ಈ ಕಾದಂಬರಿ ಭಾರತ ದೇಶದ ಸ್ವಾತಂತ್ರ್ಯ ಪೂರ್ವದ ಚರಿತ್ರೆ, ಸ್ವಾತಂತ್ರ್ಯಾನಂತರದ ರಾಜಕೀಯದ ಕುರಿತು ವಿಶೇಷ ಬೆಳಕನ್ನು ಚೆಲ್ಲುತ್ತದೆ. ಕಥಾನಾಯಕ ಚಂದ್ರಕಾಂತ ಬಾಪಟ್ ಎಂಬಾತ ಪತ್ನಿ ಚಂಪಾವತಿಯೊಂದಿಗಿನ ದಾಂಪತ್ಯ ವಿರಸದಿಂದಾಗಿ ದೇಶದ ಸ್ವಾತಂತ್ರ್ಯ ಚಳವಳಕ್ಕೆ ಧುಮುಕಿ ಚಂದ್ರಕಾಂತ ಗುಪ್ತ ಎಂಬ ಹೆಸರಿನಿಂದ ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾನೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ, ಅಧಿಕಾರಕ್ಕಾಗಿ ಆಸೆಪಡದೆ, ಆಡಳಿತದ ಆಗುಹೋಗುಗಳನ್ನು ದೂರದಿಂದಲೇ ಪರಿಶೀಲಿಸುತ್ತಾನೆ. ಕುಟಿಲ ರಾಜಕಾರಣಿಗಳ ಅಸೂಯೆಯಿಂದಾಗಿ ಕೊಲೆಗೈಯ್ಯಲ್ಪಡುತ್ತಾನೆ. ಅವನು ಮಡಿದ ಬಳಿಕ, ಅವನ ದ್ವಿತೀಯ ಪತ್ನಿ ನಳಿನಿ ಗುಪ್ತ ಅವನ ಜೀವನ ಚರಿತ್ರೆಯನ್ನು ಶೋಧಿಸುವ ಕೆಲಸದಲ್ಲಿ ತೊಡಗಿದಾಗ, ಚಂದ್ರಕಾಂತ ಗುಪ್ತನ ಮೊದಲ ಪತ್ನಿ ಮತ್ತು ಆಕೆಯ ಮಗಳು ಇಂದಿರೆಯನ್ನು ಸಂಧಿಸುತ್ತಾಳೆ. ಅವರೆಲ್ಲರೂ, ಪರಸ್ಪರರನ್ನು ಪ್ರೀತ್ಯಾದರಗಳಿಂದ ಉಪಚರಿಸುತ್ತಾರೆ. ಕತೆಗಾಗಿಯೇ ಒಂದಿಷ್ಟು ಕಥಾಂಶವನ್ನು ಪೋಣಿಸಿದಂತಿರುವ ಈ ಕಾದಂಬರಿ ಮುಖ್ಯತಃ ಭಾರತ ದೇಶದ “ಅತಂತ್ರ ಭಾರತ, ಸ್ವತಂತ್ರ ಭಾರತ ಮತ್ತು ಕುತಂತ್ರ ಭಾರತ'ದ ರಾಜಕೀಯ ನೋಟಗಳನ್ನು ನೀಡುವ ಧ್ಯೇಯದಿಂದ ಕೂಡಿದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE