ಟ ವಿವರಗಳನ್ನು ತುಂಬಿರುವ ಮೂಲಕವೇ ಕಥನವನ್ನು ವಿಸ್ತರಿಸುತ್ತ ಹೊಗುತ್ತಾರೆ. ಇದು ಹಲವೆಡೆ ತುಸು ಭಾರವೆನಿಸುವುದೂ ಇದೆ.

ಒಂದು ಸೃಜನಶೀಲ ಕೃತಿಯನ್ನು - ಪಾತ್ರಗಳನ್ನು ಲೇಖಕನ ವೈಯಕ್ತಿಕ ನಿಲುವುಗಳು ನಿಯಂತ್ರಿಸಬೇಕೇ ಅಥವಾ ಅದು ಲೇಖಕನನ್ನೂ ಮೀರಿ ಬೆಳೆಯಬೇಕೇ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇದಕ್ಕೆ ಇದಮಿತ್ಥಂ ಎಂದು ಹೇಳುವುದು ಸಾಧ್ಯವಿಲ್ಲದಿರಬಹುದು. ಆದರೆ ಹೀಗೆ ಲೇಖಕ ತನ್ನ ವೈಯಕ್ತಿಕ ಸಿದ್ಧಾಂತ ನಿಲುವುಗಳನ್ನು ಬಲವಂತವಾಗಿ ಕೃತಿಯ ಮೇಲೆ ಹೇರಲು ಯತ್ನಿಸಿದಾಗಲೆಲ್ಲ ಸೃಜನಶೀಲತೆ ಸೊರಗಿರುವುದಕ್ಕೆ ಸಾಕಷ್ಟು ಉದಾಹರಣೆಗಳು ದೊರಕುತ್ತವೆ. ಈ ಚರ್ಚೆಯ ಹಿನ್ನೆಲೆಯಲ್ಲಿಯೂ 'ಗೈರ ಸಮಜೂತಿ'ಯನ್ನು ಗಮನಿಸಬಹುದು. ಕುತೂಹಲದ ಸಂಗತಿಯೆಂದರೆ ಈ ಕಾದಂಬರಿಯ ಒಳಗೂ ('ಜಯಂತಿ' ಕಚೇರಿಯಲ್ಲಿ ನಡೆಯುವ ಚರ್ಚೆ) ಸೃಜನಶೀಲ ವ್ಯಾಪಾರದ ಕುರಿತೂ ಚರ್ಚೆ ಇದೆ!

ಎರಡು ಸಾವುಗಳ ವ್ಯೂ ಪಾಯಿಂಟ್‌ನಲ್ಲಿ ನಿಂತು ಈ ಕಾದಂಬರಿಯ ಕಥನದ ಹರಿವನ್ನು ನೋಡಬಹುದು. ಮೊದಲನೇ ಸಾವು, ಬೆಟಗೇರಿ ಕುಟುಂಬದ ಶಾಮರಾಯರ ಮಗ ಅಚ್ಯುತನ ದಾರುಣ ಸಾವು. ಇನ್ನೊಂದು ಜೋಷಿ ಮನೆತನದ ಸತ್ಯಬೋಧಾಚಾರರ ಕರುಣಾಜನಕ ಸಾವು,

ಇಲ್ಲಿ ಓದುಗ ಮತ್ತು ಕಥನದ ನಡುವೆ ಒಬ್ಬ ನಿರೂಪಕ ಇದ್ದಾನೆ. ಕಾದಂಬರಿಯ ಆರಂಭದಲ್ಲಿ ಅವನು ಆಗೀಗ ಹಣಕಿ ಮಾತಾಡಿ ಹೋಗುತ್ತಿರುತ್ತಾನೆ. ಆದರೆ ಅವರು ಈ ಭಾಗದಲ್ಲಿ ಸೂತ್ರಧಾರನಲ್ಲ. ನಡೆದಿದ್ದನ್ನು ವಿವರಿಸುತ್ತ ಹೋಗುವ ಲಿಪಿಕಾರನಷ್ಟೆ ಅವನು ಪೂರ್ತಿಯಾಗಿ ಓದುಗನ ಎದುರಿಗೆ ಬರುವುದು ಅಚ್ಯುತನ ಸಾವಿನ ದಾರ ಸಂದರ್ಭದಲ್ಲಿ; ಅದೂ ಪೂರ್ತಿ ಅಸಹಾಯಕನಾಗಿ. 'ಅಯ್ಯೋ ನಾ ವಲ್ಲಿನೆಪಾ! ಅಲ್ಲಿ ಮಡುಗಟ್ಟಿದ್ದೂ... ರಭಸದಿಂದ ಧುಮ್ಮಿಕ್ಕುವದ... ವಿಜೃಂಭಿಸುವ ಸೆಳವು ಸೆಳೆಕೊಂಡು ಹೋಗುವಂಥಾದ್ರೂ... ಹಿಂಗ ನಾನಾ ಸ್ವರೂಪದೊಳಗ... ಏಕಕಾಲದೊಳಗೇ ಅಸ್ತಿತ್ವದಲ್ಲಿ ಇರುವಂಥ...ಆ ಶೋಕವನ್ನು... ನಾನು, ನಾನೆಂಬ ಒಬ್ಬರಿ ಲೇಖಕ..! ಈ ಒಬ್ಬಂಟಿ ಮನಶಾ ಅನ್ನುವ ನಾನು ಹೆಂಗ ನಿಭಾಯಿಸಲೋ..!' ಎಂದು ತಾನು ಸೃಷ್ಟಿಸಿದ ಪಾತ್ರದ ದುರಂತವನ್ನು ತಾನೇ ತಡೆಯಲಾಗದ ಅಸಹಾಯಕತೆಯಲ್ಲಿ ದುಃಖಿಸುವ ನಿರೂಪಕ, ಆ ಸಾವಿನ ಗಾಢತೆಯನ್ನು ಎಷ್ಟು ತೀವ್ರವಾಗಿ ಚಿತ್ರಿಸುತ್ತಾನೆಂದರೆ ಪಾತ್ರಗಳ ಬಿಸಿಯುಸಿರು, ಉಗ್ಗಡಿಸುವ ದುಃಖವ ಕೊಸರು ನಮ್ಮನ್ನೂ ಕಾಡಿ ಕಂಗೆಡಿಸುತ್ತದೆ; ಹನಿಗಣ್ಣಾಗಿಸುತ್ತದೆ. ಲೇಖಕನ ನೋವು ನಮ್ಮದೂ ಆಗುತ್ತದೆ. ಸೃಜನಶೀಲತೆಯ ಸಾರ್ಥಕತೆ ಇರುವುದು ಇಲ್ಲಿಯೇ ಅಲ್ಲವೇ?

ಆದರೆ 'ವಲ್ಲಿನೆಪಾ' ಎಂದ ಅಸಹಾಯಕ ನಿರೂಪಕನೇ ಇಲ್ಲಿಂದ ಮುಂದೆ ಮೆಲ್ಲ ಮೆಲ್ಲಗೆ ಮುನ್ನೆಲೆಗೆ ಬರಲಾರಂಭಿಸುತ್ತಾನೆ. ಅಚ್ಯುತನ ಸಾವಿನ ಸಂದರ್ಭದಲ್ಲಿ ಪಾತ್ರಗಳ ದುರಂತಕ್ಕೆ ತತ್ತರಿಸಿಹೋಗಿದ್ದ ನಿರೂಪಕ ಮುಂದೆ ಸತ್ಯಬೋಧಾಚಾರರ ಸಾವಿನ ಹೊತ್ತಿಗೆ ಪೂರ್ತಿ ಬದಲಾಗಿದ್ದಾನೆ; ತನಗೆ ಬೇಕಾದ ದಾರಿಯಲ್ಲಿ ಕಥನವನ್ನು ಹರಿಸುವಷ್ಟು ಬಲಿಷ್ಠನಾಗಿದ್ದಾನೆ; ತನ್ನ ಮಾತುಗಳನ್ನು ಪಾತ್ರಗಳ ಮೇಲೆ ಹೇರುವಷ್ಟು ಬುದ್ಧಿವಂತನಾಗಿದ್ದಾನೆ. ಪೊಲಿಟಿಕಲಿ ಕರೆಕ್ಟ್ ಆಗಿದ್ದಾನೆ: ಸೃಜನಶೀಲ ವ್ಯಾಪಾರದ ದೃಷ್ಟಿಯಿಂದ ಕರಪ್ಟ್ ಕೂಡ ಆಗಿದ್ದಾನೆ. ತನಗೆ ಕಂಡಿದ್ದನ್ನು ಹೇಳುವಷ್ಟೇ ಸಲೀಸಾಗಿ ಕಾಣದ ಸಂಕೀರ್ಣ ಸಂಗತಿಗಳನ್ನೂ ಕಂಡಂತೆ ಕಪ್ಪು ಬಿಳುಪಾಗಿ ಬರೆಯಲು ಹಿಂಜರಿಯದಷ್ಟು ಮೈಚಳಿ ಬಿಟ್ಟಿದ್ದಾನೆ. ಈಗ ಭಾಷೆಯೆಂಬುದು ಅವನ ಕೈಯಲ್ಲಿ ಸಿಕ್ಕಿದ ಹರಿತ ಆಯುಧವಾಗಿದೆ. ಹಾಗಾಗಿಯೇ ಸತ್ಯಬೋದಾಚಾರದ ಸಾವಿನ ಸನ್ನಿವೇಶವನ್ನು ನಿರೂಪಿಸುವಾಗ ನಿರೂಪಕನಿಗೂ ಭಾಷೆ ಸೋಲುತ್ತದೆ ಅನಿಸುವುದಿಲ್ಲ. ಹಾಗಾಗಿಯೇ ಅಚ್ಯುತನ ಸಾವಿನಷ್ಟು ಸತ್ಯಬೋಧಾಚಾರದ ಸಾವು ಗಾಢವಾಗಿ ತಟ್ಟುವುದಿಲ್ಲ. ಈ ನಿರೂಪಕನ ರಾಜಕೀಯವೂ ನಮಗೆ ಪರ್ಯಾಯವಾದ ಕಥನವೊಂದನ್ನೇ ಹೇಳುತ್ತಿರುವ ಹಾಗೆ ಭಾಸವಾಗುತ್ತದೆ. ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ.

 ಸ್ವಾತಂತ್ರ್ಯ ಹೋರಾಟ ಮತ್ತು ಮಹಾತ್ಮ ಗಾಂಧಿ ಛಾಯೆ ಇಡೀ ಕಾದಂಬರಿಯುದ್ದಕ್ಕೂ ಅಲ್ಲಲ್ಲಿ ಬರುತ್ತ ಹೋಗುತ್ತದೆ. ಆದರೆ ಮೊದಲರ್ಧದಲ್ಲಿ ಬಂದಷ್ಟು ಸಹಜವಾಗಿ ದ್ವಿತೀಯಾರ್ಧದಲ್ಲಿ ಅದು ಕಥನದೊಳಗೆ ಹೆಣೆದಿಲ್ಲ. ಕಥನ ನಡೆಯುತ್ತಿರುವ ಜಗತ್ತಿಗೆ ಅನ್ಯ ಅಥವಾ ಪರೋಕ್ಷವಾದದ್ದನ್ನೇನೋ ಬಲವಾಗಿ ನುಗ್ಗಿಸುವ ಪ್ರಯತ್ನ ಮಾಡಿದಂತೆ ಭಾಸವಾಗುತ್ತದೆ. ಈ ಭಾವ ಹುಟ್ಟಲು ಕಾರಣ ಏನಿರಬಹುದು ಎಂದು ಯೋಚಿಸಿದರೆ ಮತ್ತೆ ಎದ್ದು ಕಾಣುವುದು ನಿರೂಪಕನ ರಾಜಕೀಯ ನಿರೂಪಕನಿಗೆ ತಾನು ಗಾಂಧಿಭಕ್ತ (ಇವನು ಇಂದಿನ ಹಲವು ಸೋ ಕಾಲ್ಡ್ ಗಾಂಧಿವಾದಿಗಳನ್ನು ನೆನಪಿಸುತ್ತಾನೆ) ಎಂದು ಬಿಂಬಿಸಿಕೊಳ್ಳುವ ಹವಣಿಕೆ ಎದ್ದು ಕಾಣುತ್ತದೆ. ಅದಕ್ಕಿಂತ ಹೆಚ್ಚಾಗಿ, ಸಂಕೀರ್ಣ ಇತಿಹಾಸದ ನಡೆಗಳನ್ನು ತನಗೆ ಬೇಕಾದಷ್ಟೇ ಎತ್ತಿಕೊಂಡು, ಬೇಕಾದ ಹಾಗೆ ಜೋಡಿಸಿಕೊಂಡು, ನ್ಯಾಯಾಧೀಶನ ಧ್ವನಿಯಲ್ಲಿ ನಿರೂಪಿಸುವ ಸೈದ್ಧಾಂತಿಕ ಉದ್ದೇಶವೂ ಇದೆ. ಹಾಗಾಗಿಯೇ ಗಾಂಧಿಯ ನೆರಳೊಂದಿಗೆ ಅನುಸಂಧಾನ ನಡೆಸಿದವರೂ ಆಡಲಾರದ ಮಾತುಗಳನ್ನು ಇಲ್ಲಿ ನಿರೂಪಕ ಆಡುತ್ತಾನೆ. ನಿರೂಪಕನ ಸೈದ್ಧಾಂತಿಕ ಬದ್ಧತೆ ಮುನ್ನೆಲೆಗೆ ಬರುತ್ತ ಹೋದ ಹಾಗೆಲ್ಲ ಕಾದಂಬರಿ ತನ್ನ ಬಿಗಿ ಕಟ್ಟುಗಳನ್ನು ಬಿಚ್ಚಿಕೊಳ್ಳುತ್ತ ಅಳ್ಳಕವಾಗುತ್ತ ಹೋಗುತ್ತದೆ. ಪಾತ್ರಗಳು ನಿರೂಪಕನ ಮಾತುಗಳನ್ನು ತಮ್ಮ ಬಾಯಲ್ಲಿ ಆಡುತ್ತ ಬಡವಾಗುತ್ತ ಹೋಗುತ್ತವೆ. ಗಾಢವಾದ ಅನುಭವದ ಮೂಲಕ ಜೀವನದರ್ಶನವನ್ನು ಕಾಣಿಸಬಹುದಾಗಿದ್ದ ಕೃತಿಯೊಂದು ಈ ವೈರುಧ್ಯದ ಬಿರುಕಿನಲ್ಲಿಯೇ ಕುಸಿಯುತ್ತದೆ. ಈ ಕುಸಿತದ ಮುಂದೆ, ಕೊನೆಯಲ್ಲಿ ಬರುವ ವಚ್ಚಕ್ಕನ ಭಾವಪೂರ್ಣ ಇಮೇಜ್ ಕೂಡ ಮಂಕಾಗಿಬಿಡುತ್ತದೆ.

ಪ್ರತಿಭಾವಂತ ಲೇಖಕನ ಸೃಜನಶೀಲತೆಯ ಜಿಗಿತ ಮತ್ತು ಕುಸಿತ ಎರಡನ್ನೂ ಅರಿಯಲು 'ಗೈರ ಸಮಜೂತಿ' ಒಳ್ಳೆಯ ಓದು.

(ಕೃಪೆ : ಪ್ರಜಾವಾಣಿ, ಬರಹ :ಪದ್ಮನಾಭ ಭಟ್)

----

ಒಂದು ಕಾಲದ ನಮ್ಮ ಹಿಂದಿ ಕವಿಗಳಾದ ಬಚ್ಚನ್, ನಿರಾಲಾ, ಸುಮಿತ್ರಾನಂದನ್ ಪಂತರಂತಹ ಲೇಖಕರು ರೂಪಿಸಿಕೊಂಡಿದ್ದ ಆಜ್ಞೆಯತಾವಾದದ ಇನ್ನೊಂದು ಉದಾರೀಕೃತ ತಾತ್ವಿಕ ಸುಕುಮಾರ ರೂಪವೇ ಈ ಕಾದಂಬರಿಯ ಅಡಿಪಾಯದಲ್ಲೂ ಇದೆ ಎನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಬಗೆಯಲ್ಲಿ ರಸರಮ್ಯಲೋಕವೊಂದನ್ನು ಕಟ್ಟಿಕೊಡುವ ಕಥನಗಳು ಇಲ್ಲಿವೆ. ರಾಘವೇಂದ್ರ ಪಾಟೀಲರ “ಗೈರ ಸಮಜೂತಿ” ಕಾದಂಬರಿಯ ಕುರಿತು ಮಾಲಿನಿ ಗುರುಪ್ರಸನ್ನ ಬರಹ.

ರಾಘವೇಂದ್ರ ಪಾಟೀಲರ ಗೈರ ಸಮಜೂತಿ ಮೊಟ್ಟಮೊದಲು ನನ್ನನ್ನು ಸೆಳೆದದ್ದು ಅದರ ಜವಾರಿ ಭಾಷೆಯಿಂದ. ಹೆಸರೂ ಅಲ್ಲಿನ ನೇಟಿವಿಟಿಯದ್ದೇ ಆಗಿರುವ ಕಾರಣದಿಂದ ಕಾದಂಬರಿಗೊಂದು ವಿಶಿಷ್ಟ ಘಮಲು ಪ್ರಾಪ್ತವಾಗಿದೆ. ಸಾಮಾನ್ಯವಾಗಿ ಪಾಟೀಲರ ಕೃತಿಗಳು ಅವರ ಮಣ್ಣಿನವೇ ಆಗಿರುತ್ತವೆ ಮತ್ತು ಆ ಪರಿಸರದ ಭಾಷೆಯನ್ನೇ ಬಳಸಿರುತ್ತವಾದರೂ ಈ ಕಾದಂಬರಿಯ ವ್ಯಾಪ್ತಿ ಬಹಳ ಹಿರಿದು.

ಕಟು ವಾಸ್ತವವನ್ನು ಹೇಳುತ್ತಾ, ಎದುರಾಗುವ ಪರಿಸ್ಥಿತಿಗಳನ್ನು ಎದುರಿಸಲಾಗದೆ ಹತಾಶರಾಗಿ ಕೈಚೆಲ್ಲಿ ಕೂರುವ, ತನ್ಮೂಲಕ ವಸ್ತು ಸ್ಥಿತಿಯ ದಾರುಣತೆಯನ್ನು ಮನದಟ್ಟು ಮಾಡಿಕೊಡುವ ಕೃತಿಗಳ ರೀತಿ ಒಂದು ಬಗೆಯದು. ಶಿವರಾಮ ಕಾರಂತರ ಚೋಮನ ದುಡಿಯಲ್ಲಿನ ಚೋಮ ಕೊನೆಯಲ್ಲಿ ದಾಟಲಾಗದೆ ಅಸಹಾಯಕನನ್ನಾಗಿಸಿ ನಿಲ್ಲಿಸಿ ಅಂತಹಾ ಅಸಂಖ್ಯ ಚೋಮರ ಸ್ಥಿತಿಗತಿಗಳನ್ನು ಮನದಟ್ಟು ಮಾಡಿಕೊಡುವುದು ಒಂದು ಬಗೆ. ಪರಿಸ್ಥಿತಿಯ ದಾರುಣತೆಯನ್ನು ಪಾತ್ರಗಳನ್ನು ಅಂತಹಾ ಅಸಹಾಯಕ ಸ್ಥಿತಿಯಲ್ಲಿ ನಿಲ್ಲಿಸಿ ಅರಿವಾಗಿಸುವುದು ಹೊಸತೇನಲ್ಲ. ಎಂ. ಕೆ. ಇಂದಿರಾ ಅವರಂತಹ ಮಹಿಳಾ ಕಾದಂಬರಿಕಾರರೂ ಗೆಜ್ಜೆಪೂಜೆಯಲ್ಲಿ ಮಾಡಿರುವುದು ಇದನ್ನೇ.

ಇದಕ್ಕೆ ತದ್ವಿರುದ್ಧವಾದ ಅಥವಾ ಇದಕ್ಕಿಂತ ಭಿನ್ನವಾದ ರೀತಿಯಲ್ಲಿ ಕಥೆಯನ್ನು ಮುಗಿಸುತ್ತಾ ಹೀಗಿತ್ತು.. ಹೀಗಾದರೆ ಚೆನ್ನು ಎಂದು ಹೇಳುವ, ತನ್ಮೂಲಕ ಆ ರೀತಿಯ ಬದಲಾವಣೆಯ ಕಡೆಗೆ ದೃಷ್ಟಿ ಹರಿಸಲೆತ್ನಿಸುವುದು ಇನ್ನೊಂದು ಬಗೆ. ಈ ಕಾದಂಬರಿಯನ್ನೇ ನೋಡುವುದಾದರೆ ಒಂದು ಕಾಲದ ನಮ್ಮ ಹಿಂದಿ ಕವಿಗಳಾದ ಬಚ್ಚನ್, ನಿರಾಲಾ, ಸುಮಿತ್ರಾನಂದನ್ ಪಂತರಂತಹ ಲೇಖಕರು ರೂಪಿಸಿಕೊಂಡಿದ್ದ ಆಜ್ಞೆಯತಾವಾದದ ಇನ್ನೊಂದು ಉದಾರೀಕೃತ ತಾತ್ವಿಕ ಸುಕುಮಾರ ರೂಪವೇ ಈ ಕಾದಂಬರಿಯ ಅಡಿಪಾಯದಲ್ಲೂ ಇದೆ ಎನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಬಗೆಯಲ್ಲಿ ರಸರಮ್ಯಲೋಕವೊಂದನ್ನು ಕಟ್ಟಿಕೊಡುವ ಕಥನಗಳು ತೌಲನಿಕ ಜಿಜ್ಞಾಸೆಯ ಕೃತಿಗಳಿಗಿಂತ ಕಡಿಮೆ ಧಾರಣ ಶಕ್ತಿಯುಳ್ಳವು ಎಂದು ಹೇಳಲು ಬರುವುದಿಲ್ಲ. ಅಲ್ಲಿ ಯಾವ ತಾರತಮ್ಯದ ಸಾಧ್ಯತೆಯೂ ಇಲ್ಲ. ಏಕೆಂದರೆ ಸೃಜನಶೀಲತೆಯ ಸೊಗಡು ಯಾವ ಕೃತಿಯ ಅಡುಗೆಯಲ್ಲಿ ಯಾವ ಓದುಗನ ನಾಲಗೆಗೆ ಹೇಗೆ ದಕ್ಕುತ್ತದೆ ಎಂಬ ಬಗ್ಗೆ ಸಿದ್ಧ ಸೂತ್ರಗಳು ಇಲ್ಲ. ಇಲ್ಲಿ ಏಕ ವ್ಯಂಜನ ಪ್ರಯೋಗ ಸಾಧ್ಯವೇ ಇಲ್ಲ.

ಪಾಟೀಲರ ಬರಹಗಳನ್ನು ದಶಕಗಳಿಂದ ಓದಿಕೊಳ್ಳುತ್ತಾ ಬಂದ ನನಗೆ ಅವರ ಬಂಡಾಯದ ಮನಸ್ಥಿತಿಯ ಪಾತ್ರಗಳು ಚಿರಪರಿಚಿತ. ‘ಒಡಪುಗಳು’ ಕಥೆಯ ಹನುಮಿ ಕೊಡುವ ಒಡಪನ್ನು ಒಡೆಯಲೆತ್ನಿಸುತ್ತ ಕುಳಿತುಕೊಳ್ಳುವ ನಾಯಕನಿಗಿಂತ ಹನುಮಿಯ ನಿರ್ಭೀತ ಪ್ರಶ್ನೆ ಕಾಡುತ್ತಲೇ ಇರುತ್ತದೆ. ತೇರು ಕಾದಂಬರಿಯ ನಾಯಕನ ಮನಸ್ಥಿತಿ ಕೂಡ ಬಂಡಾಯದ್ದೇ ಆಗಿದೆ. ಹೀಗೆ ಬಂಡಾಯದ ಮನಸ್ಥಿತಿಯ ಪಾತ್ರಗಳನ್ನು ತಮ್ಮ ಕೃತಿಗಳಲ್ಲಿ ಬಿಂಬಿಸುತ್ತಾ ಹೋದ ಪಾಟೀಲರ ಕೃತಿಗಳನ್ನು ಓದಿದ್ದ ನನಗೆ ಈ ಕಾದಂಬರಿಯ ಮೊದಲ ಓದು ಅಚ್ಚರಿಯಲ್ಲಿ ಕೆಡಹಿತು. ಪಾಟೀಲರ ಭಾವಪೂರ್ಣ ಅಭಿವ್ಯಕ್ತಿ, ಅವರು ಕಾಲದ ಜೊತೆ ಇಟ್ಟುಕೊಂಡ ಒಂದು ಅಲ್ಟಿಮೇಟ್ ಸಂಬಂಧ, ಅವರು ಎತ್ತಿರುವ ಸಮಸ್ಯೆಗಳು ಬಹಳ ಸವಿಸ್ತಾರವಾಗಿ ರಸಪೂರ್ಣ ವಿವರಗಳನ್ನು ಕಟ್ಟಿಕೊಡುತ್ತಾ ಸಾಗುವ ಈ ಕೃತಿಯ ಕಾಲ ಸ್ವತಂತ್ರ ಪೂರ್ವದ್ದು, ವಿಚಾರಗಳು ಬಹಳ ಹಿಂದಿನದು.. ಅಲ್ಲಿದ್ದ ನಂಬಿಕೆಗಳು ಬಹಳ ಪೂರ್ವದ್ದು.. ಬಾಲ್ಯ ವಿವಾಹವನ್ನು ಸಂಭ್ರಮಿಸುವ ಕಾಲದ್ದು. ಆದರೆ ಬರೆಯುತ್ತಿರುವ ಕಾದಂಬರಿಕಾರ ಆಧುನಿಕ ಕಾಲದ ಪ್ರಗತಿಪರ ಮನೋಭಾವವುಳ್ಳವರು. ಓದುಗರು ಆಧುನಿಕತೆಯಲ್ಲಿ ಮಿಂದೆದ್ದು ಇಂತಹ ವಿಚಾರಗಳ ಕುರಿತು ಚಿಕಿತ್ಸಕ ನೋಟ ಬೀರುವವರು. ಹೀಗಿರುವಾಗ ಓದುಗನ ಮುಂದೆ ಬಂದುನಿಲ್ಲುವ ಪ್ರಮುಖ ಸವಾಲುಗಳೇನು? ಒಬ್ಬ ಆಧುನಿಕ ಕಾದಂಬರಿಕಾರನ ಆಶಯವೇನು ಎನ್ನುವುದನ್ನು ನಿರ್ಣಯಿಸಿ ಕೃತಿಯ ಒಟ್ಟೂ ಆಕೃತಿಯನ್ನು ಅಜಮಾಯಿಸಿಕೊಳ್ಳುವುದು? ಜೀವನದ ಮೌಲ್ಯಗಳ ಹಲವು ದತ್ತ ರೂಪಗಳನ್ನು ಮುಖಾಮುಖಿಯಾಗಿಸಿ ಆತ ಸರಿ ತಪ್ಪುಗಳನ್ನು ನಿರ್ಣಯಿಸುತ್ತಿದ್ದಾನೆಯೋ ಅಥವಾ ಇದು ಸರಿ ಎಂದು ಗೊತ್ತಿದ್ದರೂ ಅದನ್ನು ಅನುಸಂಧಾನ ಮಾಡಿಕೊಳ್ಳುವುದು ಎಷ್ಟು ಕಷ್ಟ ಎಂದು ಹೇಳುತ್ತಿದ್ದಾನೆಯೋ ಅಥವಾ ಇಂತಹಾ ಸಂಕಷ್ಟದ ಸಂಕಟದಲ್ಲಿಯೂ ಹೇಗೆ ಕೆಲವರು ಗೆದ್ದು ಬದುಕುತ್ತಿದ್ದಾರೆ ನೋಡಿ ಎಂದು ತೋರಿಸುತ್ತಿದ್ದಾನೆಯೋ ಇದೆಲ್ಲವೂ ಬಹಳ ಕಷ್ಟಕರ ಮತ್ತು ಸಂಕೀರ್ಣ ನಿರೀಕ್ಷೆಗಳು. ಇಂತಹಾ ನಿರೀಕ್ಷೆಗಳ ಕುರಿತು ಕಾದಂಬರಿಕಾರ ಏನು ಹೇಳಬಹುದು? ನನಗೂ ಇಂತಹಾ ವಿಷಯಗಳಿಗೂ ಸಂಬಂಧವಿಲ್ಲ, ನಾನು ಕೇವಲ ಒಂದು ಜೀವನಾನುಭವ ಸಮುಚ್ಚಯದ ಚೆಲುವಾದ ರೂಪವನ್ನು ಚಿತ್ರಿಸಿರುವೆ.

ಹಾಗೆ ನಿಮ್ಮ ಮುಂದೆ ಇಡುವುದಷ್ಟೇ ನನ್ನ ಹೊಣೆ ಎನ್ನಬಹುದೇ? ಅಥವಾ ಅವುಗಳನ್ನು ನಿಮ್ಮ ನಿಮ್ಮ ಹಿನ್ನೆಲೆಯಲ್ಲಿ ನೀವು ಅರ್ಥೈಸಿಕೊಳ್ಳುವುದರ ಮೂಲಕ ಅದಕ್ಕೆ ಬಹು ಆಯಾಮಗಳು ದಕ್ಕುವಂತಾಗಲಿ ಎನ್ನಬಹುದೇ? ಜೀವನ ಮೌಲ್ಯಗಳ ತೌಲನಿಕ ಜಿಜ್ಞಾಸೆ ಮುಖ್ಯವೋ ಅಥವಾ ಸುಂದರವಾದ ಅನುಭವ ಲೋಕದ ಸಚಿತ್ರ ಅಭಿವ್ಯಕ್ತಿ ಮುಖ್ಯವೋ ಎನ್ನುವುದು ಕೂಡಾ ಅಷ್ಟೇ ಮುಖ್ಯ ಪ್ರಶ್ನೆಯಾಗುತ್ತದೆ.. ಜೀವನ ಮೌಲ್ಯಗಳ ಜಿಜ್ಞಾಸೆ ಓದುಗನಿಗೆ ಕಾಣುವಂತೆ ಕಾದಂಬರಿಯಲ್ಲಿ ತರುವುದು ಮುಖ್ಯವೋ, ಸಚಿತ್ರ ಅಭಿವ್ಯಕ್ತಿಯ ಮೂಲಕ ಅದು ತರಕಾರಿಯೊಳಗಿನ ಕ್ಯಾಲ್ಸಿಯಂ ನಂತೆ ಅರಿವಿಲ್ಲದೆ ರಕ್ತಗತವಾಗುವುದು ಮುಖ್ಯವೋ? ಯಾವ ಕಾಲದಲ್ಲಿ ನಿಂತು ಬರೆಯುತ್ತಿದ್ದಾರೋ ಆ ಕಾಲದ ಸಮಸ್ಯೆಗಳ ಬಗ್ಗೆ ಬರೆಯುವಾಗ, ಆ ಸಮಸ್ಯೆಗಳ ಪರಿಹಾರದ ಕುರಿತು ಯತ್ನಿಸುವಾಗ ಆ ಕಾಲದ ರೀತಿ ರಿವಾಜುಗಳನ್ನಷ್ಟೇ ಪರಿಗಣಿಸಬೇಕೇ ಅಥವಾ ಕಾದಂಬರಿಕಾರ ಬದುಕುತ್ತಿರುವ ವರ್ತಮಾನದ ಅರಿವಿನಲ್ಲಿ ಅವುಗಳಿಗೆ ಬೇರೆಯೇ ದಾರಿ ತೋರಿಸಬೇಕೇ? ಏಕೆಂದರೆ ಅನೇಕ ಹಳೆಯ ಸಮಸ್ಯೆಗಳಿಗೆ ನೂರು ದಾರಿ ದಕ್ಕಿಹೋಗಿರುವ ಹೊತ್ತಿನಲ್ಲಿ ಆ ಸಮಸ್ಯೆಗಳನ್ನು ಸಮಸ್ಯೆಗಳಂತೆ ಓದುಗನ ಮುಂದಿಡಬೇಕಾದ ಸವಾಲನ್ನು ಕಾದಂಬರಿಕಾರ ಎದುರಿಸುವುದಿಲ್ಲವೇ? ಬಹಳ ಕಷ್ಟಕರ ಪ್ರಶ್ನೆಗಳಿವು.

ಪಾಟೀಲರು ಈ ಸವಾಲನ್ನು ಕೈಗೆತ್ತಿಕೊಂಡಿದ್ದಾರೆ. ಹಾಗೆ ಕೈಗೆತ್ತಿಕೊಂಡಾಗ ಅವರು ಕಾಲಕ್ಕೆ ನಿಷ್ಠರಾಗಿದ್ದಾರೆ. ತಪ್ಪು ತಿಳುವಳಿಕೆ ಎಂಬರ್ಥವನ್ನು ಕೊಡುವ ಗೈರ ಸಮಜೂತಿಯಲ್ಲಿ ಎಷ್ಟೋ ಗೈರ ಸಮಜೂತಿಗಳಿಂದ ಹುಟ್ಟಿದ ಸಂಘರ್ಷ ಹಾಗೂ ಸಂಕಟಗಳ ಆಕೃತಿಗಳಿವೆ. ಆ ಸಂಘರ್ಷ ಹಾಗೂ ಸಂಕಟಗಳ ಆಕೃತಿಗಳು ಬದುಕಿನ ಅತ್ಯಂತ ದಟ್ಟವಾದ ಅನುಭವಗಳ ಲೋಕದೊಳಗೆ ಸಂಭವಿಸುವುದರಿಂದ ಒಟ್ಟಾರೆಯಾಗಿ ಸುಖ ದುಃಖಗಳ ಸಹಜ ಸಮ್ಮಿಶ್ರಣದಲ್ಲಿ ಓದುಗ ಜೀಕುತ್ತಿರುತ್ತಾನೆ. ಅಲ್ಲಿ ಬಳಸಿರುವ ಭಾಷೆ, ಕಟ್ಟಿಕೊಟ್ಟಿರುವ ಪರಿಸರ, ಆ ಅನುಭವ ಲೋಕದ ಮೇಲೆ ಲೇಖಕನಿಗಿರುವ ಸ್ಪಷ್ಟ ಹಿಡಿತ ಓದುಗನ ಜೀಕನ್ನು ಲಯಬದ್ಧವಾಗಿಸುತ್ತದೆ.. ವಚ್ಚಕ್ಕನಿಗೆ ಇನ್ನೊಂದು ಮದುವೆ ಮಾಡಿಸಬಹುದಿತ್ತಲ್ಲ ಎಂಬ ಪ್ರಶ್ನೆ ಆಧುನಿಕ ಓದುಗನ ಮುಂದೆ ಕುಣಿದರೂ ಅದು ಆ ಜೀಕನ್ನು ಅವ್ಯವಸ್ಥಿತಗೊಳಿಸುವುದಿಲ್ಲ.

ಕಾದಂಬರಿಯ ನಾಯಕಿ ವಚ್ಚಕ್ಕನಿಗೆ ಆಕೆ ಮೈನೆರೆಯುವ ಮುನ್ನವೇ ಎಂಟನೆಯ ವಯದಲ್ಲೇ ಮದುವೆ ಮಾಡಿಬಿಡುತ್ತಾರೆ. ಮುಂದೆ ವೈಧವ್ಯ, ಮಡಿ, ಮೈಲಿಗೆ ಇವೆಲ್ಲವನ್ನೂ ಆಕೆ ಎದುರಿಸುತ್ತಾ ಹೋಗುತ್ತಾಳೆ. ಈ ಬಾಲ್ಯ ವಿವಾಹವೆಂಬುದು ತಂದೊಡ್ಡುವ ದುರಂತಗಳ ಸರಮಾಲೆ.. ವಚ್ಚಕ್ಕನಿಗೆ ಎಂಟರ ಪ್ರಾಯಕ್ಕೇ ಮದುವೆ ಮಾಡಿಬಿಡುವ ಆ ಕಾಲದ ಪರಿಕಲ್ಪನೆಯೊಳಗೇ ಆ ಕಾದಂಬರಿಯಲ್ಲಿ ಹುಟ್ಟಿದ ಅನೇಕ ದುಃಖಗಳ ಪರಂಪರೆಯ ಬೀಜಗಳೂ ಇವೆ. ಆದರೆ ಕಾದಂಬರಿಯ ಕಾಲದ ಮಿತಿಯನ್ನು ಮೀರಲಾಗದ ಕಾದಂಬರಿಕಾರ ಅದನ್ನು ಮಾತುಗಳಲ್ಲಿ ಹೇಳಲಾರ. ಹೇಳಿದರೆ ಓದುಗ ಆ ಕಾಲದಿಂದ ಈ ಕಾಲಕ್ಕೆ ಜಿಗಿದುಬಿಡುತ್ತಾನೆ… ಹಾಗಾಗಿ ಪಾಟೀಲರ ನಿಷ್ಠೆ ಆ ಕಾದಂಬರಿಯ ಕಾಲಕ್ಕೆ, ಅಲ್ಲಿ ಸಂಭವಿಸಿದ ಘಟನಾವಳಿಗೆ. ಓದುಗನಿಗೇ ಅದು ಅರಿವಾಗಬೇಕು..

ಅಲ್ಲಿ ಯಾವ ತಾರತಮ್ಯದ ಸಾಧ್ಯತೆಯೂ ಇಲ್ಲ. ಏಕೆಂದರೆ ಸೃಜನಶೀಲತೆಯ ಸೊಗಡು ಯಾವ ಕೃತಿಯ ಅಡುಗೆಯಲ್ಲಿ ಯಾವ ಓದುಗನ ನಾಲಗೆಗೆ ಹೇಗೆ ದಕ್ಕುತ್ತದೆ ಎಂಬ ಬಗ್ಗೆ ಸಿದ್ಧ ಸೂತ್ರಗಳು ಇಲ್ಲ. ಇಲ್ಲಿ ಏಕ ವ್ಯಂಜನ ಪ್ರಯೋಗ ಸಾಧ್ಯವೇ ಇಲ್ಲ.

ಅವರ ತೇರು ಕಾದಂಬರಿಯ ದೇವಪ್ಪ ತಾನು ಮದುವೆ ಮಾಡಿಕೊಳ್ಳಬೇಕೆಂದಿದ್ದ ಹುಡುಗಿಯ ಜೊತೆಗೆ ಮದುವೆ ಸಾಧ್ಯವಾಗದಿದ್ದಾಗ ಹತಾಶನಾಗುತ್ತಾನೆ. ‘ನನ್ನ ನಿನ್ನ ಮದುವೆಯನ್ನು ದೇವರು ಮಾಡಲಿಲ್ಲ. ಇಂತಹ ದೇವರನ್ನು ನಾನು ಕಟ್ಟಿಕೊಂಡು ಏನು ಮಾಡಲಿ. ನಿಜವಾಗಿಯೂ ಅಂತಹ ದೇವರೆಂಬಾತ ಇದ್ದಾನೆಂದರೆ ಅವನ ವಿರುದ್ಧ ನಾನು ಪ್ರತಿಭಟನೆ ಮಾಡುತ್ತೇನೆ, ಬಂಡಾಯ ಏಳುತ್ತೇನೆ’ ಹೀಗೆ ಅವಳಿಗೆ ಪತ್ರ ಬರೆಯುವ ದೇವಪ್ಪ ಓದುಗನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತಾನೆ. ದೇವರ ವಿರುದ್ಧ ಬಂಡಾಯ ಏಳುವುದು ಒಂದು ಸಮರ್ಥವಾದ ಪ್ರಜ್ಞೆಯ ಕೆಲಸ ಎಂದು ಭಾವಿಸುವುದಾದರೆ ಗೈರ ಸಮಜೂತಿ ಅದರ ಇನ್ನೊಂದು ದಿಕ್ಕಿನತ್ತ ಬಹಳ ವೇಗವಾಗಿ ಚಲಿಸುತ್ತದೆ. ಅಂದರೆ ವಿಧವೆ ವಚ್ಚಕ್ಕ ರಾತ್ರಿ ಉಪವಾಸ ಮಾಡುವುದು, ಬಾಣಂತನ ಮಾಡಿಕೊಂಡು ಬಂದ ತಕ್ಷಣ ಸ್ನಾನ ಮಾಡುವುದು, ಉಪವಾಸ ಇರುವುದು.. ಹಾಗಾದರೆ ಪಾಟೀಲರೊಳಗಿರುವ ಆಧುನಿಕ ಲೇಖಕ ಇದನ್ನು ಒಪ್ಪಿಕೊಂಡು ಬರೆದಿದ್ದಾರೆ ಎಂದು ಭಾವಿಸಬಹುದೇ? ಬಂಡಾಯದ ನಿಲುವುಗಳು ಬದಲಾದವು ಎಂದು ಅಂದುಕೊಳ್ಳಬಹುದೇ? ಆದರೆ ತೇರು ಕಾದಂಬರಿಯ ಕಾಲಕ್ಕೂ, ಗೈರ ಸಮಜೂತಿಯಲ್ಲಿರುವ ಕಾಲಕ್ಕೂ ಬಹಳ ಅಂತರವಿದೆ. ಈ ಬಂಡಾಯ ತೇರುವಿನಲ್ಲಿರುವ ಕಾಲಕ್ಕೆ ಸಹಜ, ಗೈರ ಸಮಜೂತಿಯ ಕಾಲಕ್ಕೆ ಒಪ್ಪುವುದು ಕಷ್ಟ. ನನಗಿಲ್ಲಿ ಕಾಣುವುದು ತನ್ನ ಕಾಲದ ಯಾವುದೇ ಅಭಿಪ್ರಾಯವನ್ನೂ, ಅನುಭವವನ್ನೂ ತುರುಕದ ಆ ಕಾಲಕ್ಕೆ ನಿಷ್ಠನಾದ ಲೇಖಕ.

ಧರ್ಮ ಎನ್ನುವುದನ್ನು ಡೆಮಾಕ್ರೆಟಿಕ್ ಆಗಿ ಅನುವಾದ ಮಾಡಿದರೆ ಎಷ್ಟು ಸಮಸ್ಯೆಗಳು ಹುಟ್ಟುತ್ತವೆ ಭಾರತೀಯ ಹಿಂದೂ ಧರ್ಮದೊಳಗೆ ಎನ್ನುವುದನ್ನು ಪಾಟೀಲರಿಗೆ ಹೇಳಬೇಕಿತ್ತು ಎನ್ನಿಸುತ್ತದೆ.. ಬಾಲ್ಯವಿವಾಹ, ಮಡಿ ಮೈಲಿಗೆ, ವೈಧವ್ಯ, ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಇಂತಹಾ ಅನೇಕ ವಸ್ತು ವಿಷಯಗಳನ್ನು ಕಾದಂಬರಿ ಒಳಗೊಂಡಿದೆ. ಸತ್ಯಬೋಧರ ಪಾತ್ರವನ್ನೇ ನೋಡಿ. ಅವರು ಮಡಿಮೈಲಿಗೆ, ಪೂಜೆ, ಅಡುಗೆಯನ್ನು ಮಾಡಬೇಕು, ವೈಶ್ವದೇವ ಹೋಮ ಮಾಡಬೇಕು.. ಸಕಲ ಆಚಾರಗಳನ್ನೂ ಪಾಲಿಸುವ ನಿಷ್ಠಾವಂತ ಬ್ರಾಹ್ಮಣ ಸತ್ಯಬೋಧರು. ಆದರೆ ಅವರ ಆದರ್ಶ ಮಹಾತ್ಮಾ ಗಾಂಧಿ. ಒಬ್ಬ ವೈದಿಕ ಮನುಷ್ಯ ಗಾಂಧಿಯನ್ನು ಮೆಚ್ಚಬಾರದೆಂದೇನೂ ಇಲ್ಲ. ಆದರೆ ಗಾಂಧಿಯನ್ನು ಯಾವ ಕಾರಣಕ್ಕಾಗಿ ಮೆಚ್ಚಿಕೊಂಡಿದ್ದರು ಎಂಬ ಮಾತು ಬಂದಾಗ ಓದುಗ ಗಲಿಬಿಲಿಗೊಳ್ಳುತ್ತಾನೆ. ಗಾಂಧಿಯವರು ಹರಿಜನರ ಹಕ್ಕುಗಳಿಗಾಗಿ ಹೋರಾಡಿದವರು, ಅವರೂ ದೇವಾಲಯದೊಳಗೆ ಪ್ರವೇಶಿಸಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದವರು. ಜಾತೀಯತೆಯನ್ನು ವಿರೋಧಿಸಿದವರು ಅವರು. ಆದರೆ ಸತ್ಯಬೋಧರು ತಮ್ಮ ಮನೆಯೊಳಗೇ ಸಕಲ ಮಡಿ, ಮುಟ್ಟು, ತಟ್ಟು ಎಲ್ಲವನ್ನೂ ಪಾಲಿಸುತ್ತಿದ್ದವರು. ತಮ್ಮ ಮನೆಗೆ ಕೆಲಸಕ್ಕೆ ಬರುವವಳಿಗೆ ದೂರದಿಂದಲೇ ಪಾತ್ರೆಗಳನ್ನು ಹಾಕುವವರು. ಅಂದರೆ ಗಾಂಧಿಯ ಬಗೆಗಿನ ಸತ್ಯಬೋಧರ ಗೌರವ ಭಾವುಕ ನೆಲೆಯದ್ದೇ ಹೊರತು ಅದಕ್ಕೆ ಯಾವ ವೈಚಾರಿಕ ಹಿನ್ನೆಲೆಗಳೂ ಇಲ್ಲ. ಅವರ ಪಾತ್ರ ಉದಾತ್ತವಾದದ್ದೇ, ಅವರ ಪ್ರೀತಿ, ವಚ್ಚಕ್ಕನ ಬಗ್ಗೆ ಅವರಿಗಿರುವ ಕಳಕಳಿ, ಆಕೆಗೆ ಕಲಿಸಹೊರಡುವುದು, ಆಕೆಯ ವ್ಯಕ್ತಿತ್ವವನ್ನು ರೂಪಿಸುವುದು.. ಹೀಗೆ ಅವರ ಅಂತಃಕರಣದ ಬಗ್ಗೆ ಸಂಶಯವೇ ಇಲ್ಲ. ಆದರೆ ಮೌಲ್ಯಗಳ ಜಗತ್ತಿನೆಡೆಗೆ ನೋಡಿದರೆ ಗಾಂಧಿ ಪ್ರತಿಪಾದಿಸುವ ಅನೇಕ ವಿಷಯಗಳ ಬಗ್ಗೆ ಸತ್ಯಬೋಧರು ಯೋಚಿಸುವುದೂ ಇಲ್ಲ ಎಂಬುದು ಅರಿವಾಗುತ್ತದೆ.

ವಿಧವೆ ವಚ್ಚಕ್ಕ ಇಡೀ ಕಾದಂಬರಿಯುದ್ದಕ್ಕೂ ರಾತ್ರಿ ಉಪವಾಸ ಇರುತ್ತಾಳೆ. ಉಂಡು ತಿಂದು ಬೆಳೆಯಬೇಕಾದ ಸಣ್ಣ ವಯಸ್ಸು, ಅವಳಿಗೆ ಇದು ಕಷ್ಟ.. ಅವಳಿಗೆ ಊಟ ಮಾಡುವಂತೆ ತಾವು ಹೇಳಬಹುದು ಎಂಬ ವಿಚಾರ ಅವರ ಯೋಚನೆಯ ಪರಿಧಿಯೊಳಗೂ ಸುಳಿಯುವುದಿಲ್ಲ. ಧರ್ಮ ಶಾಸ್ತ್ರ, ಸಮಾಜ ಶಾಸ್ತ್ರ ಎರಡನ್ನೂ ಒಟ್ಟಾರೆಯಾಗಿ ನಡೆಸಿಕೊಂಡು ಹೋಗುವುದು ಸುಲಭದ ವಿಷಯವಲ್ಲ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪಾಟೀಲರು ಆ ಕಾಲದಲ್ಲಿ ಪರಂಪರೆಯ ಪರಿಧಿಯೊಳಗೆ ಸುಧಾರಣೆ ಪ್ರವೇಶಿಸುವಾಗ ಎದುರಾಗುವ ಸಂಕಷ್ಟಗಳನ್ನು ಮತ್ತು ಮಿತಿಗಳನ್ನು ಹೀಗೆ ಸೂಚ್ಯವಾಗಿ ಹೇಳಿದ್ದಾರೆ ಎಂಬುದನ್ನು. ತನ್ನತನ ಎಂದು ನಂಬಿರುವ ಪರಂಪರೆಯ ಆಚರಣೆಗಳನ್ನು ಬಿಡಲಾಗದ, ಸುಧಾರಣೆಯನ್ನು ಸಂಪೂರ್ಣ ಅಪ್ಪಿಕೊಳ್ಳಲಾಗದ ಮನುಷ್ಯನ ದ್ವಂದ್ವವನ್ನು ಆ ಕಾಲದಿಂದ ಹೊರಬರಲಾಗದ ಬರವಣಿಗೆಯ ಮಿತಿಯಲ್ಲಿ ಹೀಗೆಯೇ ಹೇಳಬೇಕಾಗಿ ಬರುವುದು.

ಒಂದು ವೇಳೆ ಅವರು ಉದಾರವಾಗಿ ಸತ್ಯಬೋಧರನ್ನು ಹೀಗೆಲ್ಲಾ ಚಿತ್ರಿಸಿದ್ದರೆ ಕಾದಂಬರಿ ಸ್ವಲ್ಪ ಕೃತಕವಾಗುತ್ತಿತ್ತು. ಏಕೆಂದರೆ ಆ ಕಾಲದಲ್ಲಿ ನಡಾವಳಿಗಳು ಹೇಗಿತ್ತೋ ಹಾಗೆಯೇ ಚಿತ್ರಿಸಬೇಕಲ್ಲದೆ ಕಾದಂಬರಿಕಾರನ ಆಶಯಗಳನ್ನು ಚಿತ್ರಿಸಿದರೆ ಆ ಕಾಲದ ಚಿತ್ರಣ ಓದುಗನ ಮುಂದಿಡಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಸತ್ಯಬೋಧರ ಅಂತಃಕರಣವನ್ನು ಕಟ್ಟಿಕೊಡಬಹುದೇ ವಿನಃ ಅಂದಿನ ಸಂಪ್ರದಾಯದ ಆಚರಣೆಗಳಿಂದ ಸತ್ಯಬೋಧರನ್ನು ಹೊರಗೆಳೆಯಲಾಗುವುದಿಲ್ಲ. ಆ ದ್ವಂದ್ವವನ್ನು ಕಟ್ಟಿಕೊಡುವಾಗ ಬೇಕಾದ ಸಂಯಮವನ್ನು ಪಾಟೀಲರು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ.

ಸೂಲಗಿತ್ತಿ ಎಂಬ ಪ್ರಕಾರ ಭಾರತೀಯ ಸಮಾಜದಲ್ಲಿ ಹೊಸತೇನೂ ಅಲ್ಲ. ಮೊದಲೆಲ್ಲ ಪರಿಣತಿ ಪಡೆದ ಸೂಲಗಿತ್ತಿಯರೇ ಹೆರಿಗೆ ಮಾಡಿಸುತ್ತಿದ್ದುದು ಕೂಡಾ. ಆಸ್ಪತ್ರೆಗೆ ಹೋಗುತ್ತಿದ್ದವರೂ ಕಡಿಮೆಯೇ. ಉದಾಹರಣೆಗೆ ಫಣಿಯಮ್ಮ ಕಾದಂಬರಿಯನ್ನು ನೋಡಬಹುದು. ಅಲ್ಲಿಯ ಫಣಿಯಮ್ಮ ಕೂಡಾ ಬಾಲವಿಧವೆ. ಯಾವುದೊ ಒಂದು ಸನ್ನಿವೇಶದಲ್ಲಿ ಅನಿವಾರ್ಯವಾಗಿ ಹೆರಿಗೆ ಮಾಡಿಸಿ ನಂತರ ಅದರ ಮಹತ್ವದ ಅರಿವಾಗಿ ಅದನ್ನು ಸಮಾಜಸೇವೆಯಂತೆ ಮುಂದುವರಿಸಿಕೊಂಡು ಹೋಗುತ್ತಾಳೆ. ಇಲ್ಲಿ ವಚ್ಚಕ್ಕ ಮಾಡುವುದೂ ಅದೇ ಕೆಲಸವನ್ನೇ. ಫಣಿಯಮ್ಮ, ವಚ್ಚಕ್ಕ ಇಬ್ಬರಿಗೂ ಒಂದೇ ರೀತಿಯ ಇಕ್ಕಟ್ಟು ಎದುರಾಗುತ್ತದೆ ಸನ್ನಿವೇಶಗಳು ಬೇರೆಬೇರೆ ಇದ್ದರೂ. ಹೆರಿಗೆ ಮಾಡಿಸಿ ಬಂದ ಫಣಿಯಮ್ಮ ಮನೆಯಲ್ಲಿ ತಾನು ಹೋಗುವ ಹೊತ್ತಿಗಾಗಲೇ ಹೆರಿಗೆಯಾಗಿತ್ತು ಎಂದು ಹಾರಿಸಿ ಉತ್ತರ ಕೊಟ್ಟು ಮಲಗುತ್ತಾಳೆ. ಆದರೆ ವಚ್ಚಕ್ಕಳಿಗೆ ಹಾಗೆ ಮಾಡಲಾಗುವುದಿಲ್ಲ, ಅವಳು ಪ್ರತಿಭಟಿಸಿಯೇ ಹೋಗಬೇಕಾಗುತ್ತದೆ. ಏಕೆಂದರೆ ಅಲ್ಲಿ ವಚ್ಚಕ್ಕ ಎದುರಿಸಬೇಕಾಗಿದ್ದುದು ಮಾಧವನ ಉಗ್ರ ಧಾರ್ಮಿಕತೆ. ಅಲ್ಲಿಗೇ ಹಿಂತಿರುಗಬೇಕು ಮತ್ತು ನಂತರ ಅಲ್ಲಿಯೇ ಇರಬೇಕಾದ ಅಸಹಾಯಕ ಪರಿಸ್ಥಿತಿ ಕೂಡಾ ಆಕೆಯನ್ನು ಹಿಮ್ಮೆಟ್ಟಿಸುವುದಿಲ್ಲ.

ಅಂತಿಮ ಭಾಗ ಆಧುನಿಕ ಓದುಗನಿಗೆ ಪ್ರಿಯವೇ ಆಗಿಬಿಡುತ್ತದೆ. ಅಲ್ಲಿ ಪಾಟೀಲರ ಮೂಲ ಸ್ಥಾಯೀ ಭಾವ ಬಂಡಾಯ ಬೇರೆಯದೇ ಆಕಾರ ಪಡೆಯುವುದನ್ನು ಗಮನಿಸಬಹುದು. ಇಂದಿನ ಸತ್ಯಬೋಧರ ಅಂತಃಕರಣವುಂಡು, ಕುಮಾರಿಲನಾಥರ ವೈಚಾರಿಕ ಹಿನ್ನೆಲೆಯಲ್ಲಿ ವ್ಯಕ್ತಿತ್ವ ರೂಪಿಸಿಕೊಂಡ ವಚ್ಚಕ್ಕ ಊಟಕ್ಕೆ ಕುಳಿತಾಗ ಮಾಧವ ಶಾಮರಾಯರ ಜೊತೆಗಿನ ಸಂಭಾಷಣೆಯಲ್ಲಿ ವಚ್ಚಕ್ಕನ ಮಾತುಗಳು ನನಗೆ ಬಂಡಾಯ ಸಾಗಬೇಕಾದ ಸರಿ ದಾರಿಯನ್ನು ತೋರಿಸುವಂತೆ ಮತ್ತು ಹಾಗೆ ಮಾತನಾಡಿದ ನಂತರವೂ ಕೌಟುಂಬಿಕ ಸ್ವಾಸ್ಥ್ಯವನ್ನು ಕದಡದ ಸ್ವಸ್ಥ ಮನಸ್ಸಿನ ಮಾತುಗಳಂತೆ ಕಾಣಿಸಿತು. ಬಂಡಾಯ ಮತ್ತು ಪರಂಪರೆ ಎರಡೂ ಒಟ್ಟೊಟ್ಟಾಗಿ ಸಮಚಿತ್ತದಿಂದ ಸಾಗುವ ದಿನ ಬರುವುದೆಂದು? ಆಶಯವಾಗಿಯೂ ಬರಬಾರದೇ? ಲೇಖಕರ ಸ್ವಾತಂತ್ರವನ್ನು ಗೌರವಿಸಿ ಕೂಡಾ ವಚ್ಚಕ್ಕ ಸಾಗುವ ಬಗೆ ಕಲ್ಲು ಮುಳ್ಳಿನ ಹಾದಿಯಂತೆ ಕಠಿಣ, ಕತ್ತಲಿನದ್ದಾಗಿ ತೋರಿಸಿದ್ದರೆ ಕಾದಂಬರಿಯ ಅಂತ್ಯ ಮತ್ತಷ್ಟು ಪರಿಣಾಮಕಾರಿಯಾಗುತ್ತಿತ್ತೇನೋ ಅನ್ನಿಸಿದ್ದು ಸುಳ್ಳಲ್ಲ.

ಇಡೀ ಕಾದಂಬರಿಯನ್ನು ಕಾಲವೇ ನಿಯಂತ್ರಿಸಿದೆ.. ಮತ್ತು ಪರಂಪರೆ ಬದಲಾಗುವ ರೀತಿಯ ಚಿತ್ರಣವನ್ನು ಗಾಢವಾಗಿ ಕಟ್ಟಿಕೊಟ್ಟಿದೆ. ಇಡೀ ಕಾದಂಬರಿಯ ಬಹಳ ದೊಡ್ಡ ಶಕ್ತಿ ಆಗಿನ ಕಾಲಕ್ಕೇ ಓದುಗನನ್ನು ಕೊಂಡೊಯ್ಯುವ ಆ ದಟ್ಟ ಅನುಭವ ಚಿತ್ರಣ. ಅದೆಷ್ಟು ರಸಭರಿತವಾಗಿದೆಯೆಂದರೆ ಆ ವಿವರಗಳನ್ನು ಚಪ್ಪರಿಸಿ ಓದುತ್ತಿದ್ದ ನನಗೆ ಪುಸ್ತಕ ಕೆಳಗಿಟ್ಟ ಮೇಲೆ ಈ ಲೋಕಕ್ಕೆ ಹಿಂತಿರುಗುವುದು ಬಹಳ ಕಷ್ಟಕರವೆನ್ನಿಸಿಬಿಟ್ಟಿತು.

(ಕೃಪೆ : ಕೆಂಡಸಂಪಿಗೆ)

ಗೈರ ಸಮಜೂತಿ

-----

 

Related Books