ದಕ್ಷಿಣ ಕನ್ನಡದ ಶತಮಾನದ ಕಾವ್ಯ : 1900-2000

Author : ಬಿ. ಜನಾರ್ದನ ಭಟ್

Pages 464

₹ 300.00




Year of Publication: 2001
Published by: ಕನ್ನಡ ಸಂಘ ಕಾಂತಾವರ (ರಿ.)
Address: ಕಾಂತಾವರ

Synopsys

ಬಿ. ಜನಾರ್ದನ ಭಟ್ ಅವರ ಸಂಪಾದಿತ ಗ್ರಂಥ ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ : 1900-2000’ . ಕೃತಿಯ ಬಗ್ಗೆ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ : ‘ಈ ಆ್ಯಂಥಾಲಜಿಯನ್ನು ಸಂಪಾದಿಸಿರುವವರು ಬಿ. ಜನಾರ್ದನ ಭಟ್. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯ ಎರಡನ್ನೂ ವಿಶೇಷವಾಗಿ ಅಧ್ಯಯನ ಮಾಡಿರುವ ಭಟ್ಟರು ಈಗಾಗಲೇ ತಮ್ಮ ವಿಮರ್ಶೆ, ಅನುವಾದ, ರೂಪಾಂತರ, ವೈಚಾರಿಕ ಕೃತಿಗಳಿಂದ ಮತ್ತು ಪತ್ರಿಕಾ ವಿಮರ್ಶೆಗಳಿಂದ ಹೆಸರಾಗಿದ್ದಾರೆ. ಇಂಥ ಒಂದು ಕಾವ್ಯಗ್ರಂಥವನ್ನು ಸಂಪಾದಿಸಲು ಅಗತ್ಯವಾದ ಸಾಹಿತ್ಯ ಸಂಸ್ಕಾರದ ಹಿನ್ನೆಲೆ ಅವರಿಗಿದೆ. ಆ್ಯಂಥಾಲಜಿಯೊಂದರ ಸಮರ್ಪಕ ಸಂಪಾದನೆ ಮಹತ್ವದ ವಿಮರ್ಶಕನ ಕರ‍್ಯವೂ ಹೌದು. ಕವಿಯ ಮತ್ತು ಕವಿತೆಗಳ ಆಯ್ಕೆ, ಒಬ್ಬೊಬ್ಬ ಕವಿಗೂ ನೀಡುವ ಸ್ಥಳಾವಕಾಶ ಇಲ್ಲೆಲ್ಲ ಕೆಲಸ ಮಾಡುವುದು ಸಂಪಾದಕನ ವಿಮರ್ಶಾಪ್ರಜ್ಞೆಯೇ. ಅವನ ಬುದ್ಧಿ ಪಕ್ಷಪಾತಗಳ ಪ್ರವಾಹಕ್ಕೆ ಬೀಳದೆ ತಟಸ್ಥವಾಗಬೇಕು. ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದನ್ನು ಹಿಂದಿನ ಆ್ಯಂಥಾಲಜಿಗಳು ತೋರಿಸಿಕೊಟ್ಟಿವೆ. ಹಿಂದಿನ ಸಂಗ್ರಹಗಳ ತಪ್ಪನ್ನು ಇಲ್ಲಿ ತಿದ್ದಿದರೆ ಸಾಲದು, ಆ ತಿದ್ದುಪಾಟನ್ನು ತರ್ಕಬದ್ಧವಾಗಿ ಪ್ರತಿಪಾದಿಸಬೇಕು. ಇಂಥ ಕಾವ್ಯ ಸಂಗ್ರಹ ಯಾರೋ ಒಬ್ಬ ಕವಿಯದಾಗಿರದೆ ಒಂದು ಶತಮಾನದ ಕವಿಗಳನ್ನೆಲ್ಲ ಒಟ್ಟಿಗಿಟ್ಟು ರೂಪಿಸಲು ಒಂದು ಕಾವ್ಯಾವಲೋಕನ. ಇಂಥಲ್ಲಿ ಬೇರೆ ಬೇರೆ ನೆಲೆಯ ಕವಿಗಳಿರುವುದು ಸಹಜ. ಯೇಟ್ಸ್, ಎಲಿಯಟ್‌ರ ಎತ್ತರಕ್ಕೇರುವ ಗೋಪಾಲಕೃಷ್ಣ ಅಡಿಗರಂಥ ಅಂತಾರಾಷ್ಟ್ರೀಯ ನೆಲೆಯ ಕವಿಗಳ ಜೊತೆಗೆ ಈಗಷ್ಟೆ ಹೊಸ ಹುರುಪಿನಿಂದ ಬರೆಯತೊಡಗಿರುವ ರಾಧಾಕೃಷ್ಣ ಬೆಳ್ಳೂರರಂಥವರೂ ಇರುತ್ತಾರೆ. ಎರಡು ನೆಲೆಗಳಲ್ಲೂ ಪ್ರಕಟವಾಗುತ್ತಿರುವುದು ಕಾವ್ಯಸತ್ವವೇ ಆದರೂ ಸಂವೇದನೆ, ಕಾಣ್ಕೆ ಮತ್ತು ಅಭಿವ್ಯಕ್ತಿಗಳಲ್ಲಿ ತರತಮಗಳಿರುತ್ತವೆ. ಇಂಥ ಅಂಶಗಳನ್ನೆಲ್ಲ ಗಮನದಲ್ಲಿಟ್ಟು ಸಂಪಾದನೆಯನ್ನು ತಕ್ಕ ರೀತಿಯಲ್ಲಿ ನಿರ್ವಹಿಸಲು ಸೂಕ್ಷ್ಮ ಕಾವ್ಯಗ್ರಹಿಕೆ, ವಿಮರ್ಶನ ಶಕ್ತಿಗಳ ಜೊತೆಗೆ ತನ್ನ ಗ್ರಹಿಕೆಗಳನ್ನು ಮುಕ್ತವಾಗಿ ಪ್ರತಿಪಾದಿಸುವ ಧೈರ್ಯ ಆತ್ಮವಿಶ್ವಾಸಗಳೂ ಸಂಪಾದಕನಿಗೆ ಅಗತ್ಯ.ಜನಾರ್ದನ ಭಟ್ಟರು ಈ ಎಲ್ಲ ಗುಣಗಳನ್ನೂ ಬಹುಮಟ್ಟಿಗೆ ಪಡೆದಿರುವುದು ಅವರ ಕವಿತೆಗಳ ಆಯ್ಕೆ ಮತ್ತು ಮುನ್ನುಡಿಯ ಬರೆಹದಿಂದ ವ್ಯಕ್ತವಾಗುತ್ತದೆ. ಇಲ್ಲಿ ಆಯ್ಕೆಗೊಂಡ ಕವಿಗಳಲ್ಲಿ ಪಂಜೆ, ಅಡಿಗ, ಚೊಕ್ಕಾಡಿ, ರಾಧಾಕೃಷ್ಣ ಬೆಳ್ಳೂರ್ ಹೀಗೆ ನಾಲ್ಕು ಪೀಳಿಗೆಯ 117 ಜನ ಕವಿಗಳ 178 ಕವಿತೆಗಳಿವೆ. ಒಂದು ಜಿಲ್ಲೆಯ ಕಾವ್ಯ ಸಂಪತ್ತಿನ ವ್ಯಾಪ್ತಿಯನ್ನು, ವೈವಿಧ್ಯವನ್ನು ತೋರಿಸುವ ಉದ್ದೇಶ ಸಂಪಾದಕರಿಗಿರುವುದರಿಂದ ಇದು ಉದಾರವಾದ ಆಯ್ಕೆಯಾದರೂ ಔಚಿತ್ಯಪೂರ್ಣವಾಗಿದೆ ಎಂಬುದಾಗಿ ಹೇಳಿದ್ದಾರೆ’ ಎಂಬುದಾಗಿ ಬರೆದಿದ್ದಾರೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books