ಪುರಾಣ ಕಾವ್ಯಗಳಲ್ಲಿನ ಸಾಂಪ್ರದಾಯಿಕ ಚೌಕಟ್ಟು ಲೇಖಕಿ ವಸುಂಧರಾ ಕದಲೂರು ‘ನೇಪಥ್ಯದ ನಿಲುವುಗನ್ನಡಿ’ ಕೃತಿಯ ಪ್ರತಿಷ್ಠಾಪಿತವಾದ ಪಾತ್ರಗಳಿಗೆ ಹೊಸ ವ್ಯಾಖೆಯನ್ನು ನೀಡಿದೆ. ಇಲ್ಲಿನ ಕವಿತೆಗಳನ್ನು ಮೇಲುನೋಟಕ್ಕೆ ‘ಸ್ತ್ರೀವಾದಿ’ ನೆಲೆಯ ಕವಿತೆಗಳ ಸಾಲಿಗೆ ಸರಳವಾಗಿ ಸೇರಿಸಲುಬಹುದು. ವ್ಯಕ್ತಿಗತ ನೆಲೆಯ ಅನುಭವಗಳು ಬದುಕಿನಲ್ಲಿ ಘಟಿಸಿದ ಬೆಳೆಯ ಫಲಗಳು; ಒಕ್ಕಿದ ಕಾಳುಗಳು ಇಲ್ಲಿನ ಕವಿತೆಗಳು ಎನ್ನಬಹುದು. ಮನುಷ್ಯನ ಬದುಕಿನಲ್ಲಿ ಶ್ರಮವಿಲ್ಲದೇ ಏನನ್ನೂ ಸಾಧಿಸಲಾಗದು. ಅನ್ಯರ ಶ್ರಮದ ಫಲವನ್ನು ವಂಚನೆಯಲ್ಲಿ ತನ್ನದಾಗಿಸಿಕೊಂಡರೆ, ಅದು ಅನ್ನವಲ್ಲ; ಅಮೇಧ್ಯ. ತನ್ನ ಶ್ರಮದ ಫಲವನ್ನು ತಾನೇ ತಿನ್ನುವಾಗ ಅದು ಅಮೃತದಂತೆ ಆನಂದವೀಯುತ್ತದೆ. ಅನ್ಯರ ಶ್ರಮದ ಫಲವನ್ನು ತನ್ನ ಹೋದರೆ ಅದು ಅರಗಲಾಗದ ವಿಷ, ಕಸ. ಇದು ಸೂಕ್ಷ್ಮ ಮತಿಗಳಾಗಿರುವವರಿಗೆ ಅನ್ವಯಿಸುವ ‘ಅನ್ನ ತತ್ವ’, ಸೂಕ್ಷ್ಮ ಮತಿಗಳಲ್ಲದವರಿಗೆ ಕಸವೇ ರಸ. ಅಮೇಧ್ಯವೇ ಮೇಧ್ಯ. ಆದರೆ, ಅದು ಬದುಕಲ್ಲ; ಬದುಕಿನ ದಾರಿಯೂ ಅಲ್ಲ. ಬದುಕಿನ ದಾರಿಯೆಂಬುದು ಬೆಳಕಿನ ದಾರಿ. ಬೆವರ ಪದದ ದಾರಿ. ಅದು ಕವಿತೆಯ ದಾರಿಯೂ ಕೂಡ. ‘ಕವಿತೆ ಹುಟ್ಟುವುದೆಂದರೆ’ ಎಂಬ ಕವಿತೆಯಲ್ಲಿ ಕಾವ್ಯ ತತ್ವ ಮತ್ತು ಜೀವ ತತ್ವಗಳ ಜಿಜ್ಞಾಸೆಯನ್ನು ಸಮೀಕರಣ ಭಾವದಲ್ಲಿ ಹರಿಸಿದ್ದಾರೆ. ಒಟ್ಟಾರೆಯಾಗಿ ಇಲ್ಲಿನ ಕವಿತೆಗಳು ಎಚ್ಚರದ ಗತಿಯ ಹೆಜ್ಜೆ ಪಯಣದ ಜೊತೆಗೆ ಸಾಗಿದೆ.