ವೀರ ಬಂಕೆಯ

Author : ಮುಳಿಯ ತಿಮ್ಮಪ್ಪಯ್ಯ

Pages 112

₹ 80.00




Year of Publication: 2012
Published by: ಕಮಲಾ ಪ್ರಕಾಶನ
Address: ಮೈಸೂರು.

Synopsys

ಸಾಹಿತಿ ಮುಳಿಯ ತಿಮ್ಮಪ್ಪಯ್ಯ ಅವರ ಅಪರೂಪದ ಐತಿಹಾಸಿಕ ಕಾದಂಬರಿ. ಲೇಖಕರು ತಮ್ಮ ಸಂಶೋಧನೆಗಳ ಮೂಲಕ ಮನೆ ಮಾತಾದವರು. ಶಾಸನಗಳನ್ನು ಸಂಗ್ರಹಿಸಿ, ಸಂಶೋಧಿಸಿ ಅವುಗಳಲ್ಲಿ ಕಂಡ ವಿಷಯಗಳನ್ನು ದಾಖಲಿಸುತ್ತಿದ್ದರು. ಇವರು ಬರೆದ ಕನ್ನಡ ಭಾಷೆಯ ಸೊಗಸೇ ಅನುಪಮ.ವೀರ ಬಂಕೆಯ, ಸುಮಾರು ಒಂದು ಸಾವಿರದ ನೂರು ವರ್ಷಗಳಿಗೆ ಹಿಂದೆ ಬಂದು ಹೋದ ಕನ್ನಡದ ತಿರುಳಾದ ಅಪ್ರತಿಮ ವೀರನ ಹೆಸರು. ಇವನ ವೀರಗಾಥೆಗಳು ಕೊಣ್ಣೂರು ಶಾಸನದಲ್ಲಿ ದಾಖಲಾಗಿವೆ. ಈ ಕಥೆಯಲ್ಲಿ ಅವನ ಜೀವನ, ಸ್ವಾಮಿಭಕ್ತಿ, ರಾಜನೀತಿ ಮತ್ತು ವೀರಾವೇಶವನ್ನು ಬಣ್ಣಿಸಲಾಗಿದೆ. ವೀರ ಬಂಕೆಯನು ಕನ್ನಡ ನಾಡಿನ ಪ್ರಸಿದ್ಧ ರಾಜ ಮನೆತನವಾಗಿದ್ದ ರಾಷ್ಟ್ರಕೂಟರ ಚಕ್ರಾಧಿಪತ್ಯದಲ್ಲಿ, ರಾಜ ನೃಪತುಂಗನ ಸೇನಾಧಿಪತಿಯಾಗಿದ್ದ.‌ ಮುಂದೆ ರಾಜನ ಮೆಚ್ಚುಗೆ ಪಡೆದು, ಬನವಾಸಿಯ ಸಾಮಂತ ರಾಜನಾಗುತ್ತಾನೆ. ಜೈನಧರ್ಮದ ಅನುಯಾಯಿ ಬಂಕೆಯ ಮತ್ತು ವೈಷ್ಣವನಾದ ಅಮೋಘವರ್ಷ ನೃಪತುಂಗನ ಸ್ನೇಹಕ್ಕೆ ಧರ್ಮ ಅಡ್ಡ ಬರಲಿಲ್ಲ. ರಾಜನಿಗೆ ಬಂಕೆಯನ ಮೇಲೆ ಅಪಾರ ವಿಶ್ವಾಸ ಮತ್ತು ಪ್ರೀತಿ ಇತ್ತು. ರಾಜನ ರಕ್ಷಣೆಗಾಗಿ ಬಂಕೆಯ ಹೆಚ್ಚು ಕಾಲ ರಾಜಧಾನಿಯಾದ ಮಾನ್ಯಖೇಟದಲ್ಲೇ ಇರುತ್ತಿದ್ದ. ಬನವಾಸಿಯನ್ನು ತನ್ನ ಮಹಾಪ್ರಧಾನರಾದ ಗಣಪತಿ ಭಟಾರರ ರಕ್ಷಣೆಗೆ ಬಿಡುತ್ತಿದ್ದ. "ಜಳಜಳಿಸುವ ನನ್ನ ಬೇರೊಂದು ಖಡ್ಗವೋ ಎಂಬಂತಿರುವವನು." ಎಂದು ಶಾಸನವೊಂದರಲ್ಲಿ ನೃಪತುಂಗನು ಬಂಕೆಯನನ್ನು ಬಣ್ಣಿಸಿದ್ದಾನೆ. ಗಂಗವಂಶದ ರಾಜಮಲ್ಲನಿಗೆ ಚಕ್ರವರ್ತಿ ಮೇಲೆ ದ್ವೇಷ ಹಾಗೂ ಅವನ ನೆರಳಿನಂತಿರುವ ಬಂಕೆಯನ ಬಗ್ಗೆ ಅಸಹನೆ ಇತ್ತು. ಅವನು ಗಂಗೇವಾಡಿಯ ಸರಹದ್ದನ್ನು ದಾಟಿ ರಾಷ್ಟ್ರಕೂಟರ ಗಡಿಯೊಳಗೆ ತನ್ನ ಜನರನ್ನು ಮಾರುವೇಷದಲ್ಲಿ ಕಳುಹಿಸಿ ಅವರ ಮೂಲಕ ಸ್ಥಳೀಯರಿಗೆ ಕಿರುಕುಳ ಕೊಡುತ್ತಾನೆ. ಗುಪ್ತಚರರ ಮೂಲಕ ಇದನ್ನು ತಿಳಿದ ರಾಜ ನೃಪತುಂಗನು ದುರಾಚಾರಿಗಳ ದಮನಕ್ಕೆ ಬಂಕೆಯನನ್ನು ಗಂಗೇವಾಡಿಗೆ ಕಳುಹಿಸುತ್ತಾನೆ. ದಾರಿಯಲ್ಲಿ ಬಂಕೆಯ ಮತ್ತು ಅವನ ಸಹಚರರ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಆಕ್ರಮಣವಾದರೂ, ಅವನ ಸಮಯ ಪ್ರಜ್ಞೆ ಮತ್ತು ರಣ ಕೌಶಲ್ಯದಿಂದ ಪಾರಾಗುತ್ತಾನೆ. ಗಂಗರಾಜ ರಾಜಮಲ್ಲನ ಮಗ ಬೂತುಗ ಮತ್ತು ನೃಪತುಂಗ ದೊರೆಯ ಮಗ ಯುವರಾಜ ಕೃಷ್ಣನ ನಡುವೆ ಆಪ್ತ ಗೆಳೆತನವಿತ್ತು. ಇದರ ಫಲವಾಗಿ ಕೃಷ್ಣನ ತಂಗಿ ಚಂದ್ರಬ್ಬಲಬ್ಬೆ ಮತ್ತು ಬೂತುಗನ ಮಧ್ಯೆ ಪ್ರೇಮ ಸಂಬಂಧವೂ ಚಿಗುರಿತ್ತು. ರಾಜಮಲ್ಲ ಮಗನ ಗೆಳೆತನ ಮತ್ತು ಪ್ರೇಮದ ಮೂಲಕ ರಾಷ್ಟ್ರಕೂಟರನ್ನು ಮಣಿಸುವ ಹಂಚಿಕೆ ಹಾಕಿ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದ. ಆದರೆ ಬಂಕೆಯ ಸೂಕ್ಷ್ಮವಾಗಿ ವಸ್ತುಸ್ಥಿತಿಯನ್ನು ಅರಿತು, ಆ ಸಮಸ್ಯೆಯನ್ನು ಪರಿಹರಿಸಲು ನೃಪತುಂಗನಿಗೆ ಸಹಾಯ ಮಾಡುತ್ತಾನೆ. ಮುಗ್ಧನಾಗಿದ್ದ ಕುಮಾರ ಕೃಷ್ಣನಿಗೆ ಸೂಕ್ತ ಮಾರ್ಗದರ್ಶನ ನೀಡಿ ಗಂಗರಾಜನ ಮೋಸದ ಬಲೆಯಿಂದ ಕಾಪಾಡುತ್ತಾನೆ. ಬೂತುಗನ ಸಹಕಾರದಿಂದ ತಂದೆ ರಾಜಮಲ್ಲನನ್ನು ಸೋಲಿಸಿ, ಯುವರಾಜ ಬೂತುಗನನ್ನು ಸಿಂಹಾಸನಕ್ಕೇರಿಸುತ್ತಾನೆ. ಚಂದ್ರಬ್ಬಲಬ್ಬೆ ಮತ್ತು ಬೂತುಗನ ವಿವಾಹ ಮಾಡಿಸಿ ಎರಡು ವಂಶಗಳ ನಡುವಿನ ವೈಷಮ್ಯಕ್ಕೆ ಮಂಗಳ ಹಾಡುತ್ತಾನೆ. ಪಲ್ಲವ ರಾಜಕುಮಾರ ನಂದಿವರ್ಮನಿಗೆ ನೃಪತುಂಗನ ಕಿರಿಯ ಮಗಳನ್ನು ಕೊಟ್ಟು ಮದುವೆ ಮಾಡಿಸುವ ಮೂಲಕ ಪಲ್ಲವರಿಂದ ಮುಂದೆ ರಾಷ್ಟ್ರಕೂಟರಿಗೆ ಒದಗಬಹುದಾದ ಆಪತ್ತನ್ನು ತಡೆದು ನೃಪತುಂಗನ ಚಕ್ರಾಧಿಪತ್ಯವನ್ನು ಬಲಪಡಿಸುತ್ತಾನೆ. ಚರಿತ್ರೆಯಲ್ಲಿ ರಾಜ ಮಹಾರಾಜರ ಉಲ್ಲೇಖಗಳು ಬಹಳ ಇರುತ್ತವೆ. ಆದರೆ ರಾಜನ ಉನ್ನತಿಗೆ ಕಾರಣರಾದ ಬಂಕೆಯನಂತಹ ನಿಸ್ವಾರ್ಥಿ, ಸೇವಾಭಾವದ ವೀರರ ಹೆಸರು ಕಾಣುವುದು ಅಪರೂಪ. ಪ್ರಥಮ ಮುದ್ರಣ: 1948, ಆರನೇ ಮುದ್ರಣ‌‌ : 2012

About the Author

ಮುಳಿಯ ತಿಮ್ಮಪ್ಪಯ್ಯ
(03 March 1888 - 04 January 1950)

ಕವಿ, ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ. ಮನೆಯಲ್ಲಿಯೇ ಕುಳಿತು ಸಂಸ್ಕೃತ ಕಲಿತ ಅವರು ಸಂಸ್ಕೃತಾಭ್ಯಾಸವನ್ನು ಮುಂದುವರೆಸಲು ತಿರುವಾಂಕೂರು ಹಾಗೂ ಮೈಸೂರಿಗೆ ಪ್ರಯಾಣ ಮಾಡಿದರು. 1911ರಲ್ಲಿ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ಮುದ್ದಣನ ರಾಮಾಶ್ವಮೇಧ ಚೌಕಟ್ಟಿನಲ್ಲಿ ಮೂಡಿ ಬಂದ ಕೃತಿ ‘ಚಂದ್ರಾವಳಿ ವಿಲಾಸ.’ ಭಾಗವತದಲ್ಲಿ ಬರುವ ಶಂಭಾಸುರನ ಕಥೆಯಾಧಾರಿತ ಹಳೆಗನ್ನಡದ ಛಂದಸ್ಸಿನಲ್ಲಿ ಮೂಡಿ ಬಂದದ್ದು ‘ಸೊಬಗಿನ ಬಳ್ಳಿ.’ ಕರ್ಣನ ಕುರಿತಾದ ಗದ್ಯ ಕಥನ ನಡೆಯನಾಡು-ಮಹಾಭಾರತದ ಕಥೆ ಆಧಾರಿತ. ಪ್ರೇಮಪಾಶವೆಂಬ ಮತ್ತೊಂದು ಕೃತಿ, ನೀತಿ ವಾಕ್ಯ ಆಧಾರಿತ ಕಾಲ್ಪನಿಕ ಕಥನ ಕಾವ್ಯ. ...

READ MORE

Related Books