ಪುನರಪಿ-ಕಾವ್ಯಾ ಕಡಿಮೆ ನಾಗರಕಟ್ಟೆಯವರ ಕಾದಂಬರಿ. ಸಲಿಂಗ ಪ್ರೇಮದ ಕುರಿತು ಬರೆದಿರುವ ಈ ಕಾದಂಬರಿಗೆ ಹಿರಿಯ ಲೇಖಕಿ ಸ.ಉಷಾ ಮುನ್ನುಡಿ ಬರೆದಿದ್ದಾರೆ. ಅವರೇ ಹೇಳುವಂತೆ ಇಲ್ಲಿ ಮೂಡಿರುವ ಅಸ್ಮ ಮತ್ತು ಅನುಷಾರ ಸಂಬಂಧ ಅಫೇರ್ ಅಲ್ಲ, ಮಾರ್ದವದಿಂದ ಕೂಡಿದ್ದು, ಒಬ್ಬರನ್ನೊಬ್ಬರು ಪೊರೆಯುವಂಥದ್ದು, ಗೆಳತಿ ತಲ್ಲಣಗೊಂಡಾಗ ಅವಳನ್ನು ಚುಕ್ಕು ಬಡಿದು ಮಲಗಿಸುವಂಥ ಪೊರೆಯುವ ಪ್ರೀತಿ ಇಲ್ಲಿದೆ. ಇವರ ಜಗತ್ತು ಸಹ ಅವರಿಬ್ಬರಿಗೆ ಮಾತ್ರ ಸೀಮಿತವಾದುದಲ್ಲ. ಅವರ ಸಮಾಜ ಸೇವೆಯ ವಲಯದಲ್ಲಿ ಮನಿಯೂಟದ ದಾರಿ ಕಾಯುವ ಹಲವು ವೃದ್ಧ ವೃದ್ಧೆಯರಿದ್ದಾರೆ, ಅದರಿಂದಲೇ ಆರ್ಥಿಕ ಕಾರಣಗಳಿಗಾಗಿ ಮನಿಯೂಟ ನಿಲ್ಲುವ ಪರಿಸ್ಥಿತಿ ಬಂದಾಗ ಅನುಷಾ ತನ್ನ ಮಿತಿಗಳಲ್ಲಿ ಒಂದು ವ್ಯವಸ್ಥೆ ಮಾಡುತ್ತಾಳೆ.
ಈ ಕಾದಂಬರಿ ಆರಂಭಬಿಂದು ಲೋಕೇಶರು ಅದರ ಅಂತ್ಯಬಿಂದುವೂ ಆಗಿದ್ದಾರೆ. ಅನುಷಾ ಟೈಪಿಸಿ ತಂದ ಪ್ರತಿಯ ಮೇಲೆ ಆತ್ಮಕಥೆ ಎಂದಿದ್ದುದನ್ನು ಹೊಡೆದು ಹಾಕಿ ಕಾದಂಬರಿ ಎಂದು ಅವರು ಬರೆಯುವಲ್ಲಿ ಪಾಡನ್ನು ಹಾಡಾಗಿಸುವ ಸೃಷ್ಟಿಶೀಲ ಕಲೆಯ ರಹಸ್ಯವೇ ಅಡಗಿದೆ.
ಸ್ವಾವಲಂಬಿಗಳಾಗಿ ಸಮಾಜಕ್ಕೂ ಉಪಕಾರಿಗಳಾಗಿರುವ ಇಬ್ಬರು ಯುವತಿಯರ ಚಿತ್ರ, ಅವರನ್ನು ಸಹಿಸುವ ಅಭಿಮಾನಿಸುವ ಅರವತ್ನಾಲ್ಕರ ವೃದ್ಧನ ಚಿತ್ರ ಬರೆಯುವ ಮೂಲಕ ಕಾವ್ಯ ಅವರು ಬದಲಾಗುತ್ತಿರುವ ಸಹನಶೀಲ ಸಮಾಜದ ಚಿತ್ರ ಬರೆಯುತ್ತಿರಬಹುದು ಅಥವಾ ಬದಲಾಗಬೇಕಾದ ಸಮಾಜದ ಕಡೆಗೆ ಬೆರಳು ಮಾಡಿ ತೋರುತ್ತಿರಬಹುದು.
ಯುವ ಬರಹಗಾರ್ತಿ ಕಾವ್ಯ ಕಡಮೆ ನಾಗರಕಟ್ಟೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಅವರ ಜೀನ್ಸ್ ತೊಟ್ಟ ದೇವರು ಕವನ ಸಂಕಲನಕ್ಕೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ದೊರೆತಿದೆ. ...
READ MORE