ನೆರಳು

Author : ಲಕ್ಷ್ಮಣ ಕೊಡಸೆ

Pages 144

₹ 60.00




Year of Publication: 2008
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಗೋಕುಲಂ 3ನೇ ಹಂತ, ಮೈಸೂರು- 570002

Synopsys

`ನೆರಳು' ಲಕ್ಷ್ಮಣ ಕೊಡಸೆ ಅವರ ಮೂರನೆಯ ಕಾದಂಬರಿ. ಬೇರೆ ಬೇರೆ ಊರುಗಳಲ್ಲಿ ವಾಸವಾಗಿರುವ ಮೂರು ಸಂಬಂಧಿಕ ಕುಟುಂಬಗಳಲ್ಲಿ ಮೂರು ದಿನಗಳಲ್ಲಿ ನಡೆಯುವ ಘಟನಾವಳಿಗಳ ಸುತ್ತ ಈ ಕಾದಂಬರಿ ರಚಿತವಾಗಿದೆ. ಚಂದ್ರಶೇಖರ, ಸೋಮಶೇಖರ ಹಾಗೂ ರೇಣುಕಾಂಬ ಅನ್ನಪೂರ್ಣಮ್ಮನವರ ಮಕ್ಕಳು. ಚಂದ್ರಶೇಖರ ಸರ್ಕಾರಿ ನೌಕರಿಯಿಂದ ನಿವೃತ್ತನಾಗಿದ್ದರೆ, ಉಳಿದಿಬ್ಬರು ನಡು ವಯಸ್ಸಿನವರಾಗಿದ್ದು, ಇವರ ಮಕ್ಕಳೆಲ್ಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ರೇಣುಕಾಂಬ ಕರಿಯಪ್ಪ ಎಂಬ ಮೇಷ್ಟ್ರು ಅವರನ್ನು  ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಾಳೆ. ಗಂಡನನ್ನು ಕಳೆದುಕೊಂಡಿರುವ ಅನ್ನಪೂರ್ಣಮ್ಮ ಏಕಾಂಗಿ. ಬದುಕಿನ ಕಷ್ಟ ಸುಖಗಳಲ್ಲಿ ಈ ಕುಟುಂಬಗಳು ಪರಸ್ಪರ ಹೇಗೆ ಸ್ಪಂದಿಸುತ್ತವೆ, ಪ್ರಮುಖವಾಗಿ ಅನ್ನಪೂರ್ಣಮ್ಮನನ್ನು ಆಕೆಯ ಮಕ್ಕಳು - ಸೊಸೆಯಂದಿರು ಹಾಗೂ ಅಳಿಯ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಕಾದಂಬರಿಯ ಪ್ರಧಾನ ಕಾಳಜಿಯಾಗಿದೆ.

ನಿಷ್ಕಳಂಕ ಪ್ರೀತಿ ತೋರುವ ಕರಿಯಪ್ಪ, ರೇಣುಕಾಂಬ, ಸಣ್ಣನಾಯ್ಕರಂತಹ ಪಾತ್ರಗಳೂ ಇಲ್ಲಿ ಹೃದಯಸ್ಪರ್ಶಿಯಾಗಿ ಒಡಮೂಡಿವೆ. ಒಂದರ್ಥದಲ್ಲಿ ಈ ಕಾದಂಬರಿ ನಿಷ್ಕಳಂಕ ಪ್ರೀತಿಯ ಹುಡುಕಾಟವೇ ಆಗಿದೆ. ಮೂರು ದಿನದ ಘಟನಾವಳಿಗಳು ಕುತೂಹಲಕರವಾಗಿ ಬಿಚ್ಚಿಕೊಳ್ಳುತ್ತಾ ಸಾಗುವ ಈ ಪುಟ್ಟ ಕಾದಂಬರಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಬಿಡಬಹುದು. - ಇದು ನೆರಳು ಕಾದಂಬರಿಯ ಕುರಿತು ಡಾ.ಸರ್ಜಾ ಶಂಕರ ಹರಳಿಮಠ ಬರೆದ ಪತ್ರಿಕಾ ವಿಮರ್ಶೆ.

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books