ಲೇಖಕ, ಕವಿ ಬಸವರಾಜ ಸೂಳಿಭಾವಿ (ಬಸೂ) ಅವರು ಬರೆದಿರುವ ’ತೇವ ಕಾಯುವ ಬೀಜ ’ ಕವನ ಸಂಕಲನವು ಅಪೂರ್ವವಾದ ಕೃತಿ. ಒಂದು ಆಕಸ್ಮಿಕ ವಸ್ತು ವಿಷಯವನ್ನು ಪದ್ಯವಾಗಿಸಿ, ಅದನ್ನು ಸಂಕಲನಗೊಳಿಸಿ ಮುಂದಿಡುವುದು ಬಸೂ ಅವರ ಕಾವ್ಯದ ವಿದ್ಯಮಾನವೆನ್ನಬಹುದು.
ಇವರ ಕಾವ್ಯ ರಚನೆಯೇ ಒಂದು ರೂಪಕಾವಸ್ಥೆಯಾಗಿದೆ. ಕವಿಯು ಖಾಸಗಿ ಸಂವಾದದೊಂದಿಗೆ, ಲೋಕವನ್ನೂ, ಮುನ್ನೆಲೆಗೆ ತಂದು ಸಂಬಂಧಗಳನ್ನು ಸಮಾಜಮುಖಿಯಾಗಿಸುವ ಬೌದ್ಧಿಕ ನಿಲುವನ್ನು ಇಲ್ಲಿ ಕಾಣಬಹುದು.
ಸಾಂಸ್ಕೃತಿಕ -ಸಾಮಾಜಿಕ ಜವಾಬ್ದಾರಿಗಳಲ್ಲಿ ಮುಳುಗಿದಾಗಲೂ ಸಂವೇದನೆಯನ್ನು ಕಾವ್ಯಾತ್ಮಕ ಕ್ರಿಯೆಗೆ ಸಜ್ಜುಗೊಳಿಸುವ ಸೂಕ್ಷ್ಮತೆಯನ್ನು ಬಸೂ ಅವರು ಕಾಪಿಟ್ಟಿದ್ದಾರೆ. ಬಸೂ ಕನ್ನಡಕ್ಕೊಂದು ಭಾವದೀಪ್ತ ಕಾವ್ಯ ನೀಡಿದ್ದಾರಷ್ಟೇ ಅಲ್ಲ, ಕಾವ್ಯವನ್ನು ಅದರ ಸ್ವಾಭಾವಿಕ ನೆಲೆಗೆ ಮತ್ತೆ ತಂದಿದ್ದಾರೆ.
.ಬಸವರಾಜ ಸೂಳಿಭಾವಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ರೂಡಗಿ ಗ್ರಾಮದವರು. ಆದರೆ ಈಗ ಧಾರವಾಡ ನಿವಾಸಿ. ಕರ್ನಾಟಕ ವಿ.ವಿ.ಯಿಂದ ಎಂ.ಎ. ಪದವೀಧರರು. ‘ಲಡಾಯಿ’ ಎಂಬ ವಾರಪತ್ರಿಕೆ ಆರಂಭಿಸಿದ್ದರು. ಸದ್ಯ ಲಡಾಯಿ ಪ್ರಕಾಶನ ನಡೆಸುತ್ತಿದ್ದಾರೆ. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ತೇವ ಕಾಯುವ ಬೀಜ-ಇವರ ಕವನ ಸಂಕಲನ.ಗೌರಿ ನೋಟ (ಲೇಖನಗಳ ಸಂಪಾದನಾ ಕೃತಿ). ...
READ MORE