ಮಹದ್ಗ್ರಂಥದ ಆಯಾಮ ಹೊಂದಿರುವ ಈ ಕಾದಂಬರಿಯ ಬದುಕು ಪಾತ್ರಗಳನ್ನು ದಟ್ಟವಾಗಿ ಹರಡಿಕೊಂಡಿದೆ. ಎಲ್ಲ ಪಾತ್ರಗಳೂ ತಮ್ಮದೇ ಪಾತ್ರ ಪೋಷಣೆಯ ಮೂಲಕ ನಮ್ಮಿಂದಿಗೆ ಮಾತನಾಡುತ್ತವೆ. ನಾಶವಾಗುತ್ತಿರುವ ಗ್ರಾಮಸಂಸ್ಕೃತಿಯನ್ನು ಈ ಕಾದಂಬರಿ ಬಹುನೆಲೆಗಳಲ್ಲಿ ಚರ್ಚಿಸುತ್ತದೆ. ಗ್ರಾಮಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ಜಾತಿ ಮತ್ತು ಲಿಂಗ ರಾಜಕಾರಣದ ಚರ್ಚೆ ಕಾದಂಬರಿಯ ಮುಖ್ಯ ಗುರಿಯೇನೋ ಎಂದೆನಿಸುತ್ತದೆ. ಕಲ್ಲಮ್ಮ ಮತ್ತು ಪುಟ್ನಂಜಿ ಕಾದಂಬರಿಯ ಎರಡು ಮುಖ್ಯ ಪಾತ್ರಗಳಾಗಿವೆ. ಜಾತಿ, ಒಳಜಾತಿಗಳ ನಡುವಿನ ತಿಕ್ಕಾಟಗಳನ್ನು ಕಲ್ಲಮ್ಮನ ಪಾತ್ರದ ಮೂಲಕ ಕಾದಂಬರಿಕಾರ್ತಿ ನಿರೂಪಿಸುತ್ತಾರೆ. ಕುರುಬ, ದಲಿತ ಜಾತಿಗಳೊಳಗೂ ಒಳ ಸಂಘರ್ಷಗಳಿವೆ. ಜಾತಿ ಶೋಷಣೆಗಳಿವೆ. ಹಾಗೆಯೇ ಮಹಿಳೆಯರು ಎಲ್ಲ ಜಾತಿ ಗಳಲ್ಲೂ ಶೋಷಿತರಾಗುವ ಮತ್ತೊಂದು ಉಪಜಾತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಗ್ರಾಮವೆನ್ನುವುದು ಹೊರನೋಟಕ್ಕೆ ಸುಂದರ ವಾದ ಆದರ್ಶವಾದರೂ ಅದರೊಳಗಿರುವ ಜಾತಿ, ಲಿಂಗ ರಾಜಕಾರಣ ಅತ್ಯಂತ ಹೇಯ ವಾದುದು. ಸಾಧಾರಣವಾಗಿ ಒಂದು ಗ್ರಾಮಸಂಘರ್ಷವನ್ನು ಮಹಿಳಾ ಲೇಖಕಿಯರು ಬರೆದಿರುವುದು ಕಡಿಮೆ. ಪುರುಷನ ಕಣ್ಣಲ್ಲಿ ಗ್ರಾಮ ಮತ್ತು ಅಲ್ಲಿನ ಜಾತಿ ರಾಜಕಾರಣಗಳನ್ನು ನೋಡುವುದಕ್ಕೂ, ಮಹಿಳೆಯ ಕಣ್ಣಲ್ಲಿ ನೋಡುವುದಕ್ಕೂ ವ್ಯತ್ಯಾಸವಿದೆ. ಇಲ್ಲಿ ಸುನಂದಮ್ಮ ಜಾತಿ ಮತ್ತು ಲಿಂಗ ರಾಜಕಾರಣವನ್ನು ಕಲ್ಲಮ್ಮ, ಪುಟ್ನಂಜಿ, ತಿಮ್ಮಿ, ಜಬ್ಬಿ ಮೊದಲಾದ ಪಾತ್ರಗಳ ಮೂಲಕ ನೋಡಿದ ರೀತಿ ಈ ಕಾರಣಕ್ಕೆ ಈ ಕೃತಿಯು ಮುಖ್ಯವಾಗಿದೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಆರ್.ಸುನಂದಮ್ಮ ಅವರು ಹುಟ್ಟಿದ್ದು 1960 ಆಗಸ್ಟ್ 22ರಂದು. ಮೂಲತಃ ಕೋಲಾರ ಜಿಲ್ಲೆ ವೆಂಕಟಾಪುರದವರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜಕಿ ಪ್ರಶಸ್ತಿ ದೊರೆತಿದೆ. ದ್ವಿತ್ವ, ಲೇಬರ್ ವಾರ್ಡಿನಲ್ಲೊಂದು ದಿನ ಇತರೆ, ಜನಪದ ಸಾಹಿತ್ಯದಲ್ಲಿ ಮಹಿಳಾ ಜಗತ್ತು ಇವರ ಪ್ರಮುಖ ಕೃತಿಗಳು. ...
READ MORE