ಸ್ನೇಹ-ಪ್ರೇಮ

Author : ಯಂಡಮೂರಿ ವೀರೇಂದ್ರನಾಥ್

₹ 65.00




Year of Publication: 2002
Published by: ಸುಧಾ ಎಂಟರ್‌ಪ್ರೈಸಸ್

Synopsys

ಯಂಡಮೂರಿ ವೀರೇಂದ್ರನಾಥ್ ಅವರ `ಸ್ನೇಹ-ಪ್ರೇಮ’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದವರು ರಾಜಾ ಚೆಂಡೂರ್. ಮಾನವನ ಗುಣ ಸ್ವಬಾವಗಳಲ್ಲಿ ಹೇಗೆ ವಿಭಿನ್ನತೆ ಇರುವುದೋ, ಹಾಗೆಯೇ ಅಭಿಪ್ರಾಯ, ಅನಿಸಿಕೆಗಳಲ್ಲೂ ವಿಭಿನ್ನತೆ ಇರುವುದು. ಪ್ರೇಮಿಸಿ ಮದುವೆಯಾಗುವುದು ಸರಿ ಎಂಬುದು ಕೆಲವರ ಅಭಿಪ್ರಾಯವಾದರೆ, ಮದುವೆಯಾದ ಮೇಲೆ ಪ್ರೇಮಿಸುವುದು ಉತ್ತಮ ಎಂಬುದು ಇನ್ನುಳಿದವರ ಅನಿಸಿಕೆ. ಮದುವೆಯ ತನಕ ಶೀಲ, ಪಾತಿವೃತ್ಯ ಕಾಪಾಡುವುದು ಕೆಲವು ಸ್ತ್ರೀಯವರಿಗೆ ಮುಖ್ಯವಾದರೆ, ಇನ್ನುಳಿದವರು ಆಧುನಿಕ ಮನೋಭಾವನೆಗಳಿಗೆ ಜೋತು ಬಿದ್ದು, ಮದುವೆ ಮೊದಲೇ ಶೀಲ ಕಳೆದುಕೊಳ್ಳುತ್ತಾರೆ. ಯಂಡಮೂರಿಯವರ ಈ ಕಾದಂಬರಿಯಲ್ಲಿ ಇಂತಹ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಪಾತ್ರಗಳಿವೆ. ಮದುವೆಯಾಗುವ ತನಕ ಗಂಡಸರೊಡನೆ ಸ್ನೇಹ, ಪ್ರೇಮಕ್ಕೆ ಆಸ್ಪದ ಕೊಡದ ರಾಧಾ, ಮದುವೆಯಾಗದೇ ಹತ್ತು ದಿನಕ್ಕೆ ಒಬ್ಬ ಗಂಡಸಿನ ಜೊತೆ ದೇಹ ಸಂಪರ್ಕ ಬೆಳೆಸಿದ ಜಯ. ರಾಧಾಳೊಡನೆ ದೇಹ ಸಂಪರ್ಕ ಪಡೆಯಲು ಸುಳ್ಳು ಮದುವೆಯ ನಾಟಕವಾಡಿದ ಕೃಷ್ಣ, ಜಯಳ ಹಿನ್ನೆಲೆ ತಿಳಿದಿದ್ದರೂ ಅವಳೊಡನೆ ಒಂದು ರಾತ್ರಿ ಕಳೆದ ಕಾರಣಕ್ಕಾಗಿ ಅವಳನ್ನು ಮದುವೆಯಾಗಲು ಹೊರಟ ಪಾರ್ಥಸಾರಥಿ. ಉದ್ಯೋಗದ ಅವಶ್ಯಕತೆ ಇದ್ದ, ರಾಧಾಳಿಗೆ ರೇಡಿಯೋ ಸ್ಟೇಷನ್‌ನಲ್ಲಿ ಇಂಟರ್‌ವ್ಯೂ ಇರುತ್ತದೆ, ಅದರ ಹಿಂದಿನ ದಿನ ಕೆರೆಯ ಬಳಿ ಹೋಗಿ ಬಂಡೆಯ ಮೇಲೆ ಕುಳಿತಿರುವಾಗ, ಯಾರೋ ಕೆರೆಗೆ ಬಿದ್ದದ್ದು ಗಮನಕ್ಕೆ ಬಂದು ಅವರನ್ನು ಕಾಪಾಡುತ್ತಾಳೆ. ಆರವತ್ತು ವರ್ಷದ ಆ ವ್ಯಕ್ತಿ ತಮ್ಮನ್ನು ಟಿ.ಎಸ್ ಸಂಸ್ಥೆಯ ಪ್ರೆಸಿಡೆಂಟ್ ಎಂದು ಪರಿಚಯಿಸಿಕೊಳ್ಳುತ್ತಾರೆ. ಅವರ ಇನ್‌ಫ್ಲೂಯೆನ್ಸ್‌ನಿಂದ ರಾಧಾಳಿಗೆ ರೇಡಿಯೋ ಸ್ಟೇಷನ್‌ನಲ್ಲಿ ಕೆಲಸ ಸಿಗುತ್ತದೆ. ಅವಳ ಗೆಳತಿ ಜಯಳೂ ಅಲ್ಲೆ ಕೆಲಸ ಮಾಡುತ್ತಾಳೆ, ಅಲ್ಲಿಯೇ ಕೆಲಸದಲ್ಲಿರುವ ಸ್ತ್ರೀ ವ್ಯಾಮೋಹಿ ಕೃಷ್ಣ ರಾಧಾಳ ಸ್ನೇಹ ಸಂಪಾದಿಸಲು ಯತ್ನಿಸುತ್ತಾನೆ. ರಾಧಾಳ ನಿರಾಕರಣೆಯಿಂದ ಕೋಪಗೊಂಡ ಕೃಷ್ಣ, ಅವಳ ಏಕೈಕ ಸಂಬಂಧಿ ಅಜ್ಜಿಯ ಮನವೊಲಿಸಿ ಅವಳನ್ನು ಮದುವೆಯಾಗುವ ಇಚ್ಛೆ ವ್ಯಕ್ತ ಪಡಿಸುತ್ತಾನೆ. ರಾಧಾಳೊಡನೆ ದೈಹಿಕ ಸಂಪರ್ಕ ಹೊಂದಬೇಕೆಂಬ ಕಾರಣಕ್ಕೆ ಪರಶುರಾಮರೊಡನೆ ಸೇರಿ, ಸುಳ್ಳು ಮದುವೆಯ ನಾಟಕ ಮಾಡುತ್ತಾನೆ. ಒಂದು ವಾರ ಅವಳೊಡನೆ ಕಳೆದ ಮೇಲೆ ನಿಜವನ್ನು ಪತ್ರ ಬರೆದು ತಿಳಿಸಿ ಅವಳನ್ನು ಹೊಟೇಲ್ ರೂಂನಲ್ಲಿ ಒಂಟಿಯಾಗಿ ಬಿಟ್ಟು ಹೋಗುತ್ತಾನೆ. ನೊಂದ ರಾಧಾ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ, ಅಲ್ಲಿ ಬಂದ ಟಿ‌.ಎಸ್. ರಿಂದಾಗಿ ಪಾರಾಗುತ್ತಾಳೆ. ಕೃಷ್ಣ ತನ್ನ ತಪ್ಪು ಒಪ್ಪಿಕೊಂಡು, ರಾಧಾಳನ್ನು ಸ್ವೀಕರಿಸುವಂತೆ ಮಾಡಲು, ಟಿ.ಎಸ್ ಒಂದು ಉಪಾಯ ಹೂಡುತ್ತಾರೆ. ಆ ಉಪಾಯ ಫಲಿಸಿತೆ? ಸುಳ್ಳು ಮದುವೆಯಾಗಲು ಕೃಷ್ಣ ಮಾಡಿದ ಉಪಾಯವೇನು? ಅವರಿಬ್ಬರನ್ನು ಒಂದುಗೂಡಿಸಲು ಟಿ.ಎಸ್. ಮಾಡಿದ ಉಪಾಯವೇನು? ಕೃಷ್ಣನಿಗೆ ತನ್ನ ತಪ್ಪಿನ ಅರಿವಾಯಿತೆ? ಕೃಷ್ಣ ಮತ್ತು ರಾಧಾ ಒಂದಾದರೆ? ಜಯ ಪಾರ್ಥಸಾರಥಿಯವರನ್ನು ಮದುವೆಯಾಗಲು ತನ್ನ ಒಪ್ಪಿಗೆ ನೀಡಿದಳೆ? “ಮ್ಯಾಡಿಜಂ” ಸಂಸ್ಥೆಯ ಸದಸ್ಯರು ಪರಶುರಾಮ್ ನೇತೃತ್ವದಲ್ಲಿ, ಪ್ರಧಾನಮಂತ್ರಿಯವರ ಕಾರ್ ಸೇತುವೆ ಮೇಲೆ ಹೋಗುತ್ತಿರುವಾಗ, ಸೇತುವೆ ಕುಸಿದು ಕಾರ್ ನೀರೊಳಗೆ ಬಿಳುವ ಪ್ಲಾನ್ ಮಾಡುತ್ತಾರೆ. ಆ ಪ್ಲಾನ್ ಸಫಲವಾಯಿತೇ? ಇಲ್ಲವೇ? ಇಲ್ಲವೆಂದಾದರೆ ಅದರ ವಿಫಲತೆಗೆ ಕಾರಣ ಯಾರು? “ಮ್ಯಾಡಿಜಂ” ಸಂಸ್ಥೆ ತಾವು ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿ, ಅದರ ಪ್ರಚಾರ ಮಾಡಲು ಬಯಸುತ್ತಾರೆ. ಅವರ ಸಂಸ್ಥೆಯ ಪ್ರಚಾರಕ್ಕಾಗಿ ಪರಶುರಾಮ್ ಮಾಡಿದ ತಯಾರಿ ಯಾವುದು? ಅದು ಸಫಲವಾಯಿತೆ? ಈ ಎಲ್ಲಾ ಪ್ರಶ್ನೆಗಳ ಉತ್ತರ ಪಡೆಯಲು ಓದಿ ಯಂಡಮೂರಿಯವರ ಪುಟ್ಟ ಕಾದಂಬರಿ ‘ಸ್ನೇಹ-ಪ್ರೇಮ’.

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books