ಅಂತರ

Author : ಜಯಪ್ರಕಾಶ ಮಾವಿನಕುಳಿ

Pages 88

₹ 100.00




Year of Publication: 2021
Published by: ಕಾವ್ಯಕಲಾ ಪ್ರಕಾಶನ
Address: #1273, 7ನೇ ಅಡ್ಡರಸ್ತೆ, ಚಂದ್ರಾ ಲೇಔಟ್, ವಿಜಯನಗರ, ಬೆಂಗಳೂರು- 560040
Phone: 9964124831, 9035228290

Synopsys

ಲೇಖಕ ಡಾ. ಜಯಪ್ರಕಾಶ ಮಾವಿನಕುಳಿ ಅವರ ಮೊದಲ ಕಾದಂಬರಿʼ ಅಂತರʼ. ಇದು ಹುಡುಗ ಬರೆದ ಹುಡುಗಿಯ ಕಥೆ ಎಂದು ಲೇಖಕರು ಉಪ ಶೀರ್ಷಿಕೆ ಕೊಟ್ಟಿದ್ದಾರೆ. ಈ ಕಾದಂಬರಿಯ ಬೆನ್ನುಡಿಯಲ್ಲಿ ಡಾ. ಯು. ಆರ್‌. ಅನಂತಮೂರ್ತಿ ಅವರು, ʼಅಂತರʼ ಓದುವುದು ನನಗೆ ಪ್ರಿಯವಾದ, ಮಧುರವಾದ ಅನುಭವವಾಯಿತುʼ. ಎಂದು ಹೇಳಿದರೆ, ಡಾ. ಹಾ. ಮಾ. ನಾಯಕ ಅವರು ʼ ಯಾವ ಫೋಸು ಇಲ್ಲದ ಇಷ್ಟು ಉಲ್ಲಸಿತ ಬರವಣಿಗೆಯನ್ನು ನಾನು ಓದಿರಲಿಲ್ಲ. ಈ ಪುಸ್ತಕ ಓದಿದ ಮರುದಿನ ನಾನು ಗಂಗೋತ್ರಿಗೆ ಹೋಗುತ್ತಿದ್ದಾಗ ಕ್ಯಾಂಟೀನಿನ ಎದುರುಗಡೆಯಲ್ಲಿ ಜಯಪ್ರಕಾಶರ ಪ್ರಭಾಕರ ಮತ್ತು ಸುವರ್ಣ ಇಲ್ಲೇ ಎಲ್ಲೋ ಇರಬಹುದೆಂದೆನಿಸಿ ಆ ಕಡೆ ಕಣ್ಣು ಹಾಯಿಸಿದೆ! ಒಂದು ಕೃತಿ ಇಷ್ಟು ಮಾಡುವುದು ತೀರಾ ಸಾಮಾನ್ಯದ ಗುಣವಲ್ಲ ಎಂದು ಪ್ರಶಂಸಿಸಿದ್ದಾರೆ. ಈ ಕೃತಿಯು 1980 ರಲ್ಲಿ ಮೊದಲು ಪ್ರಕಟಗೊಂಡಿತ್ತು. 

About the Author

ಜಯಪ್ರಕಾಶ ಮಾವಿನಕುಳಿ
(05 May 1951)

ಸಾಹಿತಿ ಜಯಪ್ರಕಾಶ ಮಾವಿನಕುಳಿ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕೃಷಿಯ ಜೊತೆಗೆ ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ ಮತ್ತು ರಂಗಭೂಮಿ ಚಲನಚಿತ್ರ ನಟರಾಗಿಯೂ ಖ್ಯಾತಿ ಗಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಹಲವು ನಾಟಕಗಳು, ಕಾದಂಬರಿ, ಸಣ್ಣಕತೆಗಳು, ಕಾವ್ಯ ಮತ್ತು ಇತರರೊಡನೆ ಹಲವು ಕೃತಿಗಳ ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ನೀಡಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 'ಪೊಲಿಟಿಕ್ಸ್ ಆ್ಯಂಡ್ ಕಲ್ಚರ್' ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ...

READ MORE

Reviews

ಜಯಪ್ರಕಾಶ್ ಮಾವಿನಕುಳಿಯವರ ‘ಅಂತರ’ 

1986ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕಾದಂಬರಿ "ಅಂತರ", ಇದೀಗ ಐದನೆಯ ಮುದ್ರಣವಾಗಿ ಪ್ರಕಟಗೊಳ್ಳುತ್ತಿದೆ. ಎಷ್ಟೋ ಕೃತಿಗಳು ಒಮ್ಮೆ ಪ್ರಕಟಗೊಳ್ಳುವುದೇ ಅಸಾಧ್ಯವಾಗಿರುವ ಈ ದುರಿತ ಇಲದಲ್ಲಿ, ಹೀಗೆ ಮರುಮುದ್ರಣ ಗೊಂಡಿರುವುದರ ಆಧಾರದ ಮೇಲೆ ಅದರ ಜನಪ್ರಿಯತೆಯನ್ನು ಹಿಸಿಬಿಡಬಹುದು. ಹುಡುಗ ಬರೆದ ಹುಡಿಗಿಯ ಕಥೆ ಎಂಬ ಕುತೂಹಲಕರ ಉಪಶೀರ್ಷಿಕೆಯೇ ಆನೇ ಪಡ್ಡೆ ಹುಡುಗ-ಹುಡುಗಿಯರನ್ನು ಸೆಳೆದಿರಲಿಕ್ಕೂ ಸಾಕು. ಮೇಲಾಗಿ ಲೇಖಕರು ಮೇಷ್ಟಾಗಿರುವುದರಿಂದ ಸ್ವಾಭಾವಿಕವಾಗಿ ಅವರ ಶಿಷ್ಯಂದಿರಲ್ಲಿ, ತಮ್ಮ ವಯಸ್ಸಿನಲ್ಲಿ ತಮ್ಮ ಮೇಷ್ಟ್ರ ಮನದಲ್ಲಿನ ಪ್ರೇಮದ ಪರಿಕಲ್ಪನೆಯನ್ನು ಅರಿಯಲೂ ಇದು ಸಹಕಾರಿಯಾಗಿರಬೇಕು...

ಕೇವಲ ಅರವತ್ತು ಪುಟಗಳಲ್ಲಿ ಹರಡಿಕೊಂಡಿರುವ ಈ ಕಿರುಕಾದಂಬರಿ (novella)ಯಲ್ಲಿ ಹೆಚ್ಚುಕಡಿಮೆ ತನ್ನದೇ ವಯಸ್ಸಿದ ಹುಡುಗ ಪ್ರಭಾಕರನನ್ನು ಕಂಡಾಗ ಹದಿಹರೆಯದ ಸುವರ್ಣಳ ಮನಸ್ಸಿನಲ್ಲುಂಟಾಗುವ ಉಲ್ಲಾಸ, ತಳಮಳಗಳನ್ನೆಲ್ಲ ಲೇಖಕರು ಬಹಳ ನವಿರಾಗಿ ಚಿತ್ರಿಸಿದ್ದಾರೆ. ಹೀಗೆ ಲೇಖಕನೊಬ್ಬ ಹೊಡುಗಿಯ ಪರಕಾಯ ಪ್ರವೇಶ ಮಾಡಿ, ಅವಳ ಭಾವನೆಗಳನ್ನೆಲ್ಲ ತಡಕಾಡಿ, ಸಾಮಾಜಿಕ ಬಂಧನದಲ್ಲಿ ತನ್ನ ಪ್ರೇಮ ನಿವೇದನೆಯನ್ನು ನೇರವಾಗಿ ಮಾಡಲಾಗದೇ ಪತ್ರ ಮುಖೇನ ಬರೆಯುವ ತಂತ್ರವನ್ನು ಬಳಸಿ, ಓದುಗರನ್ನ ತುದಿಗಾಲ ಮೇಲೆ ನಿಲ್ಲಿಸಿ ಒಂದೇ ಗುಕ್ಕಿಗೆ ಓದುವಂತೆ ಮಾಡುವ ಜಾಗೃ ಈ ಕೃತಿಯಲ್ಲಿದೆ.

ಕ್ಯಾಂಪಸ್ಸಿಗೆ ಸೇರಿದ ಹುಡುಗಿಯೊಬ್ಬಳು ತನ್ನ ಸಹಪಾಠಿಯೊಂದಿಗೆ ಬೆಳೆಸಿಕೊಳ್ಳುವ ಅನಿರ್ವಚನೀಯ ಭಾವನೆಗಳು ಕ್ರಮೇಣ ಗಟ್ಟಿಯಾಗುತ್ತಾ ಹೋದರೂ, ತನ್ನ ಮನದಾಳವನ್ನು ದಾಟಗೊಡದೇ ತನ್ನ ಎಲ್ಲೆಯೊಳಗೆ ಸೀಮಿತಗೊಳ್ಳುವುದನ್ನ ಮಾರ್ಮಿಕವಾಗಿ ಲೇಖಕರು ಇಲ್ಲಿ ಚಿತ್ರಿಸಿದ್ದಾರೆ. ಇದು ಎಂಭತ್ತರ ದಶಕದ ಕಥೆಯಾದ್ದರಿಂದ ಮೊಬೈಲಿನ ಆಟಾಟೋಪ ಇಲ್ಲದಿರುವುದರಿಂದ ಮನಸ್ಸಿನ ಭಾವನೆಗಳಿಗೆ ಒಂದು ಚೌಕಟ್ಟನ್ನು ನಿರ್ಮಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಪಿ.ಜಿ. ತರಗತಿಗಳು ಆರಂಭವಾದಾಗಿನಿಂದ, ವಿದ್ಯಾರ್ಥಿ ಸಂಘದ ಚುನಾವಣೆ, ಪಿಕ್‌ನಿಕ್ ಇವೆಲ್ಲವುಗಳ ಹಿನ್ನೆಲೆಯಲ್ಲಿ ಕಥೆ ಸರಾಗವಾಗಿ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ.

ಆದರೆ, ಮುನ್ನುಡಿ ಬರೆದ ಅನಂತಮೂರ್ತಿ ಅವರು ತರ್ಕಿಸಿದಂತೆ, ಅಂತ್ಯದ ಒಂದೂವರೆ ಪುಟದ ಕಥೆ, ಅಂದರೆ ಆಕೆಯ ಮದುವೆ ಸಂದರ್ಭದಲ್ಲಿ ಹೀಗೆ ಬರೆದ ಪತ್ರದ ಹಾಳೆಗಳನ್ನೆಲ್ಲ ಹರಿದು ಕಿಟಕಿಯಾಚೆಗೆ ಎಸೆಯುವ ಪ್ರಸಂಗ ಇಲ್ಲದೇ ಇದ್ದಿದ್ದರೂ ಕಥೆಗೆ, ಭಾವನೆಗಳಿಗೆ ಯಾವುದೇ
 ಧಕ್ಕೆಯಾಗುತ್ತಿರಲಿಲ್ಲವೆನಿಸುತ್ತದೆ. ಹೀಗೆ ಹೆಣ್ಣೂಬ್ಬಳ ಆತ್ಮನಿವೇದನೆಯ ಈ ಕಾದಂಬರಿಯನ್ನು ಓದಿನ ನಂತರ ಮಾನಸ ಗಂಗೋತ್ರಿಯಲ್ಲಿ ಅಡ್ಡಾಡುವ ಪ್ರತಿಯೊಬ್ಬ ಹೆಣ್ಣುಮಗಳಲ್ಲೂ ಒಬ್ಬ ಸುವರ್ಣಳು ಹಾ.ಮಾ. ನಾಯಕರಿಗೆ ಕಂಡಂತೆ ತಮ್ಮನ್ನೂ ಕಾಡುವುದು ಈ ಕಾದಂಬರಿಯ ಸಕ್ಸಸ್ ಎಂದು ನಾನೂ ಭಾವಿಸುತ್ತೇನೆ.

(ಕೃಪೆ : ಪುಸ್ತಕಲೋಕ, ಬರಹ : ಕಂನಡಿಗಾ ನಾರಾಯಣ)

Related Books